ರಾಜ್ಯದ ಕಾಲೇಜುಗಳಲ್ಲಿ ರಾಷ್ಟ್ರಧ್ವಜದ ಅಭಿಯಾನ: ಸಚಿವ ಅಶ್ವತ್ಥನಾರಾಯಣ
* ‘ಹರ್ ಘರ್ ತಿರಂಗಾ’ಕ್ಕೆ ಬೆಂಬಲ
* ಈ ಎಲ್ಲ ಕಾಲೇಜುಗಳಲ್ಲಿ ಆ.11ರಿಂದ 17ರವರೆಗೆ ತ್ರಿವರ್ಣ ಧ್ವಜ ಹಾರಿಸಬೇಕು
* ಪ್ರಾಂಶುಪಾಲರು ತರಗತಿಗಳ ಸಮಯದಲ್ಲಿ ಕಾರ್ಯಕ್ರಮದ ಬಗ್ಗೆ ತಿಳಿಸಬೇಕು
ಬೆಂಗಳೂರು(ಜು.04): ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ ಆ.11ರಿಂದ 17ರವರೆಗೆ ಹಮ್ಮಿಕೊಂಡಿರುವ ‘ಹರ್ ಘರ್ ತಿರಂಗಾ’ (ಪ್ರತಿ ಮನೆಯಲ್ಲಿ ತ್ರಿವರ್ಣಧ್ವಜ) ಕಾರ್ಯಕ್ರಮವನ್ನು ರಾಜ್ಯದ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಯಶಸ್ವಿಗೊಳಿಸಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ.
‘ಹರ್ ಘರ್ ತಿರಂಗಾ’ ಅಭಿಯಾನದಡಿ ದೇಶದ ಮನೆ ಮನೆಯಲ್ಲೂ ರಾಷ್ಟ್ರಧ್ಜಜ ಹಾರಿಸಿ ರಾಷ್ಟ್ರಪ್ರೇಮ ಅಭಿವ್ಯಕ್ತಗೊಳಿಸಲು ಕರೆ ಕೊಡಲಾಗಿದೆ. ಇದಕ್ಕೆ ಪೂರಕವಾಗಿ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ವಿಶ್ವವಿದ್ಯಾನಿಲಯಗಳು, ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು, ತಾಂತ್ರಿಕ ಶಿಕ್ಷಣ ಇಲಾಖೆಯಡಿಯ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಜಾರಿ ಮಾಡಬೇಕು, ಈ ಎಲ್ಲ ಕಾಲೇಜುಗಳಲ್ಲಿ ಆ.11ರಿಂದ 17ರವರೆಗೆ ತ್ರಿವರ್ಣ ಧ್ವಜ ಹಾರಿಸಬೇಕೆಂದು ತಿಳಿಸಲಾಗಿದೆ.
ಉದಯಪುರ ಹತ್ಯೆಕೋರರ ಬೆದರಿಕೆಗೆ ಹೆದರಲ್ಲ: ಸಚಿವ ಅಶ್ವತ್ಥ್ ನಾರಾಯಣ್
ಪ್ರಾಂಶುಪಾಲರು ತರಗತಿಗಳ ಸಮಯದಲ್ಲಿ ಕಾರ್ಯಕ್ರಮದ ಬಗ್ಗೆ ತಿಳಿಸಬೇಕು, ಸೂಚನಾ ಫಲಕಗಳಲ್ಲಿ ಮಾಹಿತಿ ಹಾಕಬೇಕು, ಆಯಾ ಕಾಲೇಜುಗಳ ವಾಹನಗಳ ಮೇಲೆ ಧ್ವಜ ಅಳವಡಿಸಲು ತಿಳಿಸಬೇಕು ಹಾಗೂ ಈ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಪ್ರತಿ ವಾರದ ಕೊನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್ ಸೈಟ್ kanbahvblgmai.com ಅಪ್ಲೋಡ್ ಮಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೂಚಿಸಿದ್ದಾರೆ.
ತಮ್ಮ ತಮ್ಮ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಲು ಬೋಧಕರು, ಬೋಧಕೇತರರು, ವಿದ್ಯಾರ್ಥಿಗಳನ್ನು ಮತ್ತು ಸಂಸ್ಥೆಗಳ ವಾಹನ ಚಾಲಕರನ್ನು ಪ್ರೇರೇಪಿಸಬೇಕು. ಕೇಂದ್ರ ಸರ್ಕಾರದ amritmahotsav.nic.in ಜಾಲತಾಣದಲ್ಲಿ ‘ಹರ್ ಘರ್ ತಿರಂಗಾ’ ಅಡಿಯಲ್ಲಿ ಈ ಸಂಬಂಧ ಇರುವ ಬ್ಯಾನರ್ ಮತ್ತು ಪೋಸ್ಟರ್ಗಳ ಮಾದರಿಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ.