ಬಿಜೆಪಿಯ ಸಂ'ಕ್ರಾಂತಿ' ಒಂದು ಜೋಕ್: ಸತೀಶ್ ಜಾರಕಿಹೊಳಿ!
ಸರ್ಕಾರ ಬೀಳಲ್ಲ, ನೀವು ನಿಶ್ಚಿಂತೆಯಿಂದಿರಿ ಎಂದ ಸತೀಶ್ ಜಾರಕಿಹೊಳಿ| 'ಸಂಕ್ರಾಂತಿ ಬಳಿಕ ಸರ್ಕಾರ ಬೀಳತ್ತೆ ಎಂಬುದು ಬಿಜೆಪಿ ಕನಸು'| ಸರ್ಕಾರ ಸುಭದ್ರವಾಗಿದೆ, ಬಿಜೆಪಿ ಆಸೆ ಈಡೇರಲ್ಲ ಎಂದ ಅರಣ್ಯ ಸಚಿವ| ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುವಿದಲ್ಲ ಎಂಬ ಭರವಸೆ ಇದೆ| ಸಹೋದರ ರಮೇಶ್ ಅಸಮಾಧಾನ ಬಹೆಹರಿಯುವ ವಿಶ್ವಾಸವಿದೆ
ಬೆಳಗಾವಿ(ಜ.11): ಬಿಜೆಪಿಯವರ ಸಂಕ್ರಾಂತಿ ಡೆಡ್ ಲೈನ್ ಕುರಿತು ಪ್ರತಿಕ್ರಿಯೆ ನೀಡಿರುವ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ, ಸಂಕ್ರಾಂತಿ ಬಳಿಕ ಅದೆನಾಗುತ್ತೋ ನೋಡೋಣ ಎಂದು ಕುಹುಕವಾಡಿದ್ದಾರೆ.
ರಾಜ್ಯ ಇಲ್ಲೇ ಇರುತ್ತೆ, ದೇಶ ಇಲ್ಲೇ ಇರುತ್ತೆ, ನಾವೂ ನೀವೂ ಇಲ್ಲೇ ಇರುತ್ತೇವೆ. ಅದ್ಯಾವ ಕ್ರಾಂತಿಯಾಗುತ್ತೋ ನೋಡೋಣ ಎಂದು ಸತೀಶ್ ವ್ಯಂಗ್ಯವಾಡಿದರು.
ಆಪರೇಷನ್ ಭಯದಿಂದ ಕಾಂಗ್ರೆಸ್ ಶಾಸಕರು ದೆಹಲಿಗೆ ಹೋರಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸದ ಸಚಿವ, ಈ ಕುರಿತು ತಮಗೇನು ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯಿಂದ ನಿಜವಾಗಲೂ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆದಿದೆಯೇ ಎಂಬ ಪ್ರಶ್ನೆಗೆ, ಅದು ಅವರ ರಾಜಕೀಯ ತಂತ್ರಗಾರಿಕೆಯಾಗಿರಬಹದು ಆದರೆ ನಮ್ಮ ಶಾಸಕರು ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಇನ್ನು ಸಹೋದರ ರಮೇಶ್ ಜಾರಕಿಹೊಳಿ ಕುರಿತು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸದ ಸತೀಶ್, ಅವರ ಅಸಮಾಧಾನ ಬಗೆಹರಿಸಲಾಗುವುದು ಎಂದು ಈಗಾಗಲೇ ಕೆಪಿಸಿಸಿ ಅಧ್ಯಕ್ಷರು ಭರವಸೆ ನೀಡಿದ್ದು, ಅವರು ಸಿಕ್ಕರೆ ನಾನೂ ಕೂಡ ಮಾತನಾಡುತ್ತೇನೆ ಎಂದು ಹೇಳಿದರು.