Asianet Suvarna News Asianet Suvarna News

ಇಡೀ ರಾಜ್ಯ ವ್ಯಾಪಿಸಿದ ಮುಂಗಾರು: ಇಂದು ಭಾರೀ ಮಳೆ, ಯೆಲ್ಲೋ ಅಲರ್ಟ್‌ನ ಎಚ್ಚರಿಕೆ

ವಾಡಿಕೆಗಿಂತ ನಾಲ್ಕು ದಿನ ಮೊದಲೇ ಇಡೀ ರಾಜ್ಯವನ್ನು ಮುಂಗಾರು ವ್ಯಾಪಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಜೂನ್‌ 1ರ ಶನಿವಾರ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿತ್ತು. ಇದಾದ ಕೇವಲ ಐದು ದಿನದಲ್ಲಿ ಇಡೀ ರಾಜ್ಯವನ್ನು ವ್ಯಾಪಿಸಿದ್ದು, ಈ ಮೂಲಕ ವಾಡಿಕೆಗಿಂತ ನಾಲ್ಕು ದಿನ ಮೊದಲೇ ಇಡೀ ರಾಜ್ಯವನ್ನು ವ್ಯಾಪಿಸಿದೆ.
 

Monsoon sweeps the entire state Heavy rain today yellow alert gvd
Author
First Published Jun 7, 2024, 6:48 AM IST | Last Updated Jun 7, 2024, 6:48 AM IST

ಬೆಂಗಳೂರು (ಜೂ.07): ವಾಡಿಕೆಗಿಂತ ನಾಲ್ಕು ದಿನ ಮೊದಲೇ ಇಡೀ ರಾಜ್ಯವನ್ನು ಮುಂಗಾರು ವ್ಯಾಪಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಜೂನ್‌ 1ರ ಶನಿವಾರ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿತ್ತು. ಇದಾದ ಕೇವಲ ಐದು ದಿನದಲ್ಲಿ ಇಡೀ ರಾಜ್ಯವನ್ನು ವ್ಯಾಪಿಸಿದ್ದು, ಈ ಮೂಲಕ ವಾಡಿಕೆಗಿಂತ ನಾಲ್ಕು ದಿನ ಮೊದಲೇ ಇಡೀ ರಾಜ್ಯವನ್ನು ವ್ಯಾಪಿಸಿದೆ. ಮುಂದಿನ 24 ಗಂಟೆಯಲ್ಲಿ ಉತ್ತರ ಒಳನಾಡಿನ ಬೆಳಗಾವಿ, ಕಲಬುರಗಿ, ವಿಜಯಪುರ, ಯಾದಗಿರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, 6 ರಿಂದ 11 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್‌ನ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಕರಾವಳಿ ಜಿಲ್ಲೆಗಳಲ್ಲಿ ಸ್ವಲ್ಪ ಪ್ರಮಾಣದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಜೂನ್‌ 9 ರಿಂದ ಮಳೆ ಪ್ರಮಾಣ ಮತ್ತೆ ಹೆಚ್ಚಾಗಲಿದೆ. ಮುಂದಿನ ಎರಡ್ಮೂರು ದಿನ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ರಾಜ್ಯದಲ್ಲಿ ಜೂನ್‌ 13ರ ವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹವಾಮಾನ ವರದಿ ಪ್ರಕಾರ, ಕಲಬುರಗಿಯಲ್ಲಿ ಅತಿ ಹೆಚ್ಚು 7 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಮಾಗಡಿ 6, ಬೀದರ್‌ನ ಮಂಠಾಳ ಹಾಗೂ ಕೋಲಾರದ ರಾಯಲ್ಬಾಡುನಲ್ಲಿ ತಲಾ 5, ಮಧುಗಿರಿ, ಅಜ್ಜಂಪುರ, ಬೆಳ್ಳೂರಿನಲ್ಲಿ ತಲಾ 4, ಮಣಿ, ಮಂಕಿ, ನಾರಾಯಣಪುರ, ಸಿ.ಆರ್‌.ಪಾಟ್ನಾ ಹಾಗೂ ಹಿರಿಯೂರಿನಲ್ಲಿ ತಲಾ 3 ಸೆಂ.ಮೀ ಮಳೆಯಾದ ವರದಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರೈತ ಮೊಗದಲ್ಲಿ ಸಂತಸ: ಮಳೆರಾಯ ಮಧ್ಯರಾತ್ರಿಯವರೆಗೂ ಎಡಬಿಡದೆ ನಿರಂತರವಾಗಿ ಸುರಿಯುತ್ತಲೇ ಇದುದ್ದರಿಂದ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕೋಲಾರದ ಜನತೆಯು ಕತ್ತಲೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ಒದಗಿಬಂತು. ರಾತ್ರಿ ೭ ಗಂಟೆಗೆ ಪ್ರಾರಂಭವಾದ ಮಳೆರಾಯ ಗುಡುಗು, ಸಿಡಿಲಿನ ಮೂಲಕ ರಾತ್ರಿಯಿಡೀ ಸುರಿಯುತ್ತಲೇ ಇತ್ತು.ಇದರಿಂದ ಹಲವೆಡೆ ವಿದ್ಯುತ್ ಅಡಚಣೆ ಉಂಟಾಯಿತು. ಮಳೆ ಗಾಳಿಗೆ ಹಲವೆಡೆ ಮರಗಳು ಧರೆಗುರುಳಿದವು. ಬಂಗಾರಪೇಟೆ ತಾಲೂಕಿನ ಮಾವಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ೪೮ ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಬಿದ್ದ ಪ್ರದೇಶವಾಗಿದೆ.

ಬಿಜೆಪಿ ಮೊದಲು ಕಾನೂನು ಸುವ್ಯವಸ್ಥೆಯ ಡೆಫಿನೆಷನ್ ಹೇಳಲಿ: ಗೃಹಸಚಿವ ಪರಮೇಶ್ವರ್

ಇನ್ನುಳಿದಂತೆ ಕೋಲಾರ ತಾಲೂಕಿನ ಅಮ್ಮನಲ್ಲೂರು ಪಂಚಾಯಿತಿ ವ್ಯಾಪ್ತಿಯಲ್ಲಿ ೪.೧ ಸೆಂಮೀ., ಹರಟಿಯಲ್ಲಿ ೨ ಸೆಂಮೀ., ಬೆಳ್ಳೂರಿನಲ್ಲಿ ೧.೪ ಸೆಂ.ಮೀ., ಬಂಗಾರಪೇಟೆ ತಾಲೂಕಿನ ಎನ್.ಜಿ.ಹುಲ್ಕೂರಿನಲ್ಲಿ ೨.೯ ಸೆಂ.ಮೀ., ಮಾಲೂರು ತಾಲೂಕಿನ ಶಿವರಾಯಪಟ್ಟಣದಲ್ಲಿ ೨ ಸೆಂ.ಮೀ., ಮುಳಬಾಗಿಲು ತಾಲೂಕಿನ ಮೋತಕಪಲ್ಲಿಯಲ್ಲಿ ೨.೮ ಸೆಂ.ಮೀ,, ಆಲಂಗೂರಿನಲ್ಲಿ ೨.೫ ಸೆಂ.ಮೀ., ಎಮ್ಮೆನತ್ತದಲ್ಲಿ ೨.೩ ಸೆಂ.ಮೀ., ಶ್ರೀನಿವಾಸಪುರ ತಾಲೂಕಿನ ಯರಂವಾರಿಪಳ್ಳಿಯಲ್ಲಿ ೨.೪ ಸೆಂ.ಮೀ. ಹಾಗೂ ಗೌನಿಪಲ್ಲಿಯಲ್ಲಿ ೧.೭ ಸೆಂ.ಮೀ. ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ. ಬಿರುಸಿನ ಮಳೆಯಿಂದಾಗಿ ನಗರದ ರಸ್ತೆಗಳು ಉಕ್ಕಿ ಹರಿದವು. ರೈಲ್ವೆ ಅಂಡರ್‌ಪಾಸ್ ಬಳಿ ನೀರು ತುಂಬಿಕೊಂಡಿತ್ತು. ವಾಹನ ಸವಾರರು ಹಾಗೂ ಪಾದಚಾರಿಗಳು ಯಾತನೆ ಅನುಭವಿಸಿದರು. ಅಂತರಗಂಗೆ ರಸ್ತೆಯ ರೈಲ್ವೆ ಅಂಡರ್‌ಪಾಸ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಬಳಿ ಕೀಲುಕೋಟೆಗೆ ತೆರಳುವ ರೈಲ್ವೆ ಅಂಡರ್‌ಪಾಸ್‌ನಲ್ಲಿ ಕೂಡ ತೊಂದರೆ ಉಂಟಾಯಿತು.

Latest Videos
Follow Us:
Download App:
  • android
  • ios