ತಿಂದಿದ್ದನ್ನು ತೇಗಲು ಬಂದಿದ್ದ ಪಿಡಿಒಗೆ ಗ್ರಾಮಸ್ಥರ ದಿಗ್ಬಂದನ!
ಗ್ರಾಮ ಪಂಚಾಯ್ತಿಗೆ ಪಿಡಿಒ ಅಕ್ರಮ ಪ್ರವೇಶ! ದಾಖಲೆ ತಿದ್ದುಪಡಿ ಮಾಡಲೆತ್ನಿಸಿದ ಪಿಡಿಒ! ಅಕ್ರಮ ಎಸಗಿ ವರ್ಗಾವಣೆಗೊಂಡಿದ್ದ ನಾಗರಾಜು! ಪಿಡಿಒ ನಡೆ ಖಂಡಿಸಿ ಗ್ರಾಮಸ್ಥರಿಂದ ಪ್ರತಿಭಟನೆ
ಮಂಡ್ಯ(ಆ.5): ಅಕ್ರಮ ಎಸಗಿದ ಆರೋಪದ ಮೇಲೆ ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದ ಪಿಡಿಒ ಓರ್ವ, ಗ್ರಾಮ ಪಂಚಾಯ್ತಿ ಕಚೇರಿಗೆ ನುಗ್ಗಿ ದಾಖಲೆ ತಿದ್ದುಪಡಿ ಮಾಡಲೆತ್ನಿಸಿದ ಘಟನೆ ನಡೆದಿದೆ.
ಇಲ್ಲಿನ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾ.ಪಂ. ಪಿಡಿಒ ಆಗಿದ್ದ ನಾಗರಾಜು, ಅಕ್ರಮ ಎಸಗಿದ ಆರೋಪದ ಮೇಲೆ ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದ. ಆದರೆ ವಿರುದ್ದದ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ ನಾಗರಾಜು, ಈ ಹಿಂದೆ ಕೆಲಸ ಮಾಡುತ್ತಿದ್ದ ಗ್ರಾ.ಪಂ. ಕಚೇರಿಗೆ ನುಗ್ಗಿ ದಾಖಲೆ ತಿದ್ದುಪಡಿ ಮಾಡಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.
ಕ್ಯಾತನಹಳ್ಳಿ ಗ್ರಾ.ಪಂ. ಸಿಬ್ಬಂದಿ ಕೆಲಸ ಮುಗಿಸಿ ತೆರಳಿದ ಮೇಲೆ ಹೊಸ ಪಿಡಿಒದಿಂದ ಕೀ ಪಡೆದ ನಾಗರಾಜು, ದಾಖಲೆಗಳನ್ನು ತಿರುಚಲು ಪ್ರಯತ್ನಿಸಿದ್ದಾನೆ. ನಾಗರಾಜು ನಡೆಯಿಂದ ಅನುಮಾನಗೊಂಡ ಗ್ರಾಮಸ್ಥರು ಕಚೇರಿಗೆ ತೆರಳಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾಗರಾಜು ನಡೆ ಖಂಡಿಸಿ ಆತನಿಗೆ ಘೇರಾವ್ ಹಾಕಿದ ಗ್ರಾಮಸ್ಥರು, ಮೇಲಾಧಿಕಾರಿಗಳಿಗೆ ಕರೆ ಮಾಡಿದರೂ ಯಾರೂ ಅತ್ತ ಸುಳಿಯಲಿಲ್ಲ. ಮೇಲಾಧಿಕಾರಿಗಳ ವರ್ತನೆ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ಕೂಡ ನಡೆಸಿದರು.