ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಕಿತ್ತೂರು ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ರಾಜಕೀಯ ಬದಿಗಿಟ್ಟು ಎಲ್ಲಾ ಪಕ್ಷದ ಶಾಸಕರು ಒಗ್ಗೂಡಿ ಸದನದಲ್ಲಿ ಚರ್ಚಿಸಬೇಕೆಂದು ಕರೆ ನೀಡಿದ್ದಾರೆ. ಇದೇ ವೇಳೆ, ಬೆಳಗಾವಿ ಜಿಲ್ಲಾ ವಿಭಜನೆಯ ಅಗತ್ಯವನ್ನು ಪ್ರತಿಪಾದಿಸಿದರು. ಬಿಜೆಪಿ ವಿರುದ್ಧವೂ ಟೀಕೆ.
ಬೆಳಗಾವಿ (ಡಿ.8): ಕಿತ್ತೂರು ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ರಾಜಕೀಯ ಬದಿಗಿಟ್ಟು ಈ ಭಾಗದ ಎಲ್ಲ ಪಕ್ಷದ ಶಾಸಕರು ಒಗ್ಗೂಡಿ ಸದನದಲಿ ಮಾತನಾಡಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಸುವರ್ಣ ವಿಧಾನಸೌಧ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ಪಕ್ಷ, ವಿರೋಧ ಪಕ್ಷದ ನಾಯಕರು ಯಾರೇ ಇರಲಿ, ನಾವು ಎಲ್ಲರೂ ಸೇರಿ ಈ ಭಾಗದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕು. ನನ್ನನ್ನು ಸೇರಿ ಎಲ್ಲರೂ ನಮ್ಮ ರಾಜಕಾರಣವನ್ನು ಪಕ್ಕಕ್ಕೆ ಇಡೋಣ. ಎಲ್ಲರೂ ಸೇರಿ ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಚರ್ಚೆ ಮಾಡೋಣ ಎಂದು ಆಹ್ವಾನ ನೀಡಿದರು.
ಪ್ರತ್ಯೇಕ ರಾಜ್ಯ, ಪ್ರತ್ಯೇಕ ಬಜೆಟ್:
ಪತ್ಯೇಕ ರಾಜ್ಯ ಮತ್ತು ಪ್ರತ್ಯೇಕ ಬಜೆಟ್ ವಿಚಾರವಾಗಿ ಮಾತನಾಡಿದ ಅವರು, ಕಿತ್ತೂರು ಕರ್ನಾಟಕ, ದಕ್ಷಿಣ ಕರ್ನಾಟಕ ಅಂತ ಮಾಡೋದು ಬೇಡ. ರೈತರ ಪರವಾಗಿ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ. ರೈತರ ಮೇಲೆ ಗೋಲಿಬಾರ್ ಮಾಡಿಸಿದ್ದು ಬಿಜೆಪಿಯವರು. ಮಹದಾಯಿ ಹೋರಾಟಗಾರರ ಮೇಲೆ ಹಲ್ಲೆ ಆದಾಗ ಸಿಹಿ ಹಂಚಿದವರು ಇವರೇ, ಇಂಥವರು ರೈತರ ಬಗ್ಗೆ ಮಾತನಾಡುವುದು ಎಷ್ಟು ಸರಿ? ರೈತರ ಬಗ್ಗೆ ಪ್ರಾಮಾಣಿಕ ಆಸಕ್ತಿ ಕಾಳಜಿ ನಮಗೆ ಇದೆ. ಹೀಗಾಗಿ ರೈತರ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಅಭಿವೃದ್ಧಿಗಾಗಿ ಬೆಳಗಾವಿ ವಿಭಜನೆ ಅಗತ್ಯ:
ಜಿಲ್ಲಾ ವಿಭಜನೆ ವಿಷಯವನ್ನು ಈಗಾಗಲೇ ನಾನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇವೆ. ಅಲ್ಲದೇ, ಚರ್ಚೆಯನ್ನು ಮಾಡಿದ್ದೇವೆ. ಜಿಲ್ಲೆಯ ಅಭಿವೃದ್ಧಿಗಾಗಿ ವಿಭಜನೆಯಾಗಬೇಕಿದೆ. ಸರ್ಕಾರದ ಯೋಜನೆಗಳು ಸರಿಯಾಗಿ ಜನರಿಗೆ ತಲುಪುತ್ತಿಲ್ಲ ಎಂದು ಹೇಳಿದ್ದೇವೆ. ಹೀಗಾಗಿ ಈ ಬಗ್ಗೆ ಸ್ಥಳೀಯ ಶಾಸಕರನ್ನು ಕರೆದು ಮಾತನಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂಬುದನ್ನು ತಿಳಿಸಿದರು.

