ksrtc MBTC ನೌಕರರು ಸಂಬಳವಿಲ್ಲದೇ ಪರದಾಡುವ ಸ್ಥಿತಿ ಎದುರಾಗಿದೆ. ಆಗಸ್ಟ್ ತಿಂಗಳಿನಲ್ಲಿ 10 ಸಾವಿರಕ್ಕೂ ಅಧಿಕ ನೌಕರರು ಸಂಬಳವಿಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ.

ಬೆಂಗಳೂರು (ಸೆ.14):  ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಸುಮಾರು 10 ಸಾವಿರಕ್ಕೂ ಅಧಿಕ ನೌಕರರು ಆಗಸ್ಟ್‌ ತಿಂಗಳ ವೇತನ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Add Asianetnews Kannada as a Preferred SourcegooglePreferred

ಕೊರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೊರತೆ ಉಂಟಾದ್ದರಿಂದ ಆಗಸ್ಟ್‌ ತಿಂಗಳಲ್ಲಿ ಸೀಮಿತ ಸಿಬ್ಬಂದಿ ಬಳಸಿಕೊಂಡು ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗಿದೆ. ಈ ನಡುವೆ ಕರ್ತವ್ಯ ನಿರ್ವಹಿಸಿದರೆ ಮಾತ್ರ ವೇತನ ಎಂಬ ನಿಯಮ ಜಾರಿ ಮಾಡಿದ್ದ ಸಾರಿಗೆ ನಿಗಮಗಳು, ಅದರಂತೆ ಆಗಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ ನೌಕರರಿಗೆ ಮಾತ್ರ ವೇತನ ಪಾವತಿಸಿವೆ. ಆದರೆ, ಈ ನಾಲ್ಕು ನಿಗಮಗಳ ಸುಮಾರು 10 ಸಾವಿರಕ್ಕೂ ಅಧಿಕ ನೌಕರರಿಗೆ ಆಗಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಸಿಕ್ಕಿಲ್ಲ. ಈಗ ವೇತನವೂ ಸಿಗದೆ ಈ ನೌಕರರು ಸಂಷಕ್ಟಕ್ಕೆ ಸಿಲುಕಿದ್ದಾರೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಸೇವೆ ..

ಸರ್ಕಾರ ಅನುದಾನ ಕೊಟ್ಟರೂ ವೇತನ ಸಿಗುತ್ತಿಲ್ಲ:

ಲಾಕ್‌ಡೌನ್‌ ಸಡಿಲಿಕೆ ಬಳಿಕ ಬಸ್‌ ಸೇವೆ ಪುನಾರಂಭವಾದರೂ ಪೂರ್ಣ ಪ್ರಮಾಣದಲ್ಲಿ ಬಸ್‌ ಕಾರ್ಯಾಚರಣೆ ಮಾಡದ ಪರಿಣಾಮ ಸಾಕಷ್ಟುನೌಕರರಿಗೆ ರಜೆ ನೀಡಲಾಗಿತ್ತು. ಇದೀಗ ನೌಕರರ ಖಾತೆಯಲ್ಲಿ ರಜೆಗಳೂ ಖಾಲಿಯಾಗಿವೆ. ಇದೀಗ ಕರ್ತವ್ಯಕ್ಕೆ ಹಾಜರಾದರೂ ಕರ್ತವ್ಯ ಸಿಗುತ್ತಿಲ್ಲ. ಹೀಗಾಗಿ ಗೈರು ಹಾಜರಿ ಹಾಕಲಾಗುತ್ತಿದೆ. ಇತ್ತ ವೇತನವೂ ಇಲ್ಲದೆ ಬದುಕು ಸಾಗಿಸುವುದು ಹೇಗೆ? ರಾಜ್ಯ ಸರ್ಕಾರ ಕಳೆದ ಐದು ತಿಂಗಳಿಂದ ಸಾರಿಗೆ ನೌಕರರ ವೇತನ ಪಾವತಿಗಾಗಿ ಅನುದಾನ ನೀಡುತ್ತಿದೆ. ಆದರೂ ಸಾರಿಗೆ ನಿಗಮಗಳ ಆಡಳಿತ ಮಂಡಳಿಗಳು ನೌಕರರ ಕರ್ತವ್ಯದ ಹಾಜರಾತಿ ಆಧರಿಸಿ ವೇತನ ನೀಡುತ್ತಿವೆ. ಕರ್ತವ್ಯ ಸಿಗದಿರುವ ನೌಕರರಿಗೆ ವೇತನ ಕಡಿತ ಮಾಡಿವೆ. ಇದರಿಂದ ನೌಕರರು ಹಾಗೂ ಅವರ ಅವಲಂಬಿತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಎಂಟಿಸಿ ಘಟಕ 33ರ ಚಾಲಕ ಕಂ ನಿರ್ವಾಹಕರೊಬ್ಬರು ಅಳಲು ತೋಡಿಕೊಂಡರು.

ಮತ್ತೆ ಗೋವಾಗೆ ಸಂಚರಿಸಿಲಿವೆ ಕರ್ನಾಟದಿಂದ ಬಸ್

ಕೊರೋನಾ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಬಸ್‌ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ ಎಂಬುದು ಸರಿ. ಹಾಗಂತ ನೌಕರರ ವೇತನ ಕಡಿತ ಮಾಡುವುದು ಸರಿಯಲ್ಲ. ಕೊರೋನಾ ನಿಯಂತ್ರಣಕ್ಕೆ ಬಂದು ಸಾರಿಗೆ ವ್ಯವಸ್ಥೆ ಹಿಂದಿನ ಸ್ಥಿತಿಗೆ ಮರುಳುವವರೆಗೂ ಸಾರಿಗೆ ನೌಕರರಿಗೆ ಪೂರ್ಣ ಪ್ರಮಾಣ ವೇತನ ನೀಡಬೇಕು.

- ಎಚ್‌.ಎಸ್‌.ಮಂಜುನಾಥ, ಪ್ರಧಾನ ಕಾರ್ಯದರ್ಶಿ, ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್‌