*  ರಾಜ್ಯ ಸರ್ಕಾರದಿಂದ ಹೊಸ ಯೋಜನೆ*  ಅಸ್ಪೃಶ್ಯತೆಮುಕ್ತ ಗ್ರಾಮಗಳಿಗೆ ಹೆಚ್ಚು ಅನುದಾನ*  ಗ್ರಾಮ ಪಂಚಾಯ್ತಿ ಸದಸ್ಯರಲ್ಲಿ ಜಾಗೃತಿ 

ಬೆಂಗಳೂರು(ಮಾ.29): ಸಮಾಜದಲ್ಲಿ ಇನ್ನೂ ತಾಂಡವಾಡುತ್ತಿರುವ ಅಸ್ಪೃಶ್ಯತೆಯನ್ನು(Untouchability) ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಸಂಬಂಧ ರಾಜ್ಯ ಸರ್ಕಾರವು ಜನಾಂದೋಲನ ರೂಪಿಸುವ ಜತೆಗೆ ‘ವಿನಯ ಸಾಮರಸ್ಯ’ ಎಂಬ ವಿನೂತನ ಯೋಜನೆ ಜಾರಿಗೆ ಮುಂದಾಗಿದೆ. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ(Kota Shrinivas Poojari) ಈ ವಿಷಯ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಸೋಮವಾರ ಸದನದಲ್ಲಿ(Assembly Session) ಇಲಾಖಾವಾರು ಅನುದಾನ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಕೊಪ್ಪಳ(Koppal) ಜಿಲ್ಲೆಯ ಮಿಯಾಪುರ ಗ್ರಾಮದಲ್ಲಿ ಎರಡು ವರ್ಷದ ವಿನಯ್‌ ಆಕಸ್ಮಿಕವಾಗಿ ದೇವಾಲಯ ಪ್ರವೇಶಿಸಿದ್ದಕ್ಕೆ ಗ್ರಾಮಸ್ಥರು ಮಗುವಿನ ಪೋಷಕರಿಗೆ ದಂಡ ವಿಧಿಸಿದ್ದಾರೆ. ಅಸ್ಪೃಶ್ಯತೆ ನಿವಾರಣೆಗೆ ಹಲವು ಕ್ರಮ ಕೈಗೊಂಡರೂ ಇನ್ನೂ ನಡೆಯುತ್ತಿರುವುದು ಸಮಾಜವು ತಲೆತಗ್ಗಿಸುವ ವಿಚಾರವಾಗಿದೆ ಎಂದರು.

Karnataka Temples : ಪ್ರತಿಪಕ್ಷಗಳಿಗೆ ಏಕೆ ಗಾಬರಿ : ಕೋಟಾ ಪೂಜಾರಿ

ಮಗುವನ್ನು ಇಲಾಖೆಯು ದತ್ತು ತೆಗೆದುಕೊಂಡು ಶಿಕ್ಷಣದ ಎಲ್ಲಾ ವೆಚ್ಚವನ್ನು ನೋಡಿಕೊಳ್ಳಲಾಗುತ್ತದೆ. ಪ್ರಕರಣವನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿ ಅಸ್ಪೃಶ್ಯತೆ ಹೋಗಲಾಡಿಸಲು ದಿಟ್ಟಕ್ರಮ ಕೈಗೊಂಡಿದ್ದು, ಸಾಮರಸ್ಯ ಕಾಪಾಡಲು ವಿನಯ ಸಾಮರಸ್ಯ ಎಂಬ ಯೋಜನೆಯನ್ನು ಪ್ರಾರಂಭಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು. ಅಲ್ಲದೇ, ರಾಜ್ಯದಲ್ಲಿನ(Karnataka) 6020 ಗ್ರಾಮ ಪಂಚಾಯಿತಿಗಳಲ್ಲೂ ಅಸ್ಪೃಶ್ಯತೆ ವಿರುದ್ಧ ಸಾಮಾಜಿಕ ಸಾಮರಸ್ಯ ಕಾಪಾಡಲು ಸದಸ್ಯರಲ್ಲಿ ಜಾಗೃತಿ ಮೂಡಿಸಲಾಗುವುದು. ಯಾವ ಗ್ರಾಮ ಪಂಚಾಯಿತ ಅಸ್ಪೃಶ್ಯತೆ ಮುಕ್ತವಾಗಲಿದೆಯೋ ಅಂತಹ ಗ್ರಾಮಗಳಿಗೆ ಹೆಚ್ಚಿನ ಅನುದಾನ ನೀಡಲು ಕ್ರಮ ಜರುಗಿಸಲಾಗುವುದು ಎಂದು ಅಶ್ವಾಸನೆ ನೀಡಿದರು.

ಇದೇ ವೇಳೆ ಎಸ್‌ಸಿಪಿ/ಟಿಎಸ್‌ಪಿ ಅನುದಾನವನ್ನು(Grants) ಇತರೆ ಬೇರೆ ಇಲಾಖೆಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಅವಕಾಶ ಇರುವ 7ಡಿ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನು ರದ್ದುಪಡಿಸಬೇಕಾದರೆ ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಮಲ ಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧ ಮಾಡಲು ಸರ್ಕಾರ ಬದ್ಧವಾಗಿದೆ. ಇದೊಂದು ಸಾಮಾಜಿಕ ಪಿಡುಗಾಗಿದ್ದು, ಇದನ್ನು ಪಕ್ಷಬೇಧ ಮರೆತು ಎಲ್ಲರು ಕೊನೆಗೊಳಿಸಬೇಕು ಎಂದರು.

ಎಸ್‌ಸಿ/ಎಸ್‌ಟಿ(SC,ST Board) ನಿಗಮಗಳಿಗೆ ಹೆಚ್ಚುವರಿ ಅನುದಾನವನ್ನು ಸರ್ಕಾರ ಒದಗಿಸಿದೆ. ನಿಗಮಗಳ ಮೂಲಕ ಅನೇಕ ರೀತಿಯ ಜನಪಯೋಗಿಕೆಲಸಗಳನ್ನು ಮಾಡುತ್ತಿದ್ದೇವೆ. ಪ್ರತಿಯೊಬ್ಬನಿಗೂ ಉತ್ತಮವಾದ ಕೆಲಸ ಮಾಡುವುದೇ ನಮ್ಮ ಸರ್ಕಾರದ ಗುರಿ. ಪೌರಕಾರ್ಮಿಕರಿಗೆ ಕಾಲಕಾಲಕ್ಕೆ ವೇತನ ಬಿಡುಗಡೆ ಮಾಡಲಾಗುತ್ತಿದೆ. ಕೆಲವರನ್ನು ಪೌರಕಾರ್ಮಿಕರನ್ನು ಕಾಯಂ ಮಾಡಬೇಕೆಂಬ ಸಲಹೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ರದ್ದುಗೊಂಡ ಕಾರ್ಯಕ್ರಮ ಮುಂದುವರಿಕೆ

ಎಸ್‌ಸಿ/ಎಸ್‌ಟಿ ವರ್ಗದ ಯುವಕ-ಯುವತಿಯರಿಗೆ ಗಗನಸಖಿ ಮತ್ತು ಪೈಲೆಟ್‌ ತರಬೇತಿ ಕಾರ್ಯಕ್ರಮವನ್ನು 2022-23ನೇ ಆರ್ಥಿಕ ಸಾಲಿನಿಂದ ಆರಂಭಿಸಲಾಗುವುದು ಎಂದು ಸಚಿವ ಪೂಜಾರಿ ಹೇಳಿದರು. ಕೋವಿಡ್‌ ಕಾರಣದಿಂದಾಗಿ ಆರ್ಥಿಕ ಸಂಕಷ್ಟಎದುರಾಗಿದ್ದರಿಂದ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಮುಂದಿನ ಆರ್ಥಿಕ ವರ್ಷದಿಂದ ಯೋಜನೆಯನ್ನು ಮುಂದುವರಿಸುತ್ತೇವೆ. ಸಮುದಾಯದ ಯುವಕ-ಯುವತಿಯರಿಗೆ ಸ್ವಾಲಂಬನೆ ಬದುಕು ಕಟ್ಟಿಕೊಳ್ಳುವಲ್ಲಿ ಇಲಾಖೆಯು ಅವಿರತವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.

ಅಭ್ಯರ್ಥಿಯಾದ್ರೂ ಕೋಟ ಸೇರಿ 6 ಶಾಸಕ, ಓರ್ವ ಸಂಸದಗೆ ಮತದಾನಕ್ಕಿಲ್ಲ ಅವಕಾಶ

ವಿನಯ ಸಾಮರಸ್ಯ ಹೆಸರಿಟ್ಟಿದ್ದು ಏಕೆ?

ಕೊಪ್ಪಳ ಜಿಲ್ಲೆಯ ಮಿಯಾಪುರ ಗ್ರಾಮದಲ್ಲಿ ಇತ್ತೀಚೆಗೆ 2 ವರ್ಷದ ವಿನಯ್‌ ಎಂಬ ಮಗು ಆಕಸ್ಮಿಕವಾಗಿ ದೇವಾಲಯ ಪ್ರವೇಶಿಸಿದ್ದಕ್ಕೆ ಗ್ರಾಮಸ್ಥರು ದಂಡ ವಿಧಿಸಿದ್ದರು. ಅದು ಭಾರಿ ವಿವಾದವಾಗಿತ್ತು. ಹೀಗಾಗಿ ಅಸ್ಪೃಶ್ಯತೆ ವಿರುದ್ಧದ ಆಂದೋಲನಕ್ಕೆ ‘ವಿನಯ ಸಾಮರಸ್ಯ’ ಎಂದು ಸರ್ಕಾರ ಹೆಸರಿಟ್ಟಿದೆ.

ಗ್ರಾಮ ಪಂಚಾಯ್ತಿ ಸದಸ್ಯರಲ್ಲಿ ಜಾಗೃತಿ

ರಾಜ್ಯದಲ್ಲಿನ 6020 ಗ್ರಾಮ ಪಂಚಾಯಿತಿಗಳಲ್ಲೂ ಅಸ್ಪೃಶ್ಯತೆ ವಿರುದ್ಧ ಸಾಮಾಜಿಕ ಸಾಮರಸ್ಯ ಕಾಪಾಡಲು ಸದಸ್ಯರಲ್ಲಿ ಜಾಗೃತಿ ಮೂಡಿಸಲಾಗುವುದು. ಯಾವ ಗ್ರಾಮ ಪಂಚಾಯಿತ ಅಸ್ಪೃಶ್ಯತೆ ಮುಕ್ತವಾಗಲಿದೆಯೋ ಅಂತಹ ಗ್ರಾಮಗಳಿಗೆ ಹೆಚ್ಚಿನ ಅನುದಾನ ನೀಡಲು ಕ್ರಮ ಜರುಗಿಸಲಾಗುವುದು ಅಂತ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.