ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 24 ಜನರು ಸಾವನ್ನಪ್ಪಿದ್ದಾರೆ. ಬಲಿಯಾದವರಲ್ಲಿ ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ ಮತ್ತು ಹಾವೇರಿಯ ರಾಣೆಬೆನ್ನೂರಿನ ಭರತ್ ಭೂಷಣ್ ಸೇರಿದ್ದಾರೆ. ಭರತ್, ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರ ಸಂಬಂಧಿ.

ಜಮ್ಮು ಕಾಶ್ಮೀರ (ಏ.22): ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಬುಧವಾರ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ 24 ಜನರು ಮೃತಪಟ್ಟಿದ್ದು, ಶಿವಮೊಗ್ಗ ಉದ್ಯಮಿ ಮಂಜುನಾಥ್ ರಾವ್ ಜೊತೆಗೆ ಮತ್ತೊಬ್ಬ ಕನ್ನಡಿಗ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಭರತ್ ಭೂಷಣ್ ಬಲಿಯಾಗಿದ್ದಾರೆ. ಈ ಭರತ್ ಕರ್ನಾಟಕದ ಮಾಜಿ ಸ್ಪೀಕರ್ ಕೆ.ಬಿ. ಕೋಳೀವಾಡ ಅವರ ಆಪ್ತ ವಲಯದವರಾಗಿದ್ದರು.

Add Asianetnews Kannada as a Preferred SourcegooglePreferred

ಜಮ್ಮು ಕಾಶ್ಮೀರದಲ್ಲಿ ಇಂದು ಬೆಳಗ್ಗೆ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ ಪ್ರವಾಸಿ ಕೇಂದ್ರದಲ್ಲಿದ್ದ ಹಿಂದೂ ಪುರುಷರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿತ್ತು. ಭಾರತದ ಸ್ವರ್ಗ ಎಂದೇ ಖ್ಯಾತಿಯಾಗಿರುವ ಈ ಸ್ಥಳದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಇದೀಗ ಜುಲೈ ತಿಂಗಳಲ್ಲಿ ಅಮರನಾಥ ಯಾತ್ರೆ ಆರಂಭವಾಗುವ ಮುನ್ನವೇ ಉಗ್ರಗಾಮಿ ಸಂಘನೆಯು ದಾಳಿ ಮಾಡಿದೆ. ಈ ಗುಂಡಿನ ದಾಳಿಯಲ್ಲಿ ಒಂದು ಸ್ಥಳದಲ್ಲಿ ಶಿವಮೊಗ್ಗದ ಉದ್ಯಮಿ ಮಂಜುನಾಥ ರಾವ್ ಸಾವಿಗೀಡಾಗಿದ್ದರು. ಇದರ ನಂತರ ಬಂದ ಸಾವಿನ ಸಂಖ್ಯೆಯ ಹೆಚ್ಚಳದಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಭರತ್ ಭೂಷಣ್ ಕೂಡ ಉಗ್ರರ ಗುಂಡೇಟಿಗೆ ಬಲಿ ಆಗಿರುವುದು ತಿಳಿದುಬಂದಿದೆ.

ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸದಲ್ಲಿ ಬಲಿಯಾದ ಮತ್ತೊಬ್ಬ ಕನ್ನಡಿದ ಭರತ್ ಭೂಷಣ್ ಅವರು ಶಾಸಕ ಪ್ರಕಾಶ್ ಕೋಳಿವಾಡರ ಸಹೋದರಿಯ ಗಂಡನ ಸ್ನೇಹಿತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಭರತ್ ಭೂಷಣ್ ಮೃತ ದೇಹವನ್ನು ರಾಜ್ಯಕ್ಕೆ ತರಿಸಲು ಪ್ರಕಾಶ್ ಕೋಳಿವಾಡ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ.