ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ಯುವತಿಗೆ ಸಂದೇಶ ಕಳುಹಿಸಲಾಗಿದೆ ಎಂಬ ಆರೋಪ ವೈರಲ್ ಆಗಿದೆ. ಈ ಘಟನೆಯಿಂದ ತಮ್ಮ ತೇಜೋವಧೆಯಾಗಿದೆ ಎಂದು ಹೇಳಿರುವ ಶಾಸಕರು, ತಮ್ಮ ಖಾತೆ ಹ್ಯಾಕ್ ಆಗಿದ್ದು, ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಜ.07): ಜಯನಗರ ಕ್ಷೇತ್ರದ ಶಾಸಕ ಸಿ.ಕೆ. ರಾಮಮೂರ್ತಿ ಅವರು ಯುವತಿಯೊಬ್ಬಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕಳುಹಿಸಿದ್ದಾರೆ ಎನ್ನಲಾದ ವಿಚಾರವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಬೆಳವಣಿಗೆಯಿಂದ ಎಚ್ಚೆತ್ತಿರುವ ಶಾಸಕರು, ತಮ್ಮ ಅಧಿಕೃತ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಪ್ರಕರಣ?

ಅನುಷ್ಕಾ ಎಂಬ ಯುವತಿಯ ಇನ್‌ಸ್ಟಾಗ್ರಾಮ್ ಖಾತೆಗೆ ಶಾಸಕ ಸಿ.ಕೆ. ರಾಮಮೂರ್ತಿ ಅವರ ಅಧಿಕೃತ ಖಾತೆಯಿಂದ 'ಗುಡ್ ಮಾರ್ನಿಂಗ್' ಮತ್ತು 'ಗುಡ್ ನೈಟ್' ಎಂಬ ಸಂದೇಶಗಳು ಬಂದಿವೆ ಎನ್ನಲಾಗಿದೆ. ಶಾಸಕರು ತಮಗೆ ಸಂದೇಶ ಕಳುಹಿಸಿರುವ ಸ್ಕ್ರೀನ್ ಶಾಟ್‌ಗಳನ್ನು (Screenshots) ಯುವತಿ ತನ್ನ ಇನ್‌ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದಾಳೆ. ಇದು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ವಿರುದ್ಧ ಟ್ರೋಲ್‌ಗಳು ಶುರುವಾದವು.

ಶಾಸಕರ ಸ್ಪಷ್ಟನೆ ಮತ್ತು ದೂರು

ಈ ವಿಚಾರವಾಗಿ ತಕ್ಷಣವೇ ಪ್ರತಿಕ್ರಿಯಿಸಿರುವ ಶಾಸಕ ಸಿ.ಕೆ. ರಾಮಮೂರ್ತಿ, 'ನನ್ನ ಇನ್‌ಸ್ಟಾಗ್ರಾಮ್ ಖಾತೆಯು ದುಷ್ಕರ್ಮಿಗಳಿಂದ ಹ್ಯಾಕ್ ಆಗಿದೆ. ನಾನು ಯಾರಿಗೂ ಈ ರೀತಿಯ ಸಂದೇಶಗಳನ್ನು ಕಳುಹಿಸಿಲ್ಲ. ಈ ಕೃತ್ಯದ ಹಿಂದೆ ನನ್ನ ತೇಜೋವಧೆ ಮಾಡುವ ಸಂಚು ಅಡಗಿರಬಹುದು' ಎಂದು ತಿಳಿಸಿದ್ದಾರೆ. ತಮ್ಮ ಹೆಸರಿನಲ್ಲಿ ನಡೆಯುತ್ತಿರುವ ಈ ನಕಲಿ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿ ಅವರು ಸೈಬರ್ ಕ್ರೈಂ ಪೊಲೀಸರಿಗೆ (Cyber Police) ದೂರು ನೀಡಲು ನಿರ್ಧರಿಸಿದ್ದಾರೆ. ಹ್ಯಾಕರ್‌ಗಳು ತಮ್ಮ ಖಾತೆಯನ್ನು ದುರ್ಬಳಕೆ ಮಾಡಿಕೊಂಡು ಇಂತಹ ಸಂದೇಶಗಳನ್ನು ಕಳುಹಿಸಿದ್ದಾರೆ ಎಂಬುದು ಶಾಸಕರ ವಾದವಾಗಿದೆ.

ಟ್ರೋಲಿಗರಿಗೆ ಆಹಾರವಾದ ವಿವಾದ

ಒಟ್ಟಾರೆಯಾಗಿ ವಿಚಾರ ಏನಿದ್ದರೂ, ರಾಜಕೀಯ ಮುಖಂಡರೊಬ್ಬರ ಖಾತೆಯಿಂದ ಯುವತಿಯೊಬ್ಬಳಿಗೆ ವೈಯಕ್ತಿಕ ಸಂದೇಶ ಹೋಗಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕೆಲವರು ಇದನ್ನು ಟ್ರೋಲ್ ಮಾಡುತ್ತಿದ್ದರೆ, ಇನ್ನು ಕೆಲವರು ಹ್ಯಾಕಿಂಗ್ ಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸೈಬರ್ ಪೊಲೀಸರ ತನಿಖೆಯ ನಂತರವಷ್ಟೇ ಈ ಸಂದೇಶಗಳನ್ನು ಶಾಸಕರೇ ಕಳುಹಿಸಿದ್ದೇ ಅಥವಾ ಹ್ಯಾಕರ್ಸ್ ಕೈವಾಡವೇ ಎಂಬ ಸತ್ಯಾಂಶ ಹೊರಬರಬೇಕಿದೆ.