ನೇಕಾರ ಸಮ್ಮಾನ್‌ ಯೋಜನೆಯ ಹಣ ವರ್ಗಕ್ಕೆ ಇಂದು ಸಿಎಂ ಚಾಲನೆ  ನೇಕಾರರಿಗೆ ವಾರ್ಷಿಕ .5000 ನೀಡುವ ಸ್ಕೀಂ

ಬೆಂಗಳೂರು (ಡಿ.16) : ಕೈಮಗ್ಗ ನೇಕಾರರಿಗೆ ತಲಾ ಐದು ಸಾವಿರ ರು. ನೀಡುವ ನೇಕಾರ ಸಮ್ಮಾನ್‌ ಯೋಜನೆಯಡಿ ಈ ವರ್ಷದ ಹಣ ವರ್ಗಾವಣೆಗೆ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.

ಕೈಮಗ್ಗ ನೇಕಾರರ ಚಟುವಟಿಕೆಗಳ ಪಾರಂಪರಿಕ ಕಲೆ ಮತ್ತು ಅವರ ಶ್ರಮವನ್ನು ಪರಿಗಣಿಸಿ ಮತ್ತು ಕೋವಿಡ್‌ ಮಹಾಮಾರಿ ಹಾಗೂ ಆರ್ಥಿಕ ಹಿನ್ನಡೆಯಿಂದ ಸಂಕಷ್ಟದಲ್ಲಿರುವ ಕೈಮಗ್ಗ ನೇಕಾರರಿಗೆ 2020-21ನೇ ಸಾಲಿನಿಂದ ಅನ್ವಯವಾಗುವಂತೆ ‘ನೇಕಾರ ಸಮ್ಮಾನ್‌’ ಎಂಬ ಹೊಸ ಯೋಜನೆಯನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರು. ಇದು ಕೈಮಗ್ಗ ನೇಕಾರರಿಗೆ ಸಹಾಯಕವಾಗಲಿದೆ ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶಂಕರ್‌ ಪಾಟೀಲ್‌ ಮುನೇನಕೊಪ್ಪ ಹೇಳಿದ್ದಾರೆ.

ಬೊಮ್ಮಾಯಿ ದುರ್ಬಲ ಸಿಎಂ: ಸಿದ್ದರಾಮಯ್ಯ ಟೀಕೆ

ಮುಖ್ಯಮಂತ್ರಿಗಳು ಶುಕ್ರವಾರ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಪ್ರತಿ ಕೈಮಗ್ಗ ನೇಕಾರರಿಗೆ ವಾರ್ಷಿಕ ಆರ್ಥಿಕ ನೆರವು ಐದು ಸಾವಿರ ರು.ನಂತೆ 23.43 ಕೋಟಿ ರು. ಮೊತ್ತವನ್ನು ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡುವುದಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮವು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು. 2021-22ನೇ ಸಾಲಿನಲ್ಲಿ ನೇಕಾರ ಸಮ್ಮಾನ್‌ ಯೋಜನೆಯಡಿಯಲ್ಲಿ 49,544 ನೇಕಾರರಿಗೆ 9.90 ಕೋಟಿ ರು. ಡಿಬಿಟಿ ಮೂಲಕ ಬಿಡುಗಡೆ ಮಾಡಲಾಗಿದೆ.

2022-23ನೇ ಸಾಲಿನ ಬಜೆಟ್‌ ಅನ್ವಯ ನೋಂದಾಯಿತ ಕೈಮಗ್ಗ ನೇಕಾರರಿಗೆ ನೇಕಾರ ಸಮ್ಮಾನ್‌ ಯೋಜನೆಯಡಿ ಆರ್ಥಿಕ ನೆರವನ್ನು ಎರಡು ಸಾವಿರ ರು.ನಿಂದ ಐದು ಸಾವಿರ ರು.ಗೆ ಹೆಚ್ಚಿಸಲಾಗಿದೆ. ಈವರೆಗೆ 46,864 ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸಿಎಂ ಬೊಮ್ಮಾಯಿ, ಶಿಂಧೆ ಜೊತೆಯಲ್ಲಿ ಶಾ ಸುದ್ದಿಗೋಷ್ಠಿ, ರಾಜಕೀಯ ಬೇಡ, ಕೋರ್ಟ್ ನಿರ್ಧಾರದ ಬಳಿಕ ಕ್ರಮ