Asianet Suvarna News Asianet Suvarna News

ಮುಂಬೈ ಕರ್ನಾಟಕಕ್ಕೆ ಮರುನಾಮಕರಣ, ಶೀಘ್ರ ಕಿತ್ತೂರು ಕರ್ನಾಟಕ: ಸಿಎಂ

  •  ಮುಂಬೈ ಕರ್ನಾಟಕಕ್ಕೆ ಮರುನಾಮಕರಣ
  • ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ
  • ವಿಧಾನಸೌಧದಲ್ಲಿ ಸಿದ್ದು ಜತೆ ಚರ್ಚೆಗೆ ನಾನು ಸಿದ್ಧ: ಸಿಎಂ
Mumbai Karnataka to be renamed as Kittur Karnataka dpl
Author
Bangalore, First Published Oct 24, 2021, 8:47 AM IST

ಬೆಳಗಾವಿ(ಅ.25): ಹೈದರಾಬಾದ್‌ ಕರ್ನಾಟಕ ‘ಕಲ್ಯಾಣ ಕರ್ನಾಟಕ’ವಾಗಿ ಮರುನಾಮಕರಣವಾದ ರೀತಿಯಲ್ಲೇ ಉತ್ತರ ಕರ್ನಾಟಕ ಭಾಗದ ಬಹುದಿನದ ಬೇಡಿಕೆಯಾದ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು-ಕರ್ನಾಟಕ ಎಂದು ಘೋಷಿಸಬೇಕೆನ್ನುವ ಬೇಡಿಕೆಗೆ ಶೀಘ್ರದಲ್ಲೇ ಸರ್ಕಾರದ ಅಧಿಕೃತ ಮುದ್ರೆ ಬೀಳಲಿದೆ. ಈ ಘೋಷಣೆ ಸಂಬಂಧ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ಹೇಳಿದ್ದಾರೆ.

ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಆಶ್ರಯದಲ್ಲಿ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಕಿತ್ತೂರು ಉತ್ಸವ-2021ಕ್ಕೆ ಶನಿವಾರ ಚಾಲನೆ ನೀಡಿ ಅವರು ಈ ಭರವಸೆ ನೀಡಿದರು. ಜತೆಗೆ, ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವಾಗಿ ಘೋಷಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಅಗತ್ಯ ಕ್ರಮವನ್ನು ಕೈಗೊಳ್ಳಲಿದೆ ಎಂದೂ ಬೊಮ್ಮಾಯಿ ತಿಳಿಸಿದರು.

ಚರ್ಚೆಗೆ ಬರಲು ಸಿಎಂಗೆ ಧೈರ್ಯ ಇಲ್ಲ: ಸಿದ್ದರಾಮಯ್ಯ

ಈ ಹಿಂದೆ ಕಿತ್ತೂರು ಜ್ಯೋತಿಯು ಬೆಳಗಾವಿ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಸಂಚರಿಸುತ್ತಿತ್ತು. ಅದೇ ರೀತಿ ಮುಂದಿನ ಉತ್ಸವ ಸಂದರ್ಭದಲ್ಲಿ ವೀರಜ್ಯೋತಿ ರಾಜ್ಯಾದ್ಯಂತ ಸಂಚರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಆದೇಶಿಸಲಾಗುವುದು ಎಂದರು.

ಮಾಸ್ಟರ್‌ಪ್ಲ್ಯಾನ್‌ಗೆ ಹೆಚ್ಚಿನ ಅನುದಾನ:

ಕಿತ್ತೂರು ಚನ್ನಮ್ಮ ಪ್ರಾಧಿಕಾರದ ಮಾಸ್ಟರ್‌ಪ್ಲ್ಯಾನ್‌ಗೆ ಒಟ್ಟಾರೆ .200 ಕೋಟಿ ಅನುದಾನ ನೀಡಬೇಕು ಎಂಬ ಬೇಡಿಕೆ ಇದೆ. ಮುಂದಿನ ಆಯವ್ಯಯದಲ್ಲಿ ಪ್ರಾಧಿಕಾರಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು. ಸಂಗೊಳ್ಳಿ ಸೈನಿಕ ಶಾಲೆ ಕೂಡ ಮುಕ್ತಾಯ ಹಂತದಲ್ಲಿದೆ. ರಕ್ಷಣಾ ಇಲಾಖೆ ಜತೆ ಚರ್ಚಿಸಿ ಶಾಲೆಯನ್ನು ರಾಜ್ಯ ಸರ್ಕಾರದ ವ್ಯಾಪ್ತಿಗೆ ಸೇರಿಸಿ ಉನ್ನತ ಮಟ್ಟದ ಮಿಲಿಟರಿ ಶಾಲೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

50 ಕೋಟಿ:

ಕಿತ್ತೂರು ಉತ್ಸವದಲ್ಲಿ ಪಾಲ್ಗೊಳ್ಳುವ ಮೊದಲು ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ರಾಣಿ ಚನ್ನಮ್ಮನ ಜಯಂತಿ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಬೊಮ್ಮಾಯಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತುತ ವರ್ಷ .50 ಕೋಟಿ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗುವುದು ಎಂದೂ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

Follow Us:
Download App:
  • android
  • ios