ಮೈಸೂರಿನ ಕೆನರಾ ಬ್ಯಾಂಕ್‌ನಲ್ಲಿ, ಗ್ರಾಹಕರು ಅಡವಿಟ್ಟ ಚಿನ್ನದ ತೂಕದಲ್ಲಿ ವ್ಯತ್ಯಾಸ ಮಾಡಿ ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್‌ನ ಅಧಿಕೃತ ಅಕ್ಕಸಾಲಿಗ ಅಶ್ವಿನ್ ಆಚಾರ್ ಅವರೇ ಈ ಕೃತ್ಯ ಎಸಗಿದ್ದು, ಗ್ರಾಹಕರ ದೂರಿನ ಮೇರೆಗೆ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮೈಸೂರು (ಡಿ.20) : ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನದ ತೂಕದಲ್ಲಿ ವ್ಯತ್ಯಾಸ ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದ ಪ್ರಕರಣವೊಂದು ಮೈಸೂರಿನ ಕೆನರಾ ಬ್ಯಾಂಕ್‌ನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಬ್ಯಾಂಕ್‌ನ ಅಧಿಕೃತ ಅಕ್ಕಸಾಲಿಗ (Appraiser) ಅಶ್ವಿನ್ ಆಚಾರ್ ಎಂಬುವವರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

Add Asianetnews Kannada as a Preferred SourcegooglePreferred

ಘಟನೆಯ ವಿವರ:

ಅಶ್ವಿನ್ ಆಚಾರ್ ಅವರು 2014ರಿಂದ ಕೆನರಾ ಬ್ಯಾಂಕ್‌ನಲ್ಲಿ ಅಕ್ಕಸಾಲಿಗರಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಬ್ಯಾಂಕ್‌ನ ಗ್ರಾಹಕರಾದ ಎಚ್.ವಿ. ಕಿರಣ್ ಮತ್ತು ಶ್ವೇತಾ ಎಂಬುವವರು ತಾವು ಅಡವಿಟ್ಟಿದ್ದ ಚಿನ್ನದ ತೂಕದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ದೂರಿನ ಬೆನ್ನಲ್ಲೇ, ಡಿಸೆಂಬರ್ 19, 2025 ರಂದು ರಾಧಾ ಎಂಬ ಮತ್ತೊಬ್ಬ ಗ್ರಾಹಕರು ತಾವು ಅಡವಿಟ್ಟಿದ್ದ ಚಿನ್ನದಲ್ಲಿ 3.573 ಗ್ರಾಂ ತೂಕ ಕಡಿಮೆ ಇರುವುದಾಗಿ ಬ್ಯಾಂಕ್‌ಗೆ ದೂರು ನೀಡಿದ್ದರು.

ತನಿಖೆಯಿಂದ ಬಯಲಾದ ವಂಚನೆ: 

ಗ್ರಾಹಕರ ಸರಣಿ ದೂರುಗಳಿಂದ ಎಚ್ಚೆತ್ತ ಬ್ಯಾಂಕ್ ಸಿಬ್ಬಂದಿ ಮತ್ತು ಪ್ರಾದೇಶಿಕ ವ್ಯವಸ್ಥಾಪಕರಾದ ರಾಜಶೇಖರ್ ಅವರು ಆಭರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ತೂಕದಲ್ಲಿ ವ್ಯತ್ಯಾಸವಿರುವುದು ದೃಢಪಟ್ಟಿದೆ. ಅಕ್ಕಸಾಲಿಗ ಅಶ್ವಿನ್ ಆಚಾರ್ ಅವರು ಗ್ರಾಹಕರು ನಂಬಿಕೆಯಿಂದ ಇಟ್ಟಿದ್ದ ಚಿನ್ನದಲ್ಲಿ ಕೈಚಳಕ ತೋರಿಸಿ ವಂಚಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಮೈಸೂರು ಕೆನರಾ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಬಂಗಾರಕ್ಕೆ ಕನ್ನ! 85 ಗುಂಡು ಕೊಟ್ಟರೆ 77 ಮಾತ್ರ ವಾಪಸ್

ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ರಾಜಶೇಖರ್ ಅವರು ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಮೈಸೂರಿನ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಬ್ಯಾಂಕ್‌ನಲ್ಲೇ ಇಂತಹ ವಂಚನೆ ನಡೆದಿರುವುದು ಈಗ ಗ್ರಾಹಕರಲ್ಲಿ ಆತಂಕ ಮೂಡಿಸಿದೆ.