ಕರ್ನಾಟಕವು ಪಂಚಾಯತ್ ರಾಜ್ ವಿಕೇಂದ್ರೀಕರಣದ ಸೂಚ್ಯಂಕದಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಹಣಕಾಸು ನಿರ್ವಹಣೆ, 15ನೇ ಹಣಕಾಸು ಆಯೋಗದ ಅನುದಾನ ಬಳಕೆ ಮತ್ತು ಪಾರದರ್ಶಕತೆಯಲ್ಲಿಯೂ ಮುಂಚೂಣಿಯಲ್ಲಿದೆ.
ಬೆಂಗಳೂರು (ಫೆ.17): ಹಳ್ಳಿಗಳ ಸಬಲೀಕರಣಕ್ಕೆ ಜಾರಿಗೆ ತಂದಿರುವ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹತ್ತು ಹಲವು ಪ್ರಗತಿಪರ ಯೋಜನೆ, ಕಾರ್ಯಕ್ರಮ ಜಾರಿಗೆ ತರುತ್ತಿರುವ ಕರ್ನಾಟಕ ಪ್ರಸ್ತುತ ಇಡೀ ದೇಶದಲ್ಲಿ ಪಂಚಾಯತ್ರಾಜ್ ವಿಕೇಂದ್ರೀಕರಣದ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ.
ಇದಲ್ಲದೆ ಹಣಕಾಸು ಮತ್ತು ಉತ್ತರದಾಯಿತ್ವ, ಪರಿಣಾಮಕಾರಿ ಆರ್ಥಿಕ ವಿಕೇಂದ್ರೀಕರಣ, ಸಕಾಲದಲ್ಲಿ ಅನುದಾನ ಬಿಡುಗಡೆ, ಪರಿಣಾಮಕಾರಿಯಾಗಿ 15ನೇ ಹಣಕಾಸು ಆಯೋಗದ ಅನುದಾನ ಬಳಕೆ, ಬಲಿಷ್ಠ ಗ್ರಾಮಸಭೆ ಮತ್ತು ಸಾಮಾಜಿಕ ಆಡಿಟ್ ಕ್ಷೇತ್ರದಲ್ಲೂ ಸಹ ಉತ್ತಮ ಸ್ಥಾನ ಪಡೆದಿದೆ.
ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಮತ್ತು ಪಂಚಾಯತ್ ರಾಜ್ ಸಚಿವಾಲಯ ನಡೆಸಿರುವ 2023-24ನೇ ಸಾಲಿನ ಅಧ್ಯಯನದ ವರದಿಯಲ್ಲಿ ಕರ್ನಾಟಕದ ಸಾಧನೆ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಕಲಬುರಗಿ ಹೈಕೋರ್ಟ್ ಫೈವ್ಸ್ಟಾರ್ ಹೋಟೆಲ್ನಂತಿದೆ:ನ್ಯಾ। ಓಕಾ ಮೆಚ್ಚುಗೆ!
ಪಂಚಾಯತ್ ರಾಜ್ ಸಚಿವಾಲಯ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವರಾದ ಪ್ರೊ.ಎಸ್.ಪಿ. ಸಿಂಗ್ ಬಘೇಲ್ ಅವರು ‘ರಾಜ್ಯಗಳಲ್ಲಿ ಪಂಚಾಯತಿಗಳಿಗೆ ಅಧಿಕಾರ ವಿಕೇಂದ್ರೀಕರಣದ ಸ್ಥಿತಿ-ಸೂಚಕ ಸಾಕ್ಷ್ಯಾಧಾರಿತ ಶ್ರೇಯಾಂಕ’ ಎಂಬ ವರದಿಯನ್ನು ಭಾನುವಾರ ದೆಹಲಿಯಲ್ಲಿ ಬಿಡುಗಡೆ ಮಾಡಿದರು.
ಒಟ್ಟಾರೆ ಪಂಚಾಯತ್ ವಿಕೇಂದ್ರೀಕರಣ ಸೂಚ್ಯಂಕ ಮತ್ತು ಚೌಕಟ್ಟು, ಕಾರ್ಯಗಳು, ಹಣಕಾಸು, ಕಾರ್ಯಕರ್ತರು, ಸಾಮರ್ಥ್ಯ ವರ್ಧನೆ ಹಾಗೂ ಉತ್ತರದಾಯಿತ್ವ ಅಂಶಗಳ ಮೇಲೆ ಶ್ರೇಯಾಂಕ ನೀಡಲಾಗಿದೆ. ವಿಕೇಂದ್ರೀಕರಣದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದ್ದರೆ, ಕೇರಳ ದ್ವಿತೀಯ, ತಮಿಳುನಾಡು ತೃತೀಯ, ಮಹಾರಾಷ್ಟ್ರ ನಾಲ್ಕನೆ ಹಾಗೂ ಉತ್ತರ ಪ್ರದೇಶ ಐದನೇ ಸ್ಥಾನ ಪಡೆದಿದೆ.
ಕಾರ್ಯನಿರ್ವಹಣೆ ವಿಕೇಂದ್ರೀಕರಣದಲ್ಲಿ ತಮಿಳುನಾಡು ಮೊದಲ ಸ್ಥಾನ ಪಡೆದಿದ್ದರೆ, ಕರ್ನಾಟಕ, ಒಡಿಶಾ, ಕೇರಳ, ರಾಜಸ್ಥಾನ ಹಾಗೂ ಉತ್ತರಪ್ರದೇಶ ಕ್ರಮವಾಗಿ 2, 3, 4 ಮತ್ತು 5ನೇ ಸ್ಥಾನ ಪಡೆದಿದೆ. ಅದೇ ರೀತಿ ಹಣಕಾಸು ನಿರ್ವಹಣೆಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದ್ದರೆ, ಕೇರಳ, ತ್ರಿಪುರ, ತಮಿಳುನಾಡು ಕ್ರಮವಾಗಿ 2,3 ಮತ್ತು 4ನೇ ಸ್ಥಾನ ಪಡೆದಿದೆ.
ಸಿಬ್ಬಂದಿ ನಿರ್ವಹಣೆ ಮತ್ತು ಸಾಮರ್ಥ್ಯವರ್ಧನೆಯಲ್ಲಿ ಗುಜರಾತ್ ಮೊದಲ ಸ್ಥಾನ ಗಳಿಸಿದ್ದರೆ, ತಮಿಳುನಾಡು, ಕೇರಳ ಹಾಗೂ ಕರ್ನಾಟಕ ಕ್ರಮವಾಗಿ 2,3, ಮತ್ತು 4ನೇ ಸ್ಥಾನ ಗಳಿಸಿದೆ. ಆದರೆ ಸಾಂಸ್ಥಿಕ ವರ್ಧನೆಯಲ್ಲಿ ಕರ್ನಾಟಕ 11ನೇ ಸ್ಥಾನಕ್ಕೆ ಕುಸಿದಿದೆ. ನೆರೆಯ ತೆಲಂಗಾಣ, ತಮಿಳುನಾಡು, ಗುಜರಾತ್ ಕ್ರಮವಾಗಿ 1, 2 ಮತ್ತು 3ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ದೈಹಿಕ ಸಂಪರ್ಕವಿಲ್ಲದ ಹೆಂಡತಿಯ ಪ್ರೇಮ ಸಂಬಂಧ ವ್ಯಭಿಚಾರವಲ್ಲ : ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು! ಏನಿದು ಪ್ರಕರಣ?
ಉತ್ತರದಾಯಿತ್ವ:
ಕರ್ನಾಟಕವು ಪಾರದರ್ಶಕತೆಯಲ್ಲಿ ಹೊಸ ಮಾನದಂಡಗಳನ್ನು ರೂಪಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನ ಕ್ರಮವಾಗಿ ಕೇರಳ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ಪಡೆದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ
