Mantralaya seer on RSS: ಆರೆಸ್ಸೆಸ್‌ಗೆ ಸೇರಬೇಡಿ ಎನ್ನುವುದು ಸಂವಿಧಾನ ವಿರೋಧಿ: ಮಂತ್ರಾಲಯ ಶ್ರೀಗಳ ಮಹತ್ವದ ಹೇಳಿಕೆ  ಆರ್‌ಎಸ್‌ಎಸ್‌ ದೇಶಭಕ್ತಿಯನ್ನು ಮೂಡಿಸುವ ಸಂಸ್ಥೆಯಾಗಿದ್ದು, ಇದರಲ್ಲಿ ಭಾಗಿಯಾಗಿ ದೇಶದ ಸಮಗ್ರತೆ ಹೋರಾಡಬೇಕು ಎಂದರು.

ರಾಯಚೂರು(ಅ.23): ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ನಿಷೇಧದ ವಿಚಾರದ ಬಗ್ಗೆ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಹತ್ವದ ಹೇಳಿಕೆ ನೀಡಿದ್ದಾರೆ.

ಪ್ರತಿಯೊಬ್ಬ ಪ್ರಜೆಯೂ ಆರೆಸ್ಸೆಸ್‌ನಲ್ಲಿ ಭಾಗಿಯಾಗಬೇಕು:

'ಆರ್‌ಎಸ್‌ಎಸ್ ಯಾವುದೇ ರಾಜಕೀಯ ಪಕ್ಷವಾಗಲೀ, ದೇಶದ್ರೋಹಿ ಸಂಘಟನೆಯಾಗಲಿ ಅಲ್ಲ. ಇದು ದೇಶದ ಭದ್ರತೆ, ಐಕ್ಯತೆ ಮತ್ತು ದೇಶದ ಅಭಿಮಾನವನ್ನು ಮೂಡಿಸುವ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಭಾಗಿಯಾಗಿ ದೇಶದ ಶ್ರೇಷ್ಠತೆ ಮತ್ತು ಸಮಗ್ರತೆಗಾಗಿ ಹೋರಾಡಬೇಕು. ಇದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಆರೆಸ್ಸೆಸ್‌ಗೆ ಹೋಗಬಾರದು ಎನ್ನುವುದು ಸಂವಿಧಾನ ವಿರೋಧಿ:

ಆರ್‌ಎಸ್‌ಎಸ್‌ಗೆ ಹೋಗಬಾರದು ಎಂದು ಹೇಳುವುದು ಸಂವಿಧಾನದ ವಿರುದ್ಧವಾಗುತ್ತದೆ. ಸಂವಿಧಾನವು ಪ್ರತಿಯೊಬ್ಬರಿಗೂ ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ದೇಶದ ಭಾವನೆಯನ್ನು ಹೊಂದಿರುವ ಯಾರಾದರೂ ಸ್ವ ಇಚ್ಛೆಯಿಂದ ಆರ್‌ಎಸ್‌ಎಸ್‌ನಲ್ಲಿ ಭಾಗಿಯಾಗಬಹುದು ಎಂದು ಶ್ರೀ ಸುಬುಧೇಂದ್ರ ತೀರ್ಥರು ಸ್ಪಷ್ಟಪಡಿಸಿದರು. ಶ್ರೀಗಳ ಈ ಹೇಳಿಕೆ ರಾಜ್ಯದಲ್ಲಿ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಚರ್ಚೆಗಳಿಗೆ ಹೊಸ ಆಯಾಮವನ್ನು ತಂದಿದೆ.