ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರವು ಸ್ವತಂತ್ರವಾಗಿಲ್ಲ, ಬದಲಿಗೆ ಎಡಪಂಥೀಯರ ಕಪಿಮುಷ್ಠಿಯಲ್ಲಿದೆ ಎಂದು ಆರೋಪಿಸಿದ್ದಾರೆ. ಇತಿಹಾಸವನ್ನು ತಿರುಚಿ, ಹಿಂದೂ ವಿರೋಧಿ ಟಿಪ್ಪು ಸುಲ್ತಾನ್‌ನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಮಂಡ್ಯ(ಫೆ.8): ಎಡಪಂಥೀಯರ ಕಪಿಮುಷ್ಠಿಯಲ್ಲಿ ಸಿಲುಕಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಸ್ವತಂತ್ರವಾಗಿ ಆಡಳಿತ ನಡೆಸುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಗಂಭೀರ ಆರೋಪ ಮಾಡಿದರು.

ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಸ್ವರಾಷ್ಟ್ರ ಪ್ರಕಾಶನ ಸಂಸ್ಥೆ ಉದ್ಘಾಟನೆ ಮತ್ತು ಸಂವಿಧಾನ ತಜ್ಞ, ಲೇಖಕ ಡಾ. ಸುಧಾಕರ ಹೊಸಳ್ಳಿ ರಚಿತ 'ನಾನೂ ಕಾಫಿರ' ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿ, ರಾಜ್ಯದ ಅನೇಕ ರಾಜಕಾರಣಿಗಳು ತಮ್ಮ ಬುದ್ಧಿಯನ್ನು ಎಡಪಂಥೀಯರ ಕೈಗೆ ಕೊಟ್ಟಿದ್ದಾರೆ. ಹೀಗಾಗಿ ಅವರಂತೆ ನಡೆಯುತ್ತಿದ್ದಾರೆ ಎಂದು ದೂರಿದರು.

ಮುಸ್ಲಿಮರ ಬಗ್ಗೆ ಬಹಳ ವ್ಯಾಮೋಹ ಹೊಂದಿರುವ ಕಾಂಗ್ರೆಸ್ ಮತ್ತು ಎಡಪಂಥೀಯರು ದೇಶದ್ರೋಹಿ ಟಿಪ್ಪು ಸುಲ್ತಾನ್‌ನನ್ನೇ ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಿ ಟಿಪ್ಪು ಸುಲ್ತಾನ್ ಜಯಂತಿ ಮಾಡುತ್ತಾರೆ ಎಂದು ಟೀಕಿಸಿದರು.

ಎಡಪಂಥೀಯರು ಮಹಾತ್ಮ ಗಾಂಧೀಜಿ ಬಗ್ಗೆ ಮಾತ್ರ ತಿರುಚದೆ ಸುಭಾಷ್ ಚಂದ್ರ ಬೋಸ್, ಬುದ್ಧ, ಬಸವಣ್ಣ, ಅಂಬೇಡ್ಕರ್ ಬಗ್ಗೆನೂ ತಮ್ಮ ತರ್ಕಕ್ಕೆ ಅನುಗುಣವಾಗಿ ತಿರುಚಿ ಹೈಜಾಕ್ ಮಾಡಿದ್ದಾರೆ. ಇದು ರಾಷ್ಟ್ರಕವಿ ಕುವೆಂಪು ಅವರ ವರೆಗೂ ಮುಂದುವರಿಯಿತು. ಕುವೆಂಪು ಮತ್ತು ಸ್ವಾಮಿ ವಿವೇಕಾನಂದರಿಗೂ ಹಿಂದೂ ಸಂಸ್ಕೃತಿಗೂ ಸಂಬಂಧವಿಲ್ಲ ಎಂದು ಬಿಂಬಿಸಲು ಹೊರಟರು. ಹಿಂದುತ್ವ ಮತ್ತು ಆಧ್ಯಾತ್ಮಿಕತೆಗೆ ವಿರೋಧಿ ಎಂದು ಬಿಂಬಿಸಿ ಸಮಾಜವಾದಿ ಎಂದು ಕರೆದರು ಎಂದರು.

ಹಿಂದೂ ವಿರೋಧಿಯಾಗಿದ್ದ ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯ ಕಾಲದಲ್ಲಿ 1 ಲಕ್ಷಕ್ಕೂ ಹೆಚ್ಚು ಹಿಂದೂಗಳು ಹಾಗೂ 70 ಸಾವಿರ ಕ್ರಿಶ್ಚಿಯನ್‌ರನ್ನು ಭೀಕರವಾಗಿ ನರಮೇಧ ಮಾಡಿದ್ದಾನೆ. ಹಲವು ಹಿಂದೂ ದೇವಾಲಯಗಳನ್ನು ಕೆಡವಿದ್ದಾನೆ. ಇಂತಹ ಮತಾಂಧನನ್ನು ಶೃಂಗೇರಿ ದೇವಸ್ಥಾನಕ್ಕೆ ದಾನ ಕೊಟ್ಟಿದ್ದಾನೆ ಎಂದು ಬಿಂಬಿಸಿ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುತ್ತಿರುವುದು ನಾಚಿಕೆಗೇಡು ಎಂದು ಹರಿಹಾಯ್ದರು.

ಟಿಪ್ಪು ಸುಲ್ತಾನ್‌ನ ಕ್ರೌರ್ಯವನ್ನು ತಡೆಯಲಾಗದೆ ಮೈಸೂರು, ಚಾಮರಾಜನಗರ ಮತ್ತು ಕೊಡಗಿನ ಒಕ್ಕಲಿಗರು ತಮಿಳುನಾಡಿಗೆ ಪಲಾಯನ ಮಾಡಿ ನೆಲೆಸಿದ್ದಾರೆ. ಇಸ್ಲಾಮಿಕ್‌ನವರಿಗೆ ಹಿಂದುಗಳು ನೆಮ್ಮದಿಯಾಗಿರುವುದು ಇಷ್ಟವಿಲ್ಲ. ಆದ್ದರಿಂದ ಅವರಿಗೆ ಹಿಂದೂ ದೇವರ ಕಂಡರೆ ಆಗಲ್ಲ, ಹಾಗಾಗಿ ಗಣೇಶ ವಿಸರ್ಜನಾ ಮಹೋತ್ಸವದ ವೇಳೆ ಗಲಾಟೆ ಮಾಡುತ್ತಾರೆ ಎಂದು ಆರೋಪಿಸಿದರು. 

YouTube video player