'ನನ್ನ ಎದೆ ಬಗೆದರೆ ಸಿದ್ದು ಕಾಣಿಸ್ತಾರೆ, ಸಿದ್ದು ಆಶೀರ್ವಾದದಿಂದಲೇ ಸಚಿವ ಸ್ಥಾನ'!
ಸಚಿವರೊಬ್ಬರು ಸಿದ್ದರಾಮಯ್ಯ ಆಶೀರ್ವಾದಿಂದ ಸಚಿವ ಸ್ಥಾನ ದೊರೆತಿದೆ, ಇನ್ನು ಚುನಾವಣೆಗೆ ಸ್ಪರ್ಧಿಸಲ್ಲ ಎಂದಿದ್ದಾರೆ. ಅಷ್ಟಕ್ಕೂ ಆ ಸಚಿವ ಯಾರು? ಇಲ್ಲಿದೆ ವಿವರ
ಬೆಂಗಳೂರು[ಜ.28]: ‘ಆಂಜನೇಯನ ಎದೆ ಬಗೆದರೆ ಶ್ರೀರಾಮ ಕಂಡಂತೆ ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಅವರ ಜಪ ಕಾಣುತ್ತದೆ’ ಎಂದು ವಸತಿ ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿದ್ದಾರೆ.
ನಾನು ನಿತ್ಯ ಅವರ ಜಪ ಮಾಡಿಕೊಂಡು ಬಂದವನು. ಅವರ ಆಶೀರ್ವಾದದಿಂದಲೇ ಸಚಿವನಾಗಿದ್ದು, ಇನ್ನು ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದೂ ಅವರು ಘೋಷಿಸಿದ್ದಾರೆ.
ಬೆಂಗಳೂರು ನೈಸ್ ರಸ್ತೆಯ ಸೋಂಪುರ ಗೇಟ್ ಬಳಿಯ ಜಟ್ಟಿಗರಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಕನಕ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾನು ಯಾವಾಗಲೂ ಸಿದ್ದರಾಮಯ್ಯರನ್ನು ಜಪ ಮಾಡಿಕೊಂಡು ಬಂದಿದ್ದೇನೆ. ಕೇವಲ ನಮ್ಮ ಸಮಾಜ ಮಾತ್ರವಲ್ಲ, ಹಿಂದುಳಿದ ವರ್ಗಗಳ ಸಮಗ್ರ ಅಭಿವೃದ್ಧಿಗೆ ಅವರು ಸಾಕಷ್ಟುದುಡಿದಿದ್ದಾರೆ. ಹೀಗಾಗಿ ನನಗೆ ರಾಜಕೀಯದಲ್ಲಿ ಮೆಚ್ಚಿನ ನಾಯಕರು ಅವರು. ಇಂದಿಗೂ ಆಂಜನೇಯನ ಎದೆ ಬಗೆದರೆ ಶ್ರೀರಾಮ ಕಂಡಂತೆ, ನನ್ನ ಎದೆ ಬಗೆದರೆ ಸಿದ್ದರಾಮಯ್ಯನವರ ಜಪ ಕಾಣುತ್ತದೆ ಎಂದು ಹೇಳಿದರು.
ನನಗೆ ಒಮ್ಮೆಯಾದರೂ ಸಚಿವನಾಗಬೇಕು ಎಂಬ ಕನಸು ಇತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಕನಸು ನನಸು ಮಾಡಿದ್ದಾರೆ. ಸಚಿವ ಸ್ಥಾನದ ಜತೆಗೆ ವಸತಿ ಖಾತೆಯಂತಹ ಮಹತ್ವದ ಖಾತೆ ಕೊಡಿಸಿದ್ದಾರೆ. ನಾನು 2018ರ ವಿಧಾನಸಭೆ ಚುನಾವಣೆ ವೇಳೆಯೇ ನಾನು ಸಚಿವನಾಗಬೇಕು, ಇಲ್ಲದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂಬ ದೃಢ ನಿರ್ಧಾರ ತೆಗೆದುಕೊಂಡಿದ್ದೆ. ಈಗ ಕೊನೆಗೂ ಸಚಿವನಾಗಿದ್ದೇನೆ. ಹಾಗಾಗಿ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.