ಆಪರೇಷನ್ ಅವಿಶ್ವಾಸ: ಸರ್ಕಾರ ಅಸ್ಥಿರಕ್ಕೆ ತೆರೆಮರೆ ಪ್ರಯತ್ನ?
ಆಪರೇಷನ್ ಅವಿಶ್ವಾಸ: ಕಾಂಗ್ರೆಸ್ಗಿನ್ನೂ ಆತಂಕ| ಸರ್ಕಾರ ಅಸ್ಥಿರಕ್ಕೆ ತೆರೆಮರೆ ಪ್ರಯತ್ನ?| ನೋಟಿಸ್ ಕೊಟ್ಟರೂ ಕ್ಯಾರೇ ಎನ್ನದಿರುವ ಪಕ್ಷದ ನಾಲ್ವರು ಅತೃಪ್ತ ಶಾಸಕರು| ಇದರ ಜೊತೆಗೆ ಬಿಜೆಪಿ ಶಾಸಕರ ಜೊತೆಗೆ ಕೆಲವು ಕಾಂಗ್ರೆಸ್ ಶಾಸಕರ ಸಂಪರ್ಕ| ಬಜೆಟ್ ಅಧಿವೇಶನ ವೇಳೆ ಅವಿಶ್ವಾಸ ನಿರ್ಣಯ ಮಂಡನೆ ಆಗುವ ಚಿಂತೆ| ಹಾಗಾಗಿ, ಕಲಾಪಕ್ಕೆ ಕಡ್ಡಾಯ ಹಾಜರಾಗಲು ಶಾಸಕರಿಗೆ ವಿಪ್ ಜಾರಿ ಸಾಧ್ಯತೆ
ಬೆಂಗಳೂರು[ಫೆ.03]: ಮತ್ತೆ ಮತ್ತೆ ನೋಟಿಸ್ ಕೊಟ್ಟರೂ ಕ್ಯಾರೆ ಎನ್ನದ ಅತೃಪ್ತ ಶಾಸಕರು, ಕಾಂಗ್ರೆಸ್ ಶಾಸಕರನ್ನು ಸತತವಾಗಿ ಸಂಪರ್ಕಿಸುತ್ತಿರುವ ಬಿಜೆಪಿಯ ಕೆಲ ಶಾಸಕರ ನಿಗೂಢ ನಡವಳಿಕೆಗಳಿಂದಾಗಿ ಬಜೆಟ್ ಅಧಿವೇಶನದ ವೇಳೆ ಬಿಜೆಪಿ ಹಾಗೂ ಅತೃಪ್ತ ಕಾಂಗ್ರೆಸ್ ಶಾಸಕರು ಸೇರಿ ಸರ್ಕಾರಕ್ಕೆ ಧಕ್ಕೆ ತರುವಂತಹ ಪ್ರಯತ್ನ ಮಾಡಬಹುದೇ ಎಂಬ ಆಶಂಕೆ ಕಾಂಗ್ರೆಸ್ನಲ್ಲಿ ಇನ್ನೂ ಜೀವಂತವಾಗಿದೆ.
20ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ನ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಬಿಜೆಪಿಯ ಪ್ರಮುಖ ನಾಯಕರೇ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಸಂವಾದಿಯಾಗಿ ಕಾಂಗ್ರೆಸ್ನ ಅತೃಪ್ತ ಶಾಸಕರು ಬರೋಬ್ಬರಿ ಒಂದು ತಿಂಗಳಿನಿಂದ ಕಾಂಗ್ರೆಸ್ ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್ಸಿಗರಿಗೆ ಇಂತಹದ್ದೊಂದು ಅನುಮಾನ ಹುಟ್ಟಿದೆ.
ರಾಜಕೀಯ ವಲಯದಲ್ಲಿ ಚರ್ಚೆಯಲ್ಲಿರುವಂತೆ ಬಿಜೆಪಿಯು ಕಾಂಗ್ರೆಸ್ನ ಸುಮಾರು 18 ಶಾಸಕರನ್ನು ಸೆಳೆದು, ಅವರಿಂದ ರಾಜೀನಾಮೆ ಕೊಡಿಸಿ ಸರ್ಕಾರವನ್ನು ಅಲ್ಪಮತಕ್ಕೆ ತರುವ ಪ್ರಯತ್ನವನ್ನು ತೀವ್ರವಾಗಿ ನಡೆಸಿತ್ತು. ಆದರೆ, ಈ ಪ್ರಯತ್ನದಲ್ಲಿ ಬಿಜೆಪಿಗೆ ನಿರೀಕ್ಷಿತ ಯಶಸ್ಸು ದೊರಕಿಲ್ಲ. ಹೀಗಾಗಿಯೇ ಈಗ ಬಿಜೆಪಿ ‘ಪ್ಲಾನ್ ಬಿ’ಯನ್ನು ಜಾರಿಗೆ ತರಲು ಉದ್ದೇಶಿಸಿದೆ ಎನ್ನಲಾಗುತ್ತಿದೆ. ಈ ಪ್ಲಾನ್ ಬಿ ಪ್ರಕಾರ ಬಜೆಟ್ ಅಧಿವೇಶನದ ವೇಳೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ತರುವುದು. ಇದಕ್ಕೆ ಆಸ್ಪದ ದೊರೆಯದೇ ಇದ್ದರೆ ಸ್ಪೀಕರ್ ಬಗ್ಗೆಯೇ ವಿಶ್ವಾಸವಿಲ್ಲ ಎಂಬ ನಿರ್ಣಯವನ್ನು ಮಂಡಿಸುವುದು. ಈ ವೇಳೆ ಸುಮಾರು 8ರಿಂದ 12 ಮಂದಿ ಕಾಂಗ್ರೆಸ್ ಶಾಸಕರು ವಿಧಾನಸಭೆಯಿಂದ ದೂರವುಳಿಯುವಂತೆ ಮಾಡಿ ಈ ನಿರ್ಣಯಕ್ಕೆ ಗೆಲುವಾಗುವಂತೆ ಮಾಡುವುದು.
ಇಷ್ಟಾದರೆ ತನ್ನಿಂದ ತಾನೇ ಸರ್ಕಾರಕ್ಕೆ ಧಕ್ಕೆ ಉಂಟಾಗುತ್ತದೆ. ಇದನ್ನು ತಡೆಯಲು ಕಾಂಗ್ರೆಸ್-ಜೆಡಿಎಸ್ ಏನೇ ರಾಜಕೀಯ ದಾಳ ಉರುಳಿಸಿದರೂ ಸಂವಿಧಾನಿಕ ಬಿಕ್ಕಟ್ಟು ನಿರ್ಮಾಣವಾಗಿದೆ ಎಂಬ ನೆಪದಲ್ಲಿ ರಾಜ್ಯಪಾಲರ ಆಳ್ವಿಕೆಯನ್ನಾದರೂ ಬರುವಂತೆ ಮಾಡಬಹುದು ಎಂಬುದು ಬಿಜೆಪಿ ಲೆಕ್ಕಾಚಾರ ಎನ್ನಲಾಗುತ್ತಿದೆ.
ಹೀಗಾಗಿಯೇ ತನಗೆ ಬೇಕಾದಷ್ಟುಕಾಂಗ್ರೆಸ್ ಶಾಸಕರು ಆಪರೇಷನ್ ಗಾಳಕ್ಕೆ ಬೀಳದಿದ್ದರೂ ಎಷ್ಟುಮಂದಿ ಸಿಗುತ್ತಾರೋ ಅಷ್ಟುಶಾಸಕರನ್ನು ಇಟ್ಟುಕೊಂಡೇ ಬಿಕ್ಕಟ್ಟು ನಿರ್ಮಾಣ ಮಾಡುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎನ್ನಲಾಗಿದೆ. ಈ ರೀತಿಯ ಪ್ರಯತ್ನದಿಂದ ಒಂದು ವೇಳೆ ಸರ್ಕಾರವನ್ನು ಬೀಳಿಸಲು ಸಾಧ್ಯವಾಗದಿದ್ದರೂ ಸಮ್ಮಿಶ್ರ ಸರ್ಕಾರ ಎಂಬುದು ಸ್ಥಿರವಲ್ಲ ಎಂಬ ಭಾವವನ್ನು ರಾಜ್ಯದ ಜನರಲ್ಲಿ ಬಿತ್ತಲು ಸಾಧ್ಯವಾಗುತ್ತದೆ. ಇದು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ತರುತ್ತದೆ ಎಂಬ ಕಾರಣಕ್ಕೂ ಬಿಜೆಪಿ ಈ ಪ್ರಯತ್ನ ನಡೆಸಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಬಿಜೆಪಿ ಇಂತಹ ಪ್ರಯತ್ನ ಮುಂದುವರೆಸಿರುವುದು ಕಾಂಗ್ರೆಸ್ ನಾಯಕತ್ವಕ್ಕೆ ತಿಳಿದಿದೆ. ಹೀಗಾಗಿ, ಅತೃಪ್ತ ಶಾಸಕರು ಮೊದಲು ಬಿಜೆಪಿಯ ಹಿಡಿತದಿಂದ ಹೊರಬರುವಂತೆ ಮಾಡಲು ಸತತವಾಗಿ ನೋಟಿಸ್ ನೀಡತೊಡಗಿದೆ. ಇದಕ್ಕೆ ಮುಖ್ಯ ಕಾರಣ ಕಾಂಗ್ರೆಸ್ನ ಅತೃಪ್ತ ಶಾಸಕರು ಬರೋಬ್ಬರಿ ಒಂದು ತಿಂಗಳಿನಿಂದ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಬರುತ್ತಿಲ್ಲ. ಕನಿಷ್ಠ ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ. ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ಕಾರಣಕ್ಕೆ ನೀಡಲಾದ ನೋಟಿಸ್ಗೆ ಅತೃಪ್ತ ಶಾಸಕರು ಉತ್ತರ ನೀಡಿದರೂ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಸಮಜಾಯಿಷಿ ನೀಡುವ ಮನಸ್ಸು ಮಾಡಲಿಲ್ಲ. ಇಷ್ಟಲ್ಲದೆ, ಕಾಂಗ್ರೆಸ್ ಶಾಸಕರೊಂದಿಗೆ ಬಿಡದಿಯ ಈಗಲ್ಟನ್ ರೆಸಾರ್ಟ್ಗೆ ಆಗಮಿಸಿ ಆನಂದ್ ಸಿಂಗ್ ಜತೆ ಜಟಾಪಟಿ ನಡೆಸಿದ ನಂತರ ಶಾಸಕ ಕಂಪ್ಲಿ ಗಣೇಶ್ ಕೂಡ ನಾಪತ್ತೆಯಾಗಿದ್ದು, ಅವರು ಮತ್ತೆ ಅತೃಪ್ತರನ್ನು ಕೂಡಿಕೊಂಡಿದ್ದಾರೆ ಎಂಬ ಗುಲ್ಲು ಹಬ್ಬಿದೆ.
ಹೀಗಾಗಿ ಅತೃಪ್ತರು ನೇರವಾಗಿ ಬಂದು ಭೇಟಿ ಮಾಡಿ ಸಮಜಾಯಿಷಿ ನೀಡಬೇಕು ಎಂದು ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ನಾಲ್ಕು ಮಂದಿ ಶಾಸಕರಾದ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಕಂಪ್ಲಿ ಗಣೇಶ್ ಮತ್ತು ಬಿ. ನಾಗೇಂದ್ರ ಅವರಿಗೆ ಮತ್ತೆ ನೋಟಿಸ್ ನೀಡಲಾಗಿದೆ. ಇದಕ್ಕೂ ಅತೃಪ್ತರು ಜಗ್ಗಿಲ್ಲ. ಇದರಿಂದಾಗಿ ಅತೃಪ್ತರು ಸೇರಿದಂತೆ ಕಾಂಗ್ರೆಸ್ನ ಎಲ್ಲಾ ಶಾಸಕರು ಈ ಬಾರಿಯ ಬಜೆಟ್ ಅಧಿವೇಶನಕ್ಕೆ ತಪ್ಪದೇ ಹಾಜರಾಗುವಂತೆ ಸೋಮವಾರ ವಿಪ್ ಕೂಡ ಜಾರಿ ಮಾಡಲು ಪಕ್ಷ ಮುಂದಾಗಿದೆ ಎಂದು ತಿಳಿದು ಬಂದಿದೆ.
ಹೀಗೆ ಸತತವಾಗಿ ನೋಟಿಸ್ ಹಾಗೂ ವಿಪ್ ನೀಡುವುದರ ಹಿಂದೆ ಒಂದಿಬ್ಬರಾದರೂ ಅತೃಪ್ತರ ವಿರುದ್ಧ ಪಕ್ಷಾಂತರ ವಿರೋಧಿ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಂಡು ಬಿಜೆಪಿಯ ಸೆಳೆತಕ್ಕೆ ಸಿಲುಕಿರಬಹುದಾದ ಇತರ ಶಾಸಕರಿಗೆ ಎಚ್ಚರಿಕೆ ನೀಡುವ ಉದ್ದೇಶವನ್ನು ಕಾಂಗ್ರೆಸ್ ನಾಯಕರು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.