ಅಮೆರಿಕದಲ್ಲಿ ಸಾಫ್ಟ್ವೇರ್ ಉದ್ಯಮದಲ್ಲಿರುವ ಕನ್ನಡಿಗನ ಜಾಗತಿಕ ಸಮಾಜ ಸೇವೆ..!
ಕರ್ನಾಟಕ ಸೇರಿ ಭಾರತದ ಹಲವು ರಾಜ್ಯಗಳಲ್ಲಿ ಸಮಾಜ ಸೇವೆ ನಡೆಸುತ್ತಿರುವ ಅವರು ಈಗ ತಮ್ಮ ಜೊತೆಗೆ ದಿಗ್ಗಜ ಕ್ರಿಕೆಟಿಗ, ವೆಸ್ಟ್ಇಂಡೀಸ್ನ ಸರ್ ವಿವ್ ರಿಚರ್ಡ್ಸ್ರನ್ನೂ ಭಾರತಕ್ಕೆ ಕರೆ ತಂದಿದ್ದಾರೆ.
ಬೆಂಗಳೂರು(ನ.23): ಭಾರತದಿಂದ ಉದ್ಯೋಗ ಅರಸಿ ವಿದೇಶಕ್ಕೆ ಹಾರಿದ ಮೇಲೆ ತಾಯ್ನಾಡನ್ನು ಮರೆಯುವವರೇ ಹೆಚ್ಚು. ಆದರೆ ಮೈಸೂರಿನ ಮಧ್ಯಮ ವರ್ಗದ ಯುವಕನೊಬ್ಬ ವಿದ್ಯಾಭ್ಯಾಸಕ್ಕೆಂದು 3 ದಶಕಗಳ ಹಿಂದೆ ಅಮೆರಿಕಕ್ಕೆ ಹೋಗಿ, ಅಲ್ಲಿಯೇ ಉದ್ಯಮ ಆರಂಭಿಸಿ, 8 ದೇಶಗಳಲ್ಲಿ ವಿ2 ಸಾಫ್ಟ್ ಎನ್ನುವ ಸಾಫ್ಟ್ವೇರ್ ಸಂಸ್ಥೆಯನ್ನು ಸ್ಥಾಪಿಸಿರುವ ವರ್ಚಸ್ವಿ ಶಂಕರ್ ಎಷ್ಟೇ ಎತ್ತರಕ್ಕೆ ಬೆಳೆದರೂ ಕರ್ನಾಟಕವನ್ನು ಮರೆತಿಲ್ಲ. ಕರ್ನಾಟಕ ಸೇರಿ ಭಾರತದ ಹಲವು ರಾಜ್ಯಗಳಲ್ಲಿ ಸಮಾಜ ಸೇವೆ ನಡೆಸುತ್ತಿರುವ ಅವರು ಈಗ ತಮ್ಮ ಜೊತೆಗೆ ದಿಗ್ಗಜ ಕ್ರಿಕೆಟಿಗ, ವೆಸ್ಟ್ಇಂಡೀಸ್ನ ಸರ್ ವಿವ್ ರಿಚರ್ಡ್ಸ್ರನ್ನೂ ಭಾರತಕ್ಕೆ ಕರೆ ತಂದಿದ್ದಾರೆ.
ಭಾರತದಲ್ಲೂ ಇರುವ ತಮ್ಮ ಸಾಫ್ಟ್ವೇರ್ ಸಂಸ್ಥೆಯಲ್ಲಿ ವರ್ಚಸ್ವಿ, ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿದ್ದು, ಐಕನೆಕ್ಟ್ ಎಕ್ಸ್ ಎನ್ನುವ ವೆಬ್ ವೇದಿಕೆಯ ಮೂಲಕ ಸಮಾಜಿಕ ಕಾರ್ಯಗಳಿಗೆ ಸಾರ್ವಜನಿಕ ದೇಣಿಗೆ ಸಂಗ್ರಹಕ್ಕೆ ಉಚಿತ ಅವಕಾಶವನ್ನೂ ಮಾಡಿಕೊಟ್ಟಿದ್ದಾರೆ.
ಉತ್ತರಕನ್ನಡ: ಇದ್ದೂ ಇಲ್ಲದಂತಾದ ಅಧಿಕಾರಿಗಳು, ರಸ್ತೆ ಗುಂಡಿ ಮುಚ್ಚುವ ವೃದ್ಧ..!
ಕರ್ನಾಟಕದ ಸರ್ಕಾರಿ ಶಾಲೆಗಳನ್ನು ಉಳಿಸುವ ಅಭಿಯಾನ ನಡೆಸುತ್ತಿರುವ ವರ್ಚಸ್ವಿ ಅವರು ವನ್ಯಜೀವಿ ಸಂರಕ್ಷಣೆಯಲ್ಲೂ ತಮ್ಮ ತೊಡಗಿಸಿಕೊಂಡಿದ್ದಾರೆ. ವನ್ಯಜೀವಿ ರಕ್ಷಣೆ ಮಾಡುತ್ತಿರುವ ಸಂಘ, ಸಂಸ್ಥೆಗಳ ಜೊತೆಗೂ ಕೈಜೋಡಿಸಿರುವ ಅವರು, ಕೋಟ್ಯಂತರ ರುಪಾಯಿ ಆರ್ಥಿಕ ನೆರವು ಸಹ ಒದಗಿಸುತ್ತಿದ್ದಾರೆ.
ಬಂಡೀಪುರದಲ್ಲಿ ರಣಹದ್ದು ಸಂರಕ್ಷಣೆಗೆ ಸಂಶೋಧನೆ ನಡೆಸಲು ಕೈಜೋಡಿಸಿರುವ ಅವರು, ಮಾನವ ಹಾಗೂ ವನ್ಯಜೀವಿ ಸಂಘರ್ಷಗಳನ್ನು ತಡೆಗಟ್ಟಲು ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.
ಕಾಡಂಚಿನ ಜನರಲ್ಲಿ ಸಮುದಾಯ ಆಧಾರಿತ ಕೃಷಿ ನಡೆಸಲು ಉತ್ತೇಜನ ನೀಡುತ್ತಿರುವ ಅವರು, ಸೋಲಾರ್ ಬೇಲಿಗಳನ್ನು ಅಳವಡಿಸಲು ಸಹ ನೆರವಿನ ಹಸ್ತ ಚಾಚ್ಚಿದ್ದಾರೆ.
ಪ್ರಶಸ್ತಿಗಾಗಿ ಕೆಲಸ ಮಾಡಿಲ್ಲ: ಹಾಜಬ್ಬ, ಮಹಾಲಿಂಗ ನಾಯ್ಕ್
ಇತ್ತೀಚೆಗೆ ಬೆಂಗಳೂರಲ್ಲಿ ತಮ್ಮ ವರ್ಚಸ್ವಿ ಸ್ಪಿರಿಟ್ಸ್ ಬ್ರ್ಯಾಂಡ್ ಅನಾವರಣ ಕಾರ್ಯಕ್ರಮಕ್ಕೆ ಸರ್ ರಿಚರ್ಡ್ಸ್ರೊಂದಿಗೆ ಆಗಮಿಸಿದ್ದ ವರ್ಚಸ್ವಿ ತಾವು ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ವರ್ಚಸ್ವಿ ಸ್ಫೂರ್ತಿ: ರಿಚರ್ಡ್ಸ್
ವರ್ಚಸ್ವಿ ಶಂಕರ್ ಅವರೊಂದಿಗೆ ಕೈಜೋಡಿಸಲು ಕಾರಣವೇನು ಎಂದು ಪತ್ರಕರ್ತರು ಸರ್ ರಿಚರ್ಡ್ಸ್ರನ್ನು ಪ್ರಶ್ನಿಸಿದಾಗ, ದಿಗ್ಗಜ ಕ್ರಿಕೆಟಿಗನಿಂದ ವಿಸ್ತೃತ ಉತ್ತರ ದೊರೆಯಿತು. ‘ಹಲವು ವರ್ಷಗಳಿಂದ ವರ್ಚಸ್ವಿ ಅವರೊಂದಿಗೆ ಒಡನಾಟವಿದೆ. ಅವರು ನಾನು ಕೆರಿಬಿಯನ್ ದ್ವೀಪಗಳಲ್ಲಿ ಸ್ತನ ಕ್ಯಾನ್ಸರ್ ಸಂಬಂಧ ನಡೆಸುತ್ತಿರುವ ಜಾಗೃತಿ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ನನ್ನ ಇನ್ನೂ ಹಲವು ಸಮಾಜಮುಖಿ ಕೆಲಸಗಳಲ್ಲಿ ಜೊತೆಗಿದ್ದಾರೆ. ಅಮೆರಿಕದಲ್ಲಿ ಭಾರತೀಯರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಹೀಗಿದ್ದರೂ ವರ್ಚಸ್ವಿ ಅವರು ಅಲ್ಲಿ ಉದ್ಯಮ ಆರಂಭಿಸಿ ಯಶಸ್ಸು ಕಂಡಿದ್ದಾರೆ. ಆ ದೇಶದಲ್ಲೂ ಅನೇಕ ರೀತಿಯ ಸಮಾಜಿಕ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ. ತಾಯ್ನಡಿನ ಬಗ್ಗೆ ಅವರ ಅಪಾರವಾದ ಅಭಿಮಾನ ಹಾಗೂ ಇಲ್ಲಿನ ಜನರ ಬಗ್ಗೆ ದೊಡ್ಡ ಮಟ್ಟದ ಕಾಳಜಿ ನನಗೆ ಬಹಳ ಹಿಡಿಸಿತು. ಇದೇ ಕಾರಣಕ್ಕೆ ನಾನು ಅವರ ಉತ್ಪನ್ನಗಳ ರಾಯಭಾರಿಯಾಗಲು ಒಪ್ಪಿಕೊಂಡೆ’ ಎಂದು ರಿಚರ್ಡ್ಸ್ ವಿವರಿಸಿದರು.