ಉಡುಪಿ ವಿಡಿಯೋ ವಿವಾದ ಗುರುವಾರವೂ ಕೂಡ ರಾಜ್ಯದಲ್ಲಿ ಸುದ್ದಿಯಾಯಿತು. ಮತ್ತೊಮ್ಮೆ ಗೃಹ ಸಚಿವ ಪರಮೇಶ್ವರ್‌ ಸಣ್ಣತನದ ಹೇಳಿಕೆ ನೀಡಿದ್ದರೆ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಭೂ ಸುಂದರ್‌ ಅಚ್ಚರಿಯ ಹೇಳಿಕೆ ನೀಡಿದರು.

ಬೆಂಗಳೂರು (ಜು.27):ಉಡುಪಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಕೇಸ್‌ ಗುರುವಾರವೂ ರಾಜ್ಯದಲ್ಲಿ ಸುದ್ದಿಯಾಯಿತು. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಭೂ ಸುಂದರ್‌ 5 ಗಂಟೆಗಳ ಕಾಲ ಸಭೆ ನಡೆಸಿದರು. ಹಾಗಿದ್ದರೂ, ವಿಡಿಯೋ ಮಾಡಿದ್ದಾರೆ ಎನ್ನಲಾದ ಮೂವರು ಹುಡುಗಿಯರು ಎಲ್ಲಿದ್ದಾರೆ ಅನ್ನೋದು ಗೊತ್ತಾಗಲಿಲ್ಲ.

ಉಡುಪಿ ವಿಡಿಯೋ ಪ್ರಕರಣದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತನಿಖೆಗೂ ಮುನ್ನವೇ ಕ್ಲೀನ್‌ ಚಿಟ್‌ ಕೊಟ್ರಾ ಎನ್ನುವ ಅನುಮಾನ ಕಾಡಿದೆ. ನಿನ್ನೆ ಸಣ್ಣ ಘಟನೆ ಎಂದಿದ್ದ ಪರಮೇಶ್ವರ್‌ ಇಂದು, ಯಾವುದೇ ವಿಡಿಯೋ ಇಲ್ಲ, ಏನೂ ಸಾಕ್ಷ್ಯ ಸಿಗ್ತಿಲ್ಲ ಎಂದು ಹೇಳಿದ್ದಾರೆ. ಇನ್ನೊಂದೆಡೆ, ಗೃಹಸಚಿವರು ಹೇಳಿದ ಹಾಗೆ ಸಣ್ಣ ಘಟನೆ ಎಂದು ಪೊಲೀಸರು ಮೈಮರೆತರಾ ಎನ್ನುವ ಅನುಮಾನವೂ ಬಂದಿದೆ. ಘಟನೆಯಲ್ಲಿ ತನಿಖಾ ಮಾಡಿದ್ದಕ್ಕಿಂತ ತನಿಖಾ ಲೋಪವೇ ಎದ್ದು ಕಂಡಿದೆ.

ಉಡುಪಿ ಫೈಲ್ಸ್‌, 'ಮಕ್ಕಳಾಟ' ಎಂದ ಕಾಂಗ್ರೆಸ್‌, ಗೃಹ ಸಚಿವರಿಗೆ ಇದು 'ಸಣ್ಣ ಘಟನೆ'!

ಪ್ರಕರಣದ ವಿಚಾರವಾಗಿ ಎಬಿವಿಪಿ ಕಾರ್ಯಕರ್ತರು ಇಂದು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಉಡುಪಿ ಎಸ್‌ಪಿ ಪ್ರತಿಭಟನಾ ಸ್ಥಳಕ್ಕೆ ಬರಲೇಬೇಕು, ಈ ವಿಚಾರದಲ್ಲಿ ನ್ಯಾಯ ಸಿಗಲೇಬೇಕು ಎಂದು ಆಗ್ರಹಿಸಿ ಹುತಾತ್ಮರ ಸ್ಮಾರಕದ ಬಳಿ ವಿದ್ಯಾರ್ಥಿಗಳು ರೋಷಾವೇಶ ತೋರಿದರು.