ರಾಜ್ಯ ಸರ್ಕಾರವು ನಮ್ಮ ಮೆಟ್ರೋ ದರವನ್ನು 5% ಹೆಚ್ಚಿಸಲು ಅನುಮೋದನೆ ನೀಡಿದ್ದು, ಇದು ಫೆಬ್ರವರಿ 9 ರಿಂದ ಜಾರಿಗೆ ಬರಲಿದೆ. ಈ ಹಿಂದಿನ ಏರಿಕೆಯೊಂದಿಗೆ ಒಟ್ಟು ದರ 76% ಹೆಚ್ಚಳವಾದಂತಾಗಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಗಳಿಗಾಗಿ ಈ ಹೊರೆ ವಿಧಿಸಲಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ

ಬೆಂಗಳೂರು (ಫೆ.5): ಸಿಲಿಕಾನ್ ಸಿಟಿ ಜನಸಾಮಾನ್ಯರ ಜೀವನಾಡಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಕಳೆದ ಕೆಲ ದಿನಗಳ ಹಿಂದೆ ನಡೆದ ಬೋರ್ಡ್ ಮೀಟಿಂಗ್‌ನಲ್ಲಿ ಮೆಟ್ರೋ ದರ ಏರಿಕೆ ಮಾಡಲು ತೀರ್ಮಾನಿಸಲಾಗಿತ್ತು, ಅದಕ್ಕೆ ಈಗ ಸರ್ಕಾರ ಅಧಿಕೃತವಾಗಿ ಗ್ರೀನ್ ಸಿಗ್ನಲ್ ನೀಡಿದೆ. ಫೆಬ್ರವರಿ 9ರ ಸೋಮವಾರದಿಂದಲೇ ಜಾರಿಗೆ ಬರುವಂತೆ ಮೆಟ್ರೋ ಟಿಕೆಟ್ ದರದಲ್ಲಿ 5% ಹೆಚ್ಚಳ ಮಾಡಲು ನಿರ್ಧರಿಸಲಾಗಿದ್ದು, ಬಿಎಂಆರ್‌ಸಿಎಲ್ (BMRCL) ವತಿಯಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಳೆ ಗಾಯಕ್ಕೆ ಹೊಸ ಬರೆ: ಏರಿಕೆಯಾಗಲಿದೆ ಒಟ್ಟು ದರ

ಕಳೆದ ವರ್ಷ ಫೆಬ್ರವರಿ 9ರಂದು ಬಿಎಂಆರ್‌ಸಿಎಲ್ ಬರೋಬ್ಬರಿ 101.5% ರಷ್ಟು ದರ ಏರಿಕೆ ಮಾಡಿತ್ತು. ಆದರೆ ಪ್ರಯಾಣಿಕರ ತೀವ್ರ ಪ್ರತಿಭಟನೆ ಮತ್ತು ಆಕ್ರೋಶಕ್ಕೆ ಮಣಿದು ಮೂರೇ ದಿನಗಳಲ್ಲಿ ಅದನ್ನು 71.5% ಕ್ಕೆ ಇಳಿಸಲಾಗಿತ್ತು. ಈಗ ಮತ್ತೆ 5% ಏರಿಕೆ ಮಾಡುವ ಮೂಲಕ, ಒಟ್ಟು ದರ ಏರಿಕೆಯ ಪ್ರಮಾಣ 76% ಕ್ಕೆ ತಲುಪಿದಂತಾಗಲಿದೆ. ಇದು ದಿನನಿತ್ಯ ಮೆಟ್ರೋ ಅವಲಂಬಿಸಿರುವ ಲಕ್ಷಾಂತರ ಜನರಿಗೆ ಆರ್ಥಿಕವಾಗಿ ದೊಡ್ಡ ಹೊರೆಯಾಗಲಿದೆ.

ಮೆಟ್ರೋ ಪ್ರಯಾಣಿಕರ ಆಕ್ರೋಶ: 'ಗ್ಯಾರಂಟಿ' ಹಣಕ್ಕಾಗಿ ದರ ಏರಿಕೆಯೇ?

ಸರ್ಕಾರದ ಈ ನಿರ್ಧಾರಕ್ಕೆ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 'ನಗರದ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನಾವು ಮೆಟ್ರೋ ಅವಲಂಬಿಸಿದ್ದೇವೆ, ಆದರೆ ಪದೇ ಪದೇ ದರ ಹೆಚ್ಚಿಸಿದರೆ ಮಧ್ಯಮ ವರ್ಗದವರು ಬದುಕುವುದು ಹೇಗೆ?' ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ. ಇನ್ನೊಂದೆಡೆ, 'ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ವ್ಯಯ ಮಾಡುತ್ತಿದೆ, ಅದರ ನಷ್ಟ ತುಂಬಿಸಿಕೊಳ್ಳಲು ನಮ್ಮಂತಹ ಪ್ರಾಮಾಣಿಕ ತೆರಿಗೆದಾರರ ಮೇಲೆ ಹೊರೆ ಹಾಕುತ್ತಿರುವುದು ಸರಿಯಲ್ಲ' ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಳ್ಳಿಗರ ಆಸೆಗೂ ತಣ್ಣೀರು: ದರ ಇಳಿಕೆಗೆ ಹೆಚ್ಚಿದ ಒತ್ತಾಯ

ಕೇವಲ ನಗರವಾಸಿಗಳಲ್ಲದೆ, ಹಳ್ಳಿಗಳಿಂದ ನಗರಕ್ಕೆ ಬರುವವರು ಒಮ್ಮೆಯಾದರೂ ಮೆಟ್ರೋ ಏರಬೇಕು ಎಂಬ ಆಸೆ ಹೊಂದಿರುತ್ತಾರೆ. ಸ್ವಲ್ಪ ದರ ಕಡಿಮೆಯಾದರೆ ನಮಗೆ ಉಳಿತಾಯವಾಗುತ್ತದೆ, ಆದರೆ ಈ ರೀತಿ ಬೆಲೆ ಏರಿಕೆ ಮಾಡುತ್ತಾ ಹೋದರೆ ಸಾಮಾನ್ಯ ಜನರಿಗೆ ಮೆಟ್ರೋ ಎಟುಕದಂತಾಗುತ್ತದೆ' ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಿ, ಏರಿಕೆ ಮಾಡಿರುವ ದರವನ್ನು ಕೂಡಲೇ ಕೈಬಿಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.