ನಮ್ಮ ಬಳಿ ಇನ್ನೂ 1.94 ಲಕ್ಷ ಮೆಟ್ರಿಕ್‌ ಟನ್‌ಗೂ ಹೆಚ್ಚು ದಾಸ್ತಾನಿದೆ. ಹಾಗಾಗಿ ರೈತರು ಆತಂಕ ಪಡುವುದು ಬೇಡ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಬೆಂಗಳೂರು (ಜು.23): ರಾಜ್ಯದಲ್ಲಿ ಇದುವರೆಗೂ ಬೇಡಿಕೆಗೆ ಅನುಗುಣವಾಗಿ 6.55 ಲಕ್ಷ ಮೆಟಿಕ್‌ ಟನ್‌ನಷ್ಟು ಯೂರಿಯಾ, ರಸಗೊಬ್ಬರ ಪೂರೈಕೆ ಮಾಡಿದ್ದೇವೆ. ನಮ್ಮ ಬಳಿ ಇನ್ನೂ 1.94 ಲಕ್ಷ ಮೆಟ್ರಿಕ್‌ ಟನ್‌ಗೂ ಹೆಚ್ಚು ದಾಸ್ತಾನಿದೆ. ಹಾಗಾಗಿ ರೈತರು ಆತಂಕ ಪಡುವುದು ಬೇಡ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯೂರಿಯಾ, ರಸಗೊಬ್ಬರದ ಸಮಸ್ಯೆ ಆಗಿದೆಯಲ್ಲಾ ಎಂಬ ಪ್ರಶ್ನೆಗೆ, ಇಡೀ ದೇಶದಲ್ಲೇ ಗೊಬ್ಬರದ ಸಮಸ್ಯೆ ಇರುವುದು ಸತ್ಯ. ಒಂದೆಡೆ ಇರಾನ್ ಯುದ್ಧದ ಕಾರಣದಿಂದ ಗೊಬ್ಬರ ಆಮದು ಆಗುತ್ತಿಲ್ಲ.

Add Asianetnews Kannada as a Preferred SourcegooglePreferred

ಭಾರತಕ್ಕೆ ಚೀನಾ ರಸಗೊಬ್ಬರ ರಫ್ತನ್ನು ಸಂಪೂರ್ಣ ನಿಲ್ಲಿಸಿದೆ. ಇದರಿಂದ ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಬರಬೇಕಿರುವ ರಸಗೊಬ್ಬರ ಸರಬರಾಜಿಗೆ ಸಮಸ್ಯೆ ಉಂಟಾಗಿದೆ. ಇದೆಲ್ಲರದ ನಡುವೆಯೂ ನಮ್ಮ ಸರ್ಕಾರ ಮತ್ತು ಇಲಾಖಾ ಅಧಿಕಾರಿಗಳ ವಿಶೇಷ ಪ್ರಯತ್ನದಿಂದ ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಪ್ರತೀ ಅವಧಿಗೆ ಬರಬೇಕಿದ್ದ ರಸಗೊಬ್ಬರ ತರುವಲ್ಲಿ ಯಶಸ್ವಿಯಾಗಿದ್ದೇವೆ. ರೈತರಿಗೆ ಇದುವರೆಗೂ ಅಗತ್ಯದಷ್ಟು ಅಂದರೆ 6.55 ಲಕ್ಷ ಮೆಟ್ರಿಕ್‌ ಟನ್‌ನಷ್ಟು ಯೂರಿಯಾ, ರಸಗೊಬ್ಬರ ಪೂರೈಸಿದ್ದೇವೆ. ನಮ್ಮಲ್ಲಿ ಇನ್ನೂ 1.94 ಲಕ್ಷ ಮೆಟ್ರಿಕ್‌ ಟನ್‌ನಷ್ಟು ದಾಸ್ತಾನಿದೆ. ರೈತರು ಆತಂಕ ಪಡುವುದು ಬೇಡ ಎಂದರು.

ಹಾಗಾದರೆ ವಿವಿಧ ಜಿಲ್ಲೆಗಳಲ್ಲಿ ರಸಗೊಬ್ಬರ ಸಮಸ್ಯೆ ಏಕಾಗುತ್ತಿದೆ ಎಂಬ ಪ್ರಶ್ನೆಗೆ, ಕೆಲವು ಜಿಲ್ಲೆಗಳಲ್ಲಿ ಯೂರಿಯಾ, ರಸಗೊಬ್ಬರ ವಿತರಣೆಯಲ್ಲಿ ಸಣ್ಣಪುಟ್ಟ ಸಮಸ್ಯೆ ಆಗಿರಬಹುದು. ರೈತರು ರಸಗೊಬ್ಬರ ಸಿಗುವುದಿಲ್ಲ ಎಂಬ ತಪ್ಪು ಗ್ರಹಿಕೆಯಿಂದ ಮುಂದಿನ ತಿಂಗಳು ಬೇಕಿರುವ ಗೊಬ್ಬರವನ್ನು ಈಗಲೇ ಪಡೆಯಲು ಮುಗಿಬಿದ್ದು, ಈ ರೀತಿ ಸಮಸ್ಯೆ ಆಗಿರಬಹುದು. ಹಾವೇರಿ, ಬೆಳಗಾವಿ, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳ ಕೆಲವೆಡೆ ಇಂತಹ ಗೊಂದಲ ಆಗಿದೆ. ರೈತರಿಗೆ ಗೋಡೋನ್‌ನಲ್ಲಿ ಗೊಬ್ಬರ ದಾಸ್ತಾನಿಲ್ಲ ಎನ್ನುವ ಗೊಂದಲ, ಆತಂಕ ಬೇಡ.

ನಮ್ಮಲ್ಲಿ ಈಗಲೂ ಅಗತ್ಯಕ್ಕಿಂತ ಎಂಟು ಲಕ್ಷ ಮೆಟ್ರಿಕ್‌ ಟನ್‌ನಷ್ಟು ರಸಗೊಬ್ಬರ ದಾಸ್ತಾನಿದೆ. ಈ ಬಗ್ಗೆ ನಮ್ಮ ಅಧಿಕಾರಿಗಳೂ ರೈತರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ ಎಂದರು. ಇದರ ಜೊತೆಗೆ ನಾವು ಕೇಂದ್ರ ಸರ್ಕಾರದೊಂದಿಗೂ ನಿರಂತರ ಸಂಪರ್ಕದಲ್ಲಿದ್ದೇವೆ. ಇದುವರೆಗೂ ಅವರು ರಾಜ್ಯದ ರಸಗೊಬ್ಬರ ಬೇಡಿಕೆಗೆ ಸೂಕ್ತ ರೀತಿಯಲ್ಲಿ ಸಹಕರಿಸಿದ್ದಾರೆ. ಅಗತ್ಯಬಿದ್ದರೆ ಇನ್ನಷ್ಟು ದಾಸ್ತಾನು ಪಡೆಯಲು ಪ್ರಯತ್ನಿಸಲಾಗುವುದು ಎಂದು ಸ್ಪಷ್ಟಪಡಿಸಿದರು.