ಜೂ.19ಕ್ಕೆ ಸಭೆ ನಡೆಸಿ ಜಿಲ್ಲೆ, ತಾಲೂಕುಗಳಲ್ಲಿ ಜನಾಂದೋಲನ, ಬೆಂಗ​ಳೂ​ರಲ್ಲಿ ವಿಎ​ಚ್‌ಪಿ, ಬಜ​ರಂಗ​ದ​ಳ ಕಾರ್ಯಕರ್ತರ ಪ್ರತಿ​ಭ​ಟ​ನೆ

ಬೆಂಗಳೂರು(ಜೂ.17): ಮತಾಂತರ ನಿಷೇಧ ಕಾಯ್ದೆ ರದ್ದುಪಡಿಸುವ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟ ಸಭೆಯ ನಿರ್ಣಯವನ್ನು ಪ್ರತಿಪಕ್ಷ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ. ಬೆಂಗ​ಳೂ​ರಿ​ನಲ್ಲಿ ಶುಕ್ರ​ವಾರ ವಿಶ್ವ ಹಿಂದು ಪರಿಷತ್‌ ಹಾಗೂ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ಹಿಂದು ಜನಜಾಗೃತಿ ವೇದಿಕೆ ಅಧ್ಯಕ್ಷ ಮೋಹನ್‌ ಗೌಡ ಕೂಡ ಸರ್ಕಾ​ರದ ನಿರ್ಧಾರ ವಿರೋ​ಧಿ​ಸಿ​ದ್ದಾರೆ. ಇದೇ ವೇಳೆ, ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಆಂದೋಲನ ನಡೆಸುವ ಸಂಬಂಧ 19ರಂದು ಸಭೆ ನಡೆಸಲಾಗುವುದು. ಬಳಿಕ ಜನಾಂದೋಲನ ರೂಪಿಸಲಿದ್ದೇವೆ ಎಂದು ಬಿಜೆಪಿ ಮುಖ​ಂಡ ಆರ್‌.ಅಶೋಕ್‌ ಹೇಳಿ​ದ್ದಾ​ರೆ.

ಬಿಜೆಪಿ ಆಕ್ರೋ​ಶ:

ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಆರ್‌.ಅಶೋಕ್‌, ‘ಕಾಂಗ್ರೆಸ್‌ ಪಕ್ಷವು ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಂತಿದ್ದು, ಟಿಪ್ಪುವಿನ ಮತಾಂತರದ ಸಿದ್ಧಾಂತಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಹೆಜ್ಜೆ ಹಾಕುತ್ತಿದೆ’ ಎಂದು ಹರಿ​ಹಾ​ಯ್ದ​ರು.

ನಮ್ಮ ರಕ್ಷಣೆಗೆ ಸರ್ಕಾರ ಬರಲ್ಲ, ನಾವೇ ಆ್ಯಕ್ಷನ್‌ಗೆ ಇಳೀಬೇಕು: ಸಿ.ಟಿ.ರವಿ

‘ಕಾಂಗ್ರೆಸ್‌ ಪಕ್ಷವು ಪಿಎಫ್‌ಐ, ಕೆಎಫ್‌ಡಿ ಪರವಾಗಿದೆಯೇ? ಜನಾದೇಶದ ದುರ್ಬಳಕೆಗೆ ಬಿಜೆಪಿ ಅವಕಾಶ ನೀಡುವುದಿಲ್ಲ. 30ರಿಂದ 40 ಲಕ್ಷ ಹಿಂದೂಗಳು ದುಡ್ಡಿನ ಆಮಿಷ, ಲವ್‌ ಜಿಹಾದ್‌, ಆಸ್ಪತ್ರೆಯಲ್ಲಿ ಬಿಲ್‌ ಕಟ್ಟಲು ಆಗದೆ ಮತಾಂತರ ಆದ ಮಾಹಿತಿ ಇದೆ. ಕಾಂಗ್ರೆಸ್‌ ಯಾರಿಗಾಗಿ ಈ ಕಾಯ್ದೆ ತರುತ್ತಿದೆ? ಬಲವಂತದ ಮತಾಂತರ ಸಲ್ಲದು ಎಂಬ ಭಾವನೆ ಮತ್ತು ನಿಲುವನ್ನು ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಹೊಂದಿದ್ದರು’ ಎಂದು ಹೇಳಿದರು.

19ರಂದು ಸಭೆ ನಡೆಸಿ ಮುಂದಿನ ನಡೆ:

ಕಾಂಗ್ರೆಸ್‌ ಸರ್ಕಾರವು ರಾಜ್ಯದಲ್ಲಿ ಟಿಪ್ಪು ಆಡಳಿತವನ್ನು ಜಾರಿಗೊಳಿಸಲು ಹೊರಟಿದ್ದು, ಕಾಂಗ್ರೆಸ್‌ನ ದುರಾಡಳಿತ, ಅರಾಜಕತೆ, ಗ್ಯಾರಂಟಿ ವಿಚಾರದಲ್ಲಿ ಕಂಡಿಷನ್‌, ವಿವಿಧ ಕಾಯ್ದೆಗಳ ಹಿಂತೆಗೆತದ ನಿರ್ಧಾರವನ್ನು ಖಂಡಿಸಿ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಆಂದೋಲನ ನಡೆಸುವ ಸಂಬಂಧ 19ರಂದು ಸಭೆ ನಡೆಸಲಾಗುವುದು. ಬಳಿಕ ಜನಾಂದೋಲನ ರೂಪಿಸಲಿದ್ದೇವೆ ಎಂದರು.

ಮಿನಿ ಪಾಕಿಸ್ತಾನ ಮಾಡುತ್ತಿದ್ದಾರೆ!

ಕಾಂಗ್ರೆಸ್‌ ಪಕ್ಷವು ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಂತಿದೆ. ಟಿಪ್ಪುವಿನ ಮತಾಂತರದ ಸಿದ್ಧಾಂತಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಹೆಜ್ಜೆ ಹಾಕುತ್ತಿದೆ. 30ರಿಂದ 40 ಲಕ್ಷ ಹಿಂದೂಗಳು ದುಡ್ಡಿನ ಆಮಿಷ, ಲವ್‌ ಜಿಹಾದ್‌, ಆಸ್ಪತ್ರೆಯಲ್ಲಿ ಬಿಲ್‌ ಕಟ್ಟಲು ಆಗದೆ ಮತಾಂತರ ಆದ ಮಾಹಿತಿ ಇದೆ. ಕಾಂಗ್ರೆಸ್‌ ಯಾರಿಗಾಗಿ ಈ ಕಾಯ್ದೆ ತರುತ್ತಿದೆ? ಅಂತ ಬಿಜೆಪಿ ನಾಯಕ ಆರ್‌.ಅಶೋಕ್‌ ತಿಳಿಸಿದ್ದಾರೆ.