ರಾಜ್ಯದಲ್ಲಿ ಬರ ಆವರಿಸಿದೆ. ಹೀಗಾಗಿ ಕೇಂದ್ರ ಸರ್ಕಾರವು ರಾಜ್ಯದ ರೈತರ ಸಾಲ ಮನ್ನಾ ಮಾಡಲಿ. ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ಕೇಳುವ ಬದಲು ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರು (ಜು.10): ‘ರಾಜ್ಯದಲ್ಲಿ ಬರ ಆವರಿಸಿದೆ. ಹೀಗಾಗಿ ಕೇಂದ್ರ ಸರ್ಕಾರವು ರಾಜ್ಯದ ರೈತರ ಸಾಲ ಮನ್ನಾ ಮಾಡಲಿ. ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ಕೇಳುವ ಬದಲು ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ರಾಜ್ಯ ಬಿಜೆಪಿ ನಾಯಕರು ಕೇವಲ ಮನ್ ಕೀ ಬಾತ್’ ಕೇಳಲು ಇದ್ದಾರೆಯೇ?
ರಾಜ್ಯ ಬಿಜೆಪಿ ನಾಯಕರು ರಾಜ್ಯದ ಪರ ಒತ್ತಾಯ ಮಾಡದೇ ಕೇವಲ ‘ಮನ್ ಕೀ ಬಾತ್’ ಕೇಳಲು ಇದ್ದಾರೆಯೇ ಎಂದೂ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಲಿ ಎನ್ನುವ ಬದಲು ಕೇಂದ್ರ ಸರ್ಕಾರವೇ ಮಾಡಬಹುದಲ್ಲವೇ? ರಾಜ್ಯ ಬಿಜೆಪಿ ನಾಯಕರು ರೈತರ ಪರ ಒತ್ತಾಯ ಮಾಡಬಹುದಲ್ಲವೇ ಎಂದರು. ಎಲ್ಲವನ್ನೂ ರಾಜ್ಯ ಸರ್ಕಾರವೇ ಮಾಡುವುದಾದರೆ ಕೇಂದ್ರ ಸರ್ಕಾರ ಏನು ಮಾಡುತ್ತದೆ? ರೈತರ ಸಾಲ ಮನ್ನಾ ಎಲ್ಲವನ್ನೂ ರಾಜ್ಯ ಸರ್ಕಾರವೇ ಮಾಡಿದರೆ ಕೇಂದ್ರ ಯಾಕೆ ಇದೆ? ಎಂದು ಪ್ರಶ್ನಿಸಿದರು.
ವಿಬಿ ಜಿ ರಾಮ್ ಜಿ, ಜಲಜೀವನ್ ಮಿಷನ್ ಸೇರಿ ಎಲ್ಲಾ ಕೇಂದ್ರ ಪುರಸ್ಕೃತ ಯೋಜನೆಗಳಿಗೂ ರಾಜ್ಯ ಸರ್ಕಾರವೇ ಹಣ ಕೊಡಬೇಕು. ರಾಜ್ಯ ಬಿಜೆಪಿ ನಾಯಕರು ರಾಜ್ಯದ ಪರ ಒತ್ತಾಯ ಮಾಡದೇ ಕೇವಲ ಮನ್ ಕೀ ಬಾತ್ ಕೇಳಲು ಇದ್ದಾರೆಯೇ ಎಂದು ಕಿಡಿಕಾರಿದರು.
ಸಂಪುಟ ವಿಸ್ತರಣೆ ವಿಳಂಬದಿಂದ ಬರ ನಿರ್ವಹಣೆಗೆ ಕಷ್ಟ ಆಗುತ್ತಿರುವ ಬಗೆಗಿನ ಪ್ರಶ್ನೆಗೆ ಮಾತನಾಡಿ, ನಾಲ್ಕೂ ಕಂದಾಯ ವಿಭಾಗಗಳಿಗೂ ಮುಖ್ಯಮಂತ್ರಿ ಹೋಗುತ್ತಿದ್ದಾರೆ. ಕೇಂದ್ರದ ಮಾನದಂಡದ ಪ್ರಕಾರ ವರದಿ ಸಿದ್ಧಪಡಿಸಿ ಸದ್ಯದಲ್ಲೇ ಬರ ಘೋಷಣೆಗೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಅದನ್ನು ಕೇಂದ್ರ ಘೋಷಣೆ ಮಾಡಬೇಕು. ಇನ್ನು ಸಂಪುಟ ಒಂದೆರಡು ವಾರದಲ್ಲಿ ವಿಸ್ತರಣೆ ಆಗಲಿದೆ ಎಂದರು.


