ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಜೈಲುಪಾಲಾಗಿರುವ ಮುರುಘಾ ಮಠದ ಸ್ವಾಮೀಜಿಯ ವಿರುದ್ಧ ಶುಕ್ರವಾರ ಮತ್ತಷ್ಟು ಎಫ್‌ಐಆರ್‌ ದಾಖಲಾಗಿದೆ. ಇದರ ನಡುವೆ ಅವರನ್ನು ಮುರುಘಾ ಮಠದ ಪೀಠಾಧಿಪತಿ ಸ್ಥಾನದಿಂದ ವಜಾಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಬೆಂಗಳೂರು (ಅ. 14): ಮುರಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಪೀಠಾಧಿಪತಿ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಸರ್ಕಾರಕ್ಕೆ ನಿಯೋಗವೊಂದು ಶುಕ್ರವಾರ ಮನವಿ ಸಲ್ಲಿಸಿದೆ. ಮಾಜಿ ಸಚಿವ ಏಕಾಂತಯ್ಯ‌ ನೇತೃತ್ವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ನಿಯೋಗ ಮನವಿ ಮಾಡಿದೆ. ಸಿಎಂ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ನಿಯೋಗ ಭೇಟಿಯಾಗಿ ಮನವಿ ಮಾಡಿದೆ. ಈ ವೇಳೆ ಮಾಜಿ ಶಾಸಕ ತಿಪ್ಪೇರುದ್ರಪ್ಪ, ಜಿ.ಎಸ್. ಮಂಜುನಾಥ್, ‌ಎಂಎಲ್ ಸಿ ನವೀನ್ ,ಮಹಡಿ ಶಿವಮೂರ್ತಿ,‌ ಜಿಲ್ಲಾಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು. ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ. ಮುರುಘಾ ಶ್ರೀಗಳಿಂದ ಪವರ್ ಆಫ್ ಅಟಾರ್ನಿ ಪಡೆಯುವ ಬಗ್ಗೆಯೂ ಈ ವೇಳೆ ಚರ್ಚೆಯಾಗಿದೆ. ಅಧಿಕೃತವಾಗಿ ಮಠದ ಪ್ರಭಾರ ಪೀಠಾಧ್ಯಕ್ಷರ ಆಯ್ಕೆ ಬಗ್ಗೆಯೂ ಈ ವೇಳೆ ಚರ್ಚೆಯಾಗಿದೆ. ಇದಕ್ಕಾಗಿ ಮುರುಘಾ ಶ್ರೀಗಳಿಂದ ಅಧಿಕೃತ ಸಹಿ, ಒಪ್ಪಿಗೆ ಪಡೆಯುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಎಸ್ ಜೆ ಎಮ್ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಬಿ.ವಸ್ತ್ರದಮಠ್ ಗೆ ಪವರ್ ಆಫ್ ಅಟಾರ್ನಿ ನೀಡಲಾಗುವ ಸಾಧ್ಯತೆ ಇದ್ದು, ಹೆಬ್ಬಾಳ ಮಠದ ಮಹಾಂತ ರುದ್ರೇಶ್ವರ ಶ್ರೀಗೆ ಪ್ರಭಾರ ಪೀಠಾಧ್ಯಕ್ಷರಾಗಿ ಅಧಿಕೃತ ಮುದ್ರೆಗೆ ಚಿಂತನೆ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುರುಘಾ ಮಠದ ಆಡಳಿತ ಮಂಡಳಿಯ ಶಿಫಾರಸ್ಸು ಹಿನ್ನೆಲೆಯಲ್ಲಿ ಈ ಎಲ್ಲಾ ಚರ್ಚೆ ಆಗಿದೆ. ವಕೀಲರಿಂದ ಕಾನೂನು ಸಲಹೆ ಪಡೆದು ಮುರುಘಾಶ್ರೀ ಭೇಟಿ ನಡೆಯಲಿದೆ. ವಕೀಲರಾದ ವಿಶ್ವನಾಥಯ್ಯ, ಉಮೇಶ ಜತೆ ಎಸ್ ಜೆ ಎಮ್ ಕಾರ್ಯದರ್ಶಿ ವಸ್ತ್ರದಮಠ ಚರ್ಚೆ ನಡೆಸಲಿದ್ದಾರೆ. ಜೈಲಲ್ಲಿರುವ ಮುರುಘಾಶ್ರೀ ಭೇಟಿ ಬಳಿಕ ಕಾನೂನು ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.

ಮುರುಘಾ ಮಠಕ್ಕೆ ಭೇಟಿ ನೀಡಿದ ವಕೀಲರು: ಮುರುಘಾ ಮಠಕ್ಕೆ (Murugha Mutt) ಭೇಟಿ ನೀಡಿ ವಕೀಲರು ಚರ್ಚೆ ಮಾಡಿದ್ದಾರೆ. ಎಸ್ ಜೆ ಎಮ್ ವಿದ್ಯಾಪೀಠದ (SJM Vidhyapeeth) ಕಾರ್ಯದರ್ಶಿ ನಿವೃತ್ತ ನ್ಯಾ. ಎಸ್.ಬಿ.ವಸ್ತ್ರದಮಠ ಜತೆ ವಕೀಲರು (Lawyers) ಮಾತುಕತೆ ನಡೆಸಿದ್ದಾರೆ. ಚರ್ಚೆ ಬಳಿಕ ಮಾತನಾಡಿದ ವಕೀಲ ಕೆ ಎನ್ ವಿಶ್ವನಾಥಯ್ಯ ಹಾಗೂ ಉಮೇಶ್‌, ಮುರುಘಾಶ್ರೀ ವಿರುದ್ಧ ಮತ್ತೊಂದು ಕೇಸ್ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಮಾಧ್ಯಮಗಳ ಮೂಲಕ ಪ್ರಕರಣದ ಮಾಹಿತಿ ಸಿಕ್ಕಿದೆ. ಅಧಿಕೃತ ದಾಖಲೆ ಪಡೆದು ಮುಂದಿನ ನಡೆ ಬಗ್ಗೆ ಹೇಳುತ್ತೇವೆ. ಮುರುಘಾ ಶ್ರೀ ಪವರ್ ಆಫ್ ಅಟಾರ್ನಿ(Power Of Atorney) ನೀಡಲು ಹೈಕೋರ್ಟ್ (High Court) ಅವಕಾಶ ನೀಡಿದೆ. ಈ ಬಗ್ಗೆ ಮಠದ ಗವರ್ನಿಂಗ್ ಕೌನ್ಸಿಲ್‌ಅನ್ನು ಮುರುಘಾಶ್ರೀ ನಿರ್ಧರಿಸುತ್ತಾರೆ ಅಧಿಕೃತವಾಗಿ ಮಠದ ಪ್ರಭಾರ ಪೀಠಾಧ್ಯಕ್ಷರ ನೇಮಕ ವಿಚಾರ ನಮಗೆ ಮಾಹಿತಿ ಇಲ್ಲ. ಮಠದಲ್ಲಿ ಎಲ್ಲಾ ರೀತಿಯ ಕಾರ್ಯಗಳು ನಡೆಯುತ್ತಿವೆ ಯಾವುದೇ ಸಮಸ್ಯೆ ಆಗಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ನೀಡದೇ ತೆರಳಿದ್ದಾರೆ.