ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿಯನ್ನು ಒಪ್ಪಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಸಮಿತಿಯಲ್ಲಿಯೇ ಎರಡು ಬಣಗಳಾಗಿವೆ. ಯತ್ನಾಳ್‌ ಹಾಗೂ ಕಾಶಪ್ಪನವರ ಬೆಂಬಲಿಗರ ನಡುವೆ ಭಾರಿ ಜಟಾಪಟಿ ನಡೆದಿದೆ.

ಬೆಂಗಳೂರು (ಮಾ.25): ಲಿಂಗಾಯತ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟಕ್ಕೆ ಮಣಿದ ಸರ್ಕಾರ ಪ್ರತ್ಯೇಕ 2ಡಿ ಮೀಸಲಾತಿ ನೀಡಿದೆ. ಈ ಕುರಿತು ನಡೆದ ವಿಜಯೋತ್ಸವ ಸಭೆಯಲ್ಲಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರದ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸಿದರೆ, ಪಂಚಮಸಾಲಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಇದಕ್ಕೆ ತಮ್ಮ ಒಪ್ಪಿಗೆಯಿಲ್ಲವೆಂದು ಸಭೆಯನ್ನು ಧಿಕ್ಕರಿಸಿ ಹೊರಟರು.

Add Asianetnews Kannada as a Preferred SourcegooglePreferred

ರಾಜ್ಯ ರಾಜಧಾನಿಯಲ್ಲಿ ಕಳೆದ 70 ದಿನಗಳಿಂದ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗದ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡಲಾಗುತ್ತಿತ್ತು. ತೀವ್ರ ಹೋರಾಟಕ್ಕೆ ಮಣಿದಿದ್ದ ಸರ್ಕಾರ ಪಂಚಮಸಾಲಿ ಸಮುದಾಯವನ್ನು 3ಬಿಯಿಂದ 2ಡಿಗೆ ಮೀಸಲಾತಿ ನೀಡಿದೆ. ಈ ಮೀಸಲಾತಿ ಜಯವನ್ನು ಆಚರಣೆ ಮಾಡುವ ಉದ್ದೇಶದಿಂದ ಸುಮಾರು 2 ತಿಂಗಳಿಗಿಂತ ಅಧಿಕ ಕಾಲ ನಡೆದ ಹೋರಾಟಕ್ಕೆ ಸರ್ಕಾರ ಮಣಿದಿದ್ದು, ನಮಗೆ ಜಯ ಲಭಿಸಿದೆ ಎಂದು ಕೂಡಲಸಂಗಮ ಪಂಚಮಸಾಲಿ ಮಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. 

Breaking, Reservation: ಪಂಚಮಸಾಲಿ ಲಿಂಗಾಯತಕ್ಕೆ 7% ಮೀಸಲಾತಿ ಘೋಷಣೆ, ಮುಸ್ಲಿಂ ಮೀಸಲಾತಿಗೆ ಕೋಕ್!

ಯತ್ನಾಳ್‌, ಕಾಶಪ್ಪನವರ ಬೆಂಬಲಿಗರ ಜಗಳ: ಮೀಸಲಾತಿ ಸಂಬಂಧಪಟ್ಟಂತೆ ಸರ್ಕಾರದ ತೀರ್ಮಾನವನ್ನು ಒಪ್ಪಿಕೊಳ್ಳುವ ಬಗ್ಗೆ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಹಾಗೂ ವಿಜಯಾನಂದ್ ಕಾಶಪ್ಪನವರ್ ಬೆಂಬಲಿಗರ ಮಧ್ಯೆ ಜಗಳ ನಡೆದಿದೆ. ಜಯ ಮೃತ್ಯುಂಜಯ ಸ್ವಾಮೀಜಿ ಮುಂದೆಯೇ, ಕಾಶಪ್ಪನವರ್ ಮತ್ತು ಯತ್ನಾಳ್ ಮುಂದೆ ಕಾರ್ಯಕರ್ತರ ಜಟಾಪಟಿ ನಡೆಸಿದ್ದಾರೆ. ಇನ್ನು ಎಲ್ಲರನ್ನ ಸಮಾಧಾನ ಪಡಿಸುವ ಪ್ರಯತ್ನ ಮಾಡಿದ ಜಯಮೃತ್ಯುಂಜಯ ಸ್ವಾಮಿಜಿ ಸರ್ಕಾರದ ಆದೇಶವನ್ನು ನೋಡಿ ನಿಮ್ಮೊಂದಿಗೆ ಮಾತನಾಡುತ್ತೇವೆ. ಇಲ್ಲಿ ರಾಜಕೀಯ ನಿರ್ಧಾರ, ನಿಲುಗಳನ್ನ ನಾವು ಮಾತನಾಡಬೇಡಿ ಎಂದು ಸ್ವಾಮೀಜಿ ಹೇಳಿ ಜಗಳ ತಿಳಿಗೊಳಿಸಿದರು.

ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ: ವಿಜಯಾನಂದ ಕಾಶಪ್ಪನವರ ಮಾತನಾಡಿ, ಮಿಸಲಾತಿ ವಿಚಾರದಲ್ಲಿ ಸ್ವಾಮೀಜಿ ಮೇಲೆ ಒತ್ತಡ ತಂದಿದ್ದಾರೆ‌‌. ಈ ಮೀಸಲಾತಿ ನಮ್ಮಗೆ ತೃಪ್ತಿ ತಂದಿಲ್ಲ. ರಾಜಕೀಯ ಪ್ರೇರಿತವಾಗಿ ಹಾಗೂ ಚುನಾವಣೆ ಕುತಂತ್ರ ಮೀಸಲಾತಿ ಆಗಿದೆ. ಬಿಜೆಪಿ ಮತ್ತೆ ನಮ್ಮ ಸಮುದಾಯಕ್ಕೆ ಮೋಸ ಮಾಡಿದೆ. ಬೇರೆ ಸಮುದಾಯದ ಮೀಸಲಾತಿಯನ್ನು ಕಿತ್ತು ನಮ್ಮ ಗೆ ಕೊಟ್ಟಿದ್ದಾರೆ. ಮುಸ್ಲಿಂ ವಿರುದ್ಧ ಲಿಂಗಾಯತ ದ್ವೇಷ ಕಟ್ಟೋದಕ್ಕೆ ಹೊರಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ರಾಜಿನಾಮೆ ಕೊಟ್ಟಿದೇನೆ. ಸರ್ಕಾರದ ಆದೇಶದ ಬಂದ ನಂತರ ಮುಂದಿನ ಹೋರಾಟದ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಹೋರಾಟ ತಾತ್ಕಾಲಿಕ ಸ್ಥಗಿತ ಎಂದ ಸ್ವಾಮೀಜಿ: ಜಯಮೃತ್ಯುಂಜಯ ಸ್ವಾಮಿಸಿ ಮಾತನಾಡಿ, ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಮನವಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಸರ್ಕಾರ ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳದೇ ಇದ್ದಾಗ ಪಾದಯಾತ್ರೆ ನಡಿಸಿದ್ದೆವು. ಆಡಳಿತ ಪಕ್ಷದಲ್ಲಿ ಇದ್ರೂ ಯತ್ನಾಳ್ ಪಾದಯಾತ್ರೆಗೆ ಸಹಕಾರ ನೀಡಿದ್ದು, ನಮ್ಮ‌ಕೂಗನ್ನ ಸರ್ಕಾರಕ್ಕೆ ಮುಟ್ಟಿಸಿದ್ದರು. ಬೊಮ್ಮಾಯಿ ಕೂಡ 6 ಬಾರಿ ಮಾತುಕೊಟ್ಟು ತಪ್ಪಿದ್ದರು. ಸಿಎಂ ಬೊಮ್ಮಾಯಿ ತಾಯಿ ಮೇಲೆ‌ ಆಣೆ ಮಾಡಿದ್ರೂ ಮಾತು ಈಡೇರಿಸಿರಲಿಲ್ಲ. ಕೊನೆಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ, ಕೋರ್ಟ್‌ ಸ್ಟೇ ತೆರವುಗೊಂಡು, ಈಗ ನಮ್ಮ ಬೇಡಿಕೆ ಈಡೇರಿದೆ ಎಂದರು.

ಪಂಚಮಸಾಲಿ ಮೀಸಲು ಬಗ್ಗೆ ನಾಡಿದ್ದು ನಿರ್ಧಾರ?

ಕೇಂದ್ರದಲ್ಲಿ ಒಬಿಸಿಗೆ ಸೇರಿಸಲು ಹೋರಾಟ: ಮೋದಿ, ಅಮಿತ್‌ ಶಾ, ಶೋಭಾ ಕರಂದ್ಲಾಜೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಹಕಾರ ನೀಡಿದ ಹೆಚ್.ಡಿ. ಕುಮಾರಸ್ವಾಮಿಗೂ ಧನ್ಯವಾದ. ಸರ್ಕಾರದ ಅಧಿಸೂಚನೆ ಪಡೆದು ಕೂಡಲಸಂಗಮಕ್ಕೆ ವಾಪಸ್ಸಾಗುತ್ತೇನೆ. ಇಂದಿನಿಂದ ನಮ್ಮ ಹೋರಾಟವನ್ನ ತಾತ್ಕಲಿಕವಾಗಿ ಸ್ಥಗಿತಗೊಳಿಸುತ್ತೇವೆ. ಮುಂದಿನ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇಂದ್ರದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಒಬಿಸಿ ಮೀಸಲಾತಿ ನೀಡುವ ಬಗ್ಗೆ ಹೋರಾಟ ಮಾಡಲಾಗುವುದು ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.