ಕೇಂದ್ರ ಸರ್ಕಾರದ ವರದಿಯಂತೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ. ಹೊನ್ನಾಳಿ ತಾಲೂಕಿನ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ವಿವರಿಸಿದರು.

ಹೊನ್ನಾಳಿ (ಫೆ.8): ಕೇಂದ್ರ ಸರ್ಕಾರ ಪಂಚಾಯಿತಿ ವಿಕೇಂದ್ರೀಕರಣ ಕುರಿತಂತೆ ಎಲ್ಲಾ ರಾಜ್ಯದ ಅಧ್ಯಯನ ವರದಿ ಪ್ರಕಟಿಸಿದ್ದು, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ಮೋದಿ ಸರ್ಕಾರವೇ ಹೇಳಿದೆ. ರಾಜ್ಯ ಸರ್ಕಾರ ಜನರಿಗೆ ಸಾಮಾಜಿಕ, ಅರ್ಥಿಕ ಸಬಲತೆ ತಂದು ಕೊಡುವ ಮೂಲಕ ಸ್ವಾಭಿಮಾನಿ ಬದುಕು ನೀಡುವ ಕೆಲಸ ಮಾಡುತ್ತಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್, ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

Add Asianetnews Kannada as a Preferred SourcegooglePreferred

ತಾಲೂಕಿನ ಎಚ್.ಗೋಪಗೊಂಡನಹಳ್ಳಿಯಲ್ಲಿ ಶನಿವಾರ ಸುಮಾರು 2 ಕೋಟಿ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಟ್ಟಡ, ಅಂಗನವಾಡಿ ಕಟ್ಟಡಗಳನ್ನು ಲೋಕಾರ್ಪಣೆ ಮಾಡಿ ಬಳಿಕ ವೇದಿಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು 

ಇಡೀ ದೇಶದಲ್ಲಿ ಯಾವ ರಾಜ್ಯವೂ ಮಾಡದ ಸಾಧನೆ ನಮ್ಮ ಸರ್ಕಾರ ಮಾಡಿದೆ

ಇಡೀ ದೇಶದಲ್ಲಿ ಯಾವ ರಾಜ್ಯವೂ ಮಾಡದ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸುಮಾರು 52 ಸಾವಿರ ಕೋಟಿ ರು.ನಷ್ಠು 5 ಗ್ಯಾರಂಟಿಗಾಗಿ ಹಣ ಖರ್ಚು ಮಾಡಿದೆ. ಗೃಹಜ್ಯೋತಿಯಲ್ಲಿ 1.61 ಕೋಟಿ ಫಲಾನುಭವಿಗಳಿದ್ದಾರೆ. ಗೃಹಲಕ್ಷ್ಮಿಯಲ್ಲಿ 1.25 ಕೋಟಿ, ಅನ್ನಭಾಗ್ಯ ಯೋಜನೆಯಲ್ಲಿ4 ಕೇೋಟಿ ಜನರಿದ್ದಾರೆ. ಪ್ರತಿನಿತ್ಯ 35 ರಿಂದ 40 ಲಕ್ಷ ಜನ ಶಕ್ತಿಯೋಜನೆಯಡಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಯುವ ನಿಧಿಯಲ್ಲಿ ಕೂಡ ಲಕ್ಷಾಂತರ ಯುವ ಜನ ಪ್ರಲಾಭವಿಗಳು ಯೋಜನೆ ಲಾಭ ಪಡೆಯುತ್ತಿದ್ದಾರೆ ಎಂದು ಹೇಳಿದರು.

ತಾಲೂಕಿನ ಚಟ್ನಹಳ್ಳಿ ಮತ್ತು ಎಚ್.ಗೋಪಗೊಂಡನಹಳ್ಳಿಯಿಲ್ಲಿ ಕೋಟಿ ಕೋಟಿ ರು. ಖರ್ಚು ಮಾಡಿ ರಾಜ್ಯದಲ್ಲಿಯೇ ಅಪರೂಪದ, ಸುಂದರ ಗ್ರಾಮಸೌಧವನ್ನು ನಿರ್ಮಿಸಿದ್ದು ಇವುಗಳು ರಾಜ್ಯದಲ್ಲಿ ವಿಧಾನ ಸೌಧ, ಯಾವುದೇ ಸೌಧಗಳನ್ನು ಮೀರಿಸುವ ನಿಟ್ಟಿನಲ್ಲಿ ಧನ ಮತ್ತು ಶ್ರಮ ಹಾಕಿ ಕಟ್ಟಡ ನಿರ್ಮಿಸಲಾಗಿದೆ ಎಂದರು.

ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ತಾಲೂಕಿನ ಚಟ್ನಹಳ್ಳಿ, ಎಚ್.ಗೋಪಗೊಂಡನಹಳ್ಳಿಗಳಲ್ಲಿ ಅದ್ಧೂರಿ ಕಟ್ಟಡ ನಿರ್ಮಾಣ ಮಾಡಿದ್ದು, ಇದಕ್ಕೆ ಸಾಕಷ್ಟು ಹೆಚ್ಚಿನ ಮೊತ್ತ ಖರ್ಚಾಗಿದ್ದು, ಸರ್ಕಾರದಿಂದ ಬರಬೇಕಾದ ಹಣಕ್ಕೆ ನಾನೇ ಗ್ಯಾರಂಟಿ ಎಂದು ಭರವಸೆ ನೀಡಿದರು.

ಸರ್ಕಾರ ರಚನೆಯಾಗಿ ಸಾವಿರ ದಿನಕ್ಕೆ ಫೆ.13ರಂದು ಸರ್ಕಾರವು ಹಾವೇರಿಯಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸುಮಾರು 1.50 ಲಕ್ಷ ಪೇಟ ವಿತರಣೆಯನ್ನು ಮಾಡಲಾಗುವುದು ಎಂದು ತಿಳಿಸಿದರು.

ಸಚಿವರಿಗೆ ಬೇಡಿಕೆ:

ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳಲ್ಲಿ ತಾಪಂ ಕಚೇರಿಗಳಿಗೆ ನೂತನ ಕಟ್ಟಡ, 15ನೇ ಹಣಕಾಸು ಯೋಜನೆಯ ಬಾಕಿ ಹಣ ಕೂಡಲೇ ಬಿಡುಗಡೆ ಮಾಡಬೇಕು. ಮುಖ್ಯ ಮಂತ್ರಿ ವಿಶೇಷ ಅನುದಾನ ₹10 ಕೋಟಿಯಲ್ಲಿ ಶೇಕಡ 43 ಬಾಕಿ ಇದ್ದು ಇದನ್ನು ಬಿಡುಗಡೆ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ಮನವಿ ಮಾಡಿದರು

ವಿಧಾನ ಪರಿಷತ್ ಸದಸ್ಯ ಅರುಣ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ, ಅಬ್ದುಲ್ ಜಬ್ಬಾರ್, ಬಯಲು ಸೀಮೆ ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಮಾಜಿ ಶಾಸಕ ಡಾ.ಡಿ.ಬಿ. ಗಂಗಪ್ಪ, ಸರ್ಕಾರದ ಆರ್ ಡಿ.ಪಿ,ಆರ್. ಪ್ರಧಾನ ಕಾರ್ಯದರ್ಶಿ ಶಮೀರ್ ಶುಕ್ಲಾ, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿಪಂ, ಸಿಇಒ ಗಿತ್ತೆ ಮಾಧವ ವಿಠಲ್ ರಾವ್, ಉಪ ವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ತಹಸೀಲ್ದಾರ್ ರಾಜೇಶ್ ಕುಮಾರ್, ಇಒಡಿಜಿ ಅಶೋಕ್, ರಾಘವೇಂದ್ರ, ಗ್ರಾಪಂ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳ ರುದ್ರಯ್ಯ, ಉಪಾಧ್ಯಕ್ಷೆ ಆಶಾ, ಪಿಡಿಒ ಭಾರತಿ, ನಿಕಟಪೂರ್ವ ಗ್ರಾಪಂ ಸದಸ್ಯರು, ಗ್ರಾಮದ ಮಖಂಡರು ಭಾಗವಹಿಸಿದ್ದರು. 

YouTube video player