Asianet Suvarna News Asianet Suvarna News

ದಲಿತರ ಮನೆಯಲ್ಲಿ ಜೋಳದ ರೊಟ್ಟಿ ಸವಿದ ಸಚಿವ ಅಶೋಕ್‌

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಭಾಗವಾಗಿ ಅರಕೇರಾದಲ್ಲಿ ಗ್ರಾಮವಾಸ್ತವ್ಯ ನಡೆಸಿದ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಭಾನುವಾರ ದಲಿತರ ಮನೆಯಲ್ಲಿ ಬೆಳಗ್ಗೆ ಉಪಹಾರ ಸೇವಿಸಿದರು. 
 

minister r ashok grama vastavya at arakera village raichur gvd
Author
First Published Oct 17, 2022, 2:15 AM IST

ದೇವದುರ್ಗ (ಅ.17): ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಭಾಗವಾಗಿ ಅರಕೇರಾದಲ್ಲಿ ಗ್ರಾಮವಾಸ್ತವ್ಯ ನಡೆಸಿದ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಭಾನುವಾರ ದಲಿತರ ಮನೆಯಲ್ಲಿ ಬೆಳಗ್ಗೆ ಉಪಹಾರ ಸೇವಿಸಿದರು. ಗ್ರಾಮದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದ ಬಳಿಕ ರಾತ್ರಿ ಗ್ರಾಮದ ಬಿಸಿಎಂ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ಸಚಿವರು ಬೆಳಗ್ಗೆ ಹಳ್ಳಿಕಟ್ಟೆಸಭೆ ನಡೆಸಿದರು. ಹಳ್ಳಿಗರ ಜತೆಗೆ ಕೆಲಕಾಲ ಕುಶಲೋಪರಿ ವಿಚಾರಿಸಿದರು. ಅವರ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದರು. 

ನಂತರ ದಲಿತ ದಂಪತಿ ಬಸಲಿಂಗಪ್ಪ ದೇವಣ್ಣ ಭೇರಿ ಮನೆಗೆ ಭೇಟಿ ನೀಡಿ, ಒಗ್ಗರಣೆ ಮಿರ್ಚಿ ಜತೆ ಬಿಳಿಜೋಳದ ರೊಟ್ಟಿ, ಒಗ್ಗರಣೆ ಮೊಸರು, ಟೊಮೆಟೋ ಪಲ್ಯ, ಈರುಳ್ಳಿ ಚಟ್ನಿ, ಕಡಲೆ ಪುಡಿ ಸವಿದರು. ಮನೆಯಲ್ಲಿದ್ದ ಮಗುವನ್ನು ಎತ್ತಿಕೊಂಡು ಮುದ್ದಾಡಿದರು. ಆ ಬಳಿಕ ಸ್ಥಳೀಯ ಮಹಿಳೆಯರ ಜತೆ ಮಾತುಕತೆ ನಡೆಸಿದ ಸಚಿವರು ಶಾಸಕ ಕೆ.ಶಿವನಗೌಡ ನಾಯಕರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ನಿಮಗೆ ಯಾವುದೇ ಸಮಸ್ಯೆ ಬಂದರೂ ಶಾಸಕರನ್ನು ಸಂಪರ್ಕ ಮಾಡಿ. ಕಂದಾಯ ಇಲಾಖೆ ಸಮಸ್ಯೆಗಳನ್ನು ತಕ್ಷಣವೇ ಪರಿಹಾರ ಮಾಡುತ್ತೇವೆ ಎಂದು ಹೇಳಿದರು. ಯಶಸ್ವಿ ಗ್ರಾಮ ವಾಸ್ತವ್ಯದ ಬಳಿಕ ಸಚಿವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ನಮ್ಮದು ಫ್ಯಾಮಿಲಿ ಪ್ಯಾಕ್‌ ಅಲ್ಲ, ಮೋದಿ ಗೌರ್ಮೆಂಟ್‌, ಜನರ ಸರ್ಕಾರ: ಸಚಿವ ಅಶೋಕ್‌

ಗ್ರಾಮ ವಾಸ್ತವ್ಯದಿಂದ ಜನರಿಗೆ ಸಮಸ್ಯೆ ಪರಿಹಾರವಾಗುವ ವಿಶ್ವಾಸ: ಗ್ರಾಮವಾಸ್ತವ್ಯ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ವಿಶ್ವಾಸ ಜನರಲ್ಲಿ ಮೂಡಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು. ಅರಕೇರಾ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಜನರ ಮನೆ ಬಾಗಿಲಿಗೆ ಆಡಳಿತ ನೀಡುವ ಉದ್ದೇಶದಿಂದ ಗ್ರಾಮ ವಾಸ್ತವ್ಯ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತವೆ ಎನ್ನುವ ನಂಬಿಕೆ ಜನರಲ್ಲಿ ಮೂಡಿದೆ. ಇದರಿಂದ ಒಂದೇ ಕಡೆ ಸಾವಿರಾರು ಜನರ ಸಮಸ್ಯೆ ಪರಿಹರಿಸಲು ಸಹಕಾರವಾಗಲಿದೆ. 

ರಾಯಚೂರು: ಅರಕೇರಾದಲ್ಲಿ ಸಚಿವ ಅಶೋಕ್‌ ಗ್ರಾಮ ವಾಸ್ತವ್ಯ, ಕುಂಭ, ಕಳಸ ಹೊತ್ತ ಮಹಿಳೆಯರಿಂದ ಸ್ವಾಗತ

ಅರಕೇರಾ ಗ್ರಾಮ ವಾಸ್ತವ್ಯವು ಫಲಪ್ರದಗೊಂಡಿದ್ದು, ಸಾವಿರಾರು ಜನರಿಗೆ ವಿವಿಧ ಸವಲತ್ತುಗಳನ್ನು ಒದಗಿಸಿಕೊಡುವ ಪ್ರಯತ್ನ ಮಾಡಲಾಗಿದೆ ಎಂದರು. ರಾಯಚೂರಿಗೆ ಏಮ್ಸ್‌ ಮಂಜೂರಾತಿ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಏಮ್ಸ್‌ ಮಂಜೂರಿಯಾಗಬೇಕಿದ್ದರೆ ವಿಮಾನ ನಿಲ್ದಾಣ ಮತ್ತು ಮಹಾನಗರ ಪಾಲಿಕೆ ಅಗತ್ಯವಾಗಿದೆ. ರಾಯಚೂರು ನಗರದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಹಾಗೂ ನಗರವನ್ನು ಮಹಾನಗರ ಪಾಲಿಕೆಯನ್ನಾಗಿ ಅಭಿವೃದ್ಧಿ ಪಡಿಸಿ ಜಿಲ್ಲೆಗೆ ಏಮ್ಸ್‌ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

Follow Us:
Download App:
  • android
  • ios