ಸಂಸದ ಡಾ.ಕೆ.ಸುಧಾಕರ್ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಕೋವಿಡ್ ಸಮಯದಲ್ಲಿ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳೊಂದಿಗೆ ತಮ್ಮ ಚಿಕ್ಕಬಳ್ಳಾಪುರದ ನಿವಾಸದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು. ಮಕ್ಕಳೊಂದಿಗೆ ಭೋಜನ ಮಾಡಿ, ಅವರ ಯೋಗಕ್ಷೇಮ ಮತ್ತು ಶೈಕ್ಷಣಿಕ ಪ್ರಗತಿಯ ಬಗ್ಗೆ ವಿಚಾರಿಸಿದರು.

ಚಿಕ್ಕಬಳ್ಳಾಪುರ (ಅ.22): ಕೋವಿಡ್ ಸಮಯದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳೊಂದಿಗೆ ಸಂಸದ ಡಾ.ಕೆ.ಸುಧಾಕರ್‌ ದೀಪಾವಳಿ ಆಚರಿಸಿದರು.

ಪ್ರತಿ ವರ್ಷವೂ ಸಂಸದ ಡಾ.ಕೆ.ಸುಧಾಕರ್ ಅವರು ಅನಾಥ ಮಕ್ಕಳೊಂದಿಗೆ ತಮ್ಮ ಮನೆಯಲ್ಲಿ ದೀಪಾವಳಿ ಹಬ್ಬ ಆಚರಿಸುತ್ತಾರೆ. ಕೋವಿಡ್ ಸಮಯದಲ್ಲಿ ತಂದೆ, ತಾಯಿ ಹಾಗೂ ಕುಟುಂಬವನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಸಂಸದರು ಹಲವು ರೀತಿಯಲ್ಲಿ ನೆರವು ನೀಡಿದ್ದಾರೆ. ಅವರಿಗೆ ಇನ್ನಷ್ಟು ಪ್ರೋತ್ಸಾಹ, ಬೆಂಬಲ ನೀಡುವುದರ ಸೂಚಕವಾಗಿ ಪ್ರತಿ ವರ್ಷ ದೀಪಾವಳಿ ಹಬ್ಬವನ್ನು ಮಕ್ಕಳೊಂದಿಗೆ ಆಚರಣೆ ಮಾಡುತ್ತಿದ್ದಾರೆ.

ಅನಾಥ ಮಕ್ಕಳ ಜತೆ ಭೋಜನ:

ಈ ಬಾರಿಯ ಹಬ್ಬದಂದು ಚಿಕ್ಕಬಳ್ಳಾಪುರದ ತಮ್ಮ ನಿವಾಸದಲ್ಲಿ ಮಕ್ಕಳೊಂದಿಗೆ ಭೋಜನ ಮಾಡಿದ ಸಂಸದ ಡಾ.ಕೆ.ಸುಧಾಕರ್, ಅವರ ಯೋಗಕ್ಷೇಮ, ಶೈಕ್ಷಣಿಕ ಪ್ರಗತಿಯ ಬಗ್ಗೆ ವಿಚಾರಿಸಿದರು.

ಅನಾಥ ಮಕ್ಕಳಿಗೆ ಸಂಸದ ಸುಧಾಕರ್ ಶೈಕ್ಷಣಿಕ ನೆರವು

ಈ ವೇಳೆ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, ದೀಪಾವಳಿ ಹಬ್ಬ ಎಂದರೆ ಇಡೀ ಕುಟುಂಬಕ್ಕೆ ಸಡಗರ ಹಾಗೂ ಸಂಭ್ರಮ. ಕೋವಿಡ್ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹತ್ತು ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡಿದ್ದರು. ಆಗ ಸಚಿವನಾಗಿದ್ದ ನಾನು, ಆ ಮಕ್ಕಳನ್ನು ದತ್ತು ಪಡೆದು, ಅವರ ಹೆಸರಿನಲ್ಲಿ ಠೇವಣಿ ಇಟ್ಟು, ಸಂಪೂರ್ಣ ಶೈಕ್ಷಣಿಕ ನೆರವು ನೀಡುತ್ತಿದ್ದೇನೆ ಎಂದರು.

ಈ ಮಕ್ಕಳಲ್ಲಿ ಎಲ್ಲ ಧರ್ಮ, ಜಾತಿಯವರಿದ್ದಾರೆ. ಪ್ರತಿ ವರ್ಷ ಇವರೊಂದಿಗೆ ದೀಪಾವಳಿ ಹಬ್ಬದ ಪೂಜೆ ಮಾಡಿ, ಭೋಜನ ಮಾಡುತ್ತೇನೆ. ಇದನ್ನು ಭಗವಂತನ ಸೇವೆಯಂತೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.