ಮತ ಎಣಿಕೆಯ ನಂತರ, ಬಲಾಬಲ ಸಮಗೊಂಡಿದ್ದರಿಂದ ಲಾಟರಿ ಮೂಲಕ ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನಗಳ ಆಯ್ಕೆಯಿಂದಾಗಿ ಕುತೂಹಲ ಮೂಡಿಸಿದ್ದ ಜಿಲ್ಲೆಯ ಸುರಪುರ ತಾಲೂಕು ಕೆಂಭಾವಿ ಸಮೀಪದ ನಗನೂರು ಗ್ರಾಮ ಪಂಚಾಯಿತಿ ಚುನಾವಣೆ ಇದೀಗ ಚರ್ಚೆಗೆ ಗ್ರಾಸವಾಗಿ, ಕಾನೂನು ಸಮರಕ್ಕೆ ಸಿದ್ಧತೆಗಳು ನಡೆದಂತಿವೆ.

ಯಾದಗಿರಿ (ಆ.8) :  ಮತ ಎಣಿಕೆಯ ನಂತರ, ಬಲಾಬಲ ಸಮಗೊಂಡಿದ್ದರಿಂದ ಲಾಟರಿ ಮೂಲಕ ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನಗಳ ಆಯ್ಕೆಯಿಂದಾಗಿ ಕುತೂಹಲ ಮೂಡಿಸಿದ್ದ ಜಿಲ್ಲೆಯ ಸುರಪುರ ತಾಲೂಕು ಕೆಂಭಾವಿ ಸಮೀಪದ ನಗನೂರು ಗ್ರಾಮ ಪಂಚಾಯಿತಿ ಚುನಾವಣೆ ಇದೀಗ ಚರ್ಚೆಗೆ ಗ್ರಾಸವಾಗಿ, ಕಾನೂನು ಸಮರಕ್ಕೆ ಸಿದ್ಧತೆಗಳು ನಡೆದಂತಿವೆ.

Add Asianetnews Kannada as a Preferred SourcegooglePreferred

ಚುನಾವಣಾ ಪ್ರಕ್ರಿಯೆಯನ್ನು ನಿಯಮಗಳಾನುಸಾರ ಮಾಡಬೇಕಿದ್ದ ಸಂಬಂಧಿತ ಪಂಚಾಯಿತಿ ಚುನಾವಣಾಧಿಕಾರಿಗಳು, ಏಕಪಕ್ಷೀಯವಾಗಿ ವರ್ತಿಸಿ, ಒಂದು ಗುಂಪಿನ ಪರ ಮಾಡುವ ದುರುದ್ದೇಶದಿಂದ, ಚುನಾವಣಾ ಪ್ರಕ್ರಿಯೆ ನಡೆಸುವ ಅಧಿಕಾರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗೆ ಒಪ್ಪಿಸಿ, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ, ಚುನಾವಣಾ ಪ್ರಕ್ರಿಯೆ ನಿಯಮಗಳನುಸಾರ ನಡೆದಿಲ್ಲ ಎಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಶಂಕರಗೌಡ ಪೊಲೀಸ್‌ ಪಾಟೀಲ ದೂರಿದ್ದಾರೆ.

ಡಿಕೆಶಿ ಹಣ ಕೇಳಿಲ್ಲ ಎಂದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ: ಗುತ್ತಿಗೆದಾರ ಹೇಮಂತ್ ಸವಾಲು!

ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡುವ ಹಿನ್ನೆಲೆಯಲ್ಲಿ, ಯಾದಗಿರಿಗೆ ಆಗಮಿಸಿದ್ದ ಶಂಕರಗೌಡ ಮಾಧ್ಯಮಗಳೆದುರು ಅಂದು ನಡೆದ ಚುನಾವಣಾ ಪ್ರಕ್ರಿಯೆ ಕುರಿತು ಗಂಭೀರ ಆರೋಪಗಳನ್ನು ಮಾಡಿದರು. ಚುನಾವಣಾ ನಾಮಪತ್ರಗಳನ್ನು ಸ್ವೀಕರಿಸುವ ಪ್ರಕ್ರಿಯೆಯಿಂದ ಹಿಡಿದು ಆಯ್ಕೆಯಾಗುವವರೆಗೆ ನಿಯಮಗಳನ್ನು ಪಾಲಿಸಿಲ್ಲ ಅಲ್ಲಿನ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯೇ ಎಲ್ಲ ಪ್ರಕ್ರಿಯೆ ನಡೆಸಿದ್ದಾರಲ್ಲದೆ, ಲಾಟರಿ ಮೂಲಕ (ಚೀಟಿ ಎತ್ತುವ) ಆಯ್ಕೆ ಅನುಮಾನ ಮೂಡಿಸಿದೆ, ಇದಾದ ನಂತರ ಪ್ರಕ್ರಿಯೆ ವಿವರಗಳನ್ನು ನೀಡಲು ಚುನಾವಣಾಧಿಕಾರಿಗಳು ಹಿಂದೇಟು ಹಾಕುತ್ತಿದ್ದು, ಪಿಡಿಒ ಮೂಲಕ ಪಡೆಯಿರಿ ಎಂದು ನಮಗೆ ತಿಳಿಸಿರುವುದು ಅಚ್ಚರಿ ಮೂಡಿಸಿದೆ ಎಂದು ಆರೋಪಿಸಿದರು.

ಇಡೀ ಚುನಾವಣಾ ಪ್ರಕ್ರಿಯೆ ಬಗ್ಗೆ ವೀಡಿಯೋ ಚಿತ್ರೀಕರಣ ನಡೆಸಬೇಕಿತ್ತು. ಆದರೆ, ಅದಾಗಿಲ್ಲ ಎಂದು ಸಂಶಯ ವ್ಯಕ್ತಪಡಿಸಿದ ಶಂಕರಗೌಡ, ಚುನಾವಣಾಧಿಕಾರಿಯಾಗಿದ್ದ ಗುರುನಾಥ ಹಾಗೂ ಪಿಡಿಓ ಶ್ರೀಶೈಲ ಅವರ ಸಂಶಯಾಸ್ಪದ ನಡೆ ಹಾಗೂ ಇಲ್ಲಾಗಿರುವ ದೋಷಗಳ ಕುರಿತು ಸಮಗ್ರ ದಾಖಲೆಗಳ ಸಮೇತ ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಲಾಗುವುದು, ಕಾನೂನು ಹೋರಾಟ ನಡೆಸಲಾಗುವುದು ಎಂದರು.

ಲಾಟರಿ ಮೂಲಕ ಆಯ್ಕೆ

ಆ.4ರಂದು ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷ/ಉಪಾಧ್ಯಕ್ಷ ಚುನಾವಣೆಯ ವೇಳೆ ನಗನೂರು ಗ್ರಾಮ ಪಂಚಾಯ್ತಿಯ 19 ಸದಸ್ಯರಲ್ಲಿ ಒಂದು ಮತ ಅಸಿಂಧುಗೊಂಡು, ಎರಡೂ ಗುಂಪುಗಳ ಪರ ಸಮಬಲದ ಅಂದರೆ 9-9 ಮತಗಳು ಚಲಾವಣೆಗೊಂಡಿದ್ದವು. ಹೀಗಾಗಿ, ಲಾಟರಿ ಮೂಲಕ ಆಯ್ಕೆಯನ್ನು ನಡೆಸಾಗಿತ್ತು.

ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ನೀಡಿರುವ ದೂರು ನಮ್ಮದಲ್ಲ; ಜಂಟಿ ಕೃಷಿ ನಿರ್ದೇಶಕ ಸ್ಪಷ್ಟನೆ

ಅಧ್ಯಕ್ಷರಾಗಿ ಶಿವಶರಣರೆಡ್ಡಿ ಕೆಂಚಗೊಳ ಹಾಗೂ ಉಪಾಧ್ಯಕ್ಷೆಯಾಗಿ ಯಮುನವ್ವ ಆಯ್ಕೆಯಾಗಿದ್ದರು. ಒಟ್ಟು 19 ಸದಸ್ಯರಿದ್ದ, ಕಾಂಗ್ರೆಸ್‌ ಬೆಂಬಲಿತ ಈ ಪಂಚಾಯಿತಿ ಸದಸ್ಯರಲ್ಲಿ ಎರಡು ಗುಂಪುಗಳಾಗಿದ್ದವು. 9-9 ಮತಗಳು ಚಲಾವಣೆಗೊಂಡು, ಒಂದು ಮತ ಅಸಿಂಧುಗೊಂಡಿತ್ತು. ಸಮಬಲದ ಹಿನ್ನೆಲೆಯಲ್ಲಿ ಚೀಟಿ ಆಯ್ಕೆ ಮೂಲಕ ಘೋಷಿಸಲಾಗಿತ್ತು. ಈ ಸಂದರ್ಭದಲ್ಲಿ ಆರೋಪ-ಪ್ರತ್ಯಾರೋಪಗಳು ಮೂಡಿಬಂದು, ಪೊಲೀಸ್‌ ಮಧ್ಯಸ್ಥಿಕೆಯಲ್ಲಿ ಪರಿಸ್ಥಿತಿ ತಹಬದಿಗೆ ಬಂದಿತ್ತು.