* ಈ ಬಾರಿ ಬಜೆಟ್‌ನಲ್ಲಿ ನವಲಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಹಣ* ಆದರೆ ಎಷ್ಟು ಹಣ ಅಂತಾ ಹೇಳಾಕಗಲ್ಲ* ಕೊಪ್ಪಳ ತಾಲೂಕಿನ ಮುನಿರಾಬಾದ್ ನಲ್ಲಿ ಗೋವಿಂದ ಕಾರಜೋಳ ಹೇಳಿಕೆ

ಕೊಪ್ಪಳ, (ಫೆ.20): ಈ ದೇಶದಲ್ಲಿ ಈ ನೆಲದಲ್ಲಿ ಒಂದೇ ಕಾನೂನು ಇದೆ. ಈ ದೇಶದ ಕಾನೂನು ಎಲ್ಲರಿಗೂ ಒಂದೇ. ಈ ಕಾನೂನನ್ನು ಎಲ್ಲರೂ ಪಾಲಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ (Govind Karjol) ಹೇಳಿದರು.

Add Asianetnews Kannada as a Preferred SourcegooglePreferred

ಇಂದು(ಭಾನುವಾರ) ಕೊಪ್ಪಳ ತಾಲೂಕಿನ ಮುನಿರಾಬಾದ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಷಯ ಕೋರ್ಟ್ ನಲ್ಲಿದೆ, ನಾನು ಈ ಕುರಿತು ಜಾಸ್ತಿ ಮಾತನಾಡಲ್ಲ ಎಂದರು.

ತೀವ್ರ ಸ್ವರೂಪ ಪಡೆದುಕೊಂಡ ಈಶ್ವರಪ್ಪ ಮಾತು,ಅತ್ತ ಹೋರಾಟಕ್ಕೆ ಕಾಂಗ್ರೆಸ್ ಕರೆ, ಇತ್ತ ಬಿಜೆಪಿ ತುರ್ತು ಸಭೆ

ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವ ಹಿನ್ನೆಲೆಯಲ್ಲಿ ರೈತರ ಭೂಮಿಗೆ ನೀರು ಒದಗಿಸಲು ರಾಜ್ಯ ಸರಕಾರ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಿಸಲಿದೆ. ಈ ಬಾರಿ ಬಜೆಟ್ ನಲ್ಲಿ ಜಲಾಶಯ ನಿರ್ಮಾಣಕ್ಕೆ ಹಣ ಇಡಲಾಗವುದು. ಆದರೆ ಎಷ್ಟು ಹಣ ಅಂತಾ ಹೇಳಾಕಗಲ್ಲ.ಬಜೆಟ್ ಮುಂಚೆ ಎಷ್ಟು ಹಣ ಅಂತಾ ಹೇಳಾಕಗಲ್ಲ ಎಂದರು.

ಈ ಹಿಂದೆ ಕಾಂಗ್ರೆಸ್ ಮೂಗಿಗೆ ತುಪ್ಪ ಹಚ್ಚೋ ಕೆಲಸ ಮಾಡಿದೆ, ಆದರೆ ನಾವು ಸಮಾನಂತರ ಜಲಾಶಯ ವಿಚಾರದಲ್ಲಿ 10 ಹೆಜ್ಜೆ ಮುಂದಿಟ್ಟಿದ್ದೇವೆ. ಈಗಾಗಲೇ ಮುಖ್ಯಮಂತ್ರಿಗಳು ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ.ಇದು ಅಂತರರಾಜ್ಯ ವಿಷಯವಾಗಿದ್ದರಿಂದ ಅಧಿಕಾರಿಗಳು ಸಭೆ ಮಾಡಿದ್ದಾರೆ. ಆಂಧ್ರ ಹಾಗು ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಮಾಹಿತಿ ನೀಡಿದರು.

ನವಲಿ ಜಲಾಶಯ ನಿರ್ಮಾಣ ಚುನಾವಣೆ ದೃಷ್ಟಿಯಿಂದ ಅಲ್ಲ. ಚುನಾವಣೆ ದೃಷ್ಠಿಯಿಂದ ಕೆಲಸ ಮಾಡೋದು ಕಾಂಗ್ರೆಸ್. ಈ ಹಿಂದೆ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಆಣೆ ಮಾಡಿದ್ರು. ಪ್ರತಿ ವರ್ಷ 10 ಸಾವಿರ ಕೋಟಿ ಹಣ ನೀಡುವುದಾಗಿ ಸಂಗಮೇಶ್ವರ ಮೇಲೆ 
ಆಣೆ ಮಾಡಿದವರು. ಸಂಗಪ್ಪನ ಮೇಲೆ ಆಣೆ ಪ್ರಮಾಣ ಮಾಡಿ ಅದರಂತೆ ನಡೆದುಕೊಳ್ಳದವರು ಯಾರೂ ಉದ್ದಾರ ಆಗಿಲ್ಲ ಎಂದು ಕಿಡಿಕಾರಿದರು. 

ಈಗ ಮೇಕೆದಾಟು ವಿಚಾರವಾಗಿ ಪಾದಯಾತ್ರೆ ಮಾಡುತ್ತೀನಿ ಎಂದಿದ್ದಾರೆ. ಮುಂದೆ ಮಹಾದಾಯಿ ಯೋಜನೆಗಾಗಿ ಎಂದು ಬರುತ್ತಾರೆ. ಈ ಹಿಂದೆ ಮಹಾದಾಯಿ ಹೋರಾಟದಲ್ಲಿ ನೀರು ಕೇಳಿದ ರೈತರ ಮೇಲೆ ಲಾಠಿ ಚಾರ್ಜ ಮಾಡಿಸಿದರು. ಹೆಣ್ಮಕ್ಕಳ ಬಟ್ಟೆ ಹರಿದರು. ಅವರು ಕೇವಲ ರಾಜಕೀಯಕ್ಕಾಗಿ ಮಾತನಾಡುತ್ತಾರೆ ಎಂದು ಕಾರಜೋಳ ಹೇಳಿದರು.

 ಈಶ್ವರಪ್ಪ ಯಾಕೆ ರಾಜೀನಾಮೆ ಕೊಡಬೇಕು. ಅವರು ರಾಜೀನಾಮೆ ಕೊಡೋ ಅಂತದ್ದು ಏನೂ ಮಾಡಿಲ್ಲ. ಅವರು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಶ್ವರಪ್ಪ ರಾಜೀನಾಮೆ ಕೊಡೋ ಅಂತಾ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್ ನವರು ಏನೂ ಕೆಲಸ ಮಾಡದ ಹಿನ್ನೆಲೆಯಲ್ಲಿ ಇಂತಹ ಗಿಮಿಕ್ ಮಾಡ್ತಾರೆ. 60 ವರ್ಷದ ಅಧಿಕಾರದಲ್ಲಿ ಏನೂ ಮಾಡಿಲ್ಲ ಹೀಗಾಗಿ ಗಿಮಿಕ್ ಮಾಡ್ತಾರೆ ಎಂದರು.

ಇದೇ ವೇಳೆ ರಾಜ್ಯದಲ್ಲಿ ತಿಲಕ ಬಳೆ ವಿಚಾರವಾಗಿ ಚರ್ಚೆ ಆರಂಭವಾಗಿದೆ. ಈ ಕುರಿತು ನೋ ರಿಯಾಕ್ಟ್.‌ ನನ್ನ ಬಾಯಿಂದ ಏನೂ ಅನಸಬೇಡಿ ಎನ್ನುತ್ತಾ ತಿಲಕ ಬಳೆ ವಿಚಾರ ಮಾತಾನಾಡಲು ಕಾರಜೋಳ ಹಿಂದೇಟು ಹಾಕಿದರು.

ಕಾಂಗ್ರೆಸ್‌ನಿಂದ ಪ್ರತಿಭಟನೆಗೆ ಕರೆ
ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್​ ಧರಣಿ ನಡೆಸುತ್ತಿದೆ. ವಿಧಾನಸೌಧ ಹಾಗೂ ವಿಧಾನ ಪರಿಷತ್​ನಲ್ಲಿ ಈಶ್ವರಪ್ಪ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಮಧ್ಯೆ, ವಿಧಾನಸೌಧದ ಹೊರಗೂ ಹೋರಾಟಕ್ಕೆ ಕಾಂಗ್ರೆಸ್ ನಾಯಕರು (Congress Peotest) ಕರೆ ನೀಡಿದ್ದಾರೆ. ನಾಳೆ (ಫೆ.21) ರಾಜ್ಯಾದ್ಯಂತ ಈಶ್ವರಪ್ಪ (KS Eshwarappa) ವಿರುದ್ಧ ಪ್ರತಿಭಟನೆಗೆ (Protest) ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ತಾಲೂಕು ಕೇಂದ್ರ, ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಯಲಿದೆ.

 ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಕೈ ಪಾಳಯ ಮುಂದಾಗಿದೆ. ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನ ನಡೆಸಲಾಗುತ್ತಿದೆ. ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಕಾಂಗ್ರೆಸ್ ತೀರ್ಮಾನಿಸಿದೆ.