ಹನ್ನೆರಡು ವರ್ಷಗಳ ಬಳಿಕ ಜಿಲ್ಲೆಯಲ್ಲಿ ಚಳಿ ಹೆಚ್ಚಿದೆ. ಉತ್ತರ ಭಾರತದ ಶೀತ ಮಾರುತದ ಪರಿಣಾಮವಾಗಿ ಕಡಿಮೆ ತಾಪಮಾನ ದಾಖಲಾಗಿದೆ. ಗುರುವಾರ ರಾತ್ರಿ 9.6ರಷ್ಟು ಕನಿಷ್ಠ ತಾಪಮಾನವಿದ್ದು, 2011ರಲ್ಲಿ ದಾಖಲಾಗಿದ್ದ 9.8 ಡಿಗ್ರಿಗಿಂತಲೂ 0.3ರಷ್ಟು ತಾಪಮಾನ ಕಡಿಮೆಯಾಗಿದೆ.

ಮಂಡ್ಯ (ಜ.13): ಹನ್ನೆರಡು ವರ್ಷಗಳ ಬಳಿಕ ಜಿಲ್ಲೆಯಲ್ಲಿ ಚಳಿ ಹೆಚ್ಚಿದೆ. ಉತ್ತರ ಭಾರತದ ಶೀತ ಮಾರುತದ ಪರಿಣಾಮವಾಗಿ ಕಡಿಮೆ ತಾಪಮಾನ ದಾಖಲಾಗಿದೆ. ಗುರುವಾರ ರಾತ್ರಿ 9.6ರಷ್ಟು ಕನಿಷ್ಠ ತಾಪಮಾನವಿದ್ದು, 2011ರಲ್ಲಿ ದಾಖಲಾಗಿದ್ದ 9.8 ಡಿಗ್ರಿಗಿಂತಲೂ 0.3ರಷ್ಟು ತಾಪಮಾನ ಕಡಿಮೆಯಾಗಿದೆ. ಸಾಮಾನ್ಯವಾಗಿ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಜಿಲ್ಲೆಯ ವಾಡಿಕೆ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್‌ನಿಂದ 16 ಡಿಗ್ರಿವರೆಗೆ ಇರುತ್ತಿತ್ತು. 

Add Asianetnews Kannada as a Preferred SourcegooglePreferred

ಕಳೆದ ಮೂರು ದಿನಗಳಿಂದ ಜಿಲ್ಲೆಯ ತಾಪಮಾನದಲ್ಲಿ ಕುಸಿಯುತ್ತಿರುವುದು ತಾಲೂಕಿನ ವಿ.ಸಿ.ಫಾರಂನಲ್ಲಿರುವ ಕೃಷಿ ಹವಾಮಾನ ಇಲಾಖೆಯಲ್ಲಿ ದಾಖಲಾಗಿದೆ. ಜ.9ರಂದು 9.9 ಡಿಗ್ರಿ, ಜ.10ರಂದು 10.9 ಡಿಗ್ರಿ, ಜ.12ರಂದು 9.6 ಡಿಗ್ರಿಗೆ ತಾಪಮಾನ ಕುಸಿತ ಕಂಡಿದೆ. ಮುಂದಿನ ನಾಲ್ಕು ದಿನಗಳವರೆಗೆ ಇದೇ ರೀತಿಯ ವಾತಾವರಣ ಮುಂದುವರೆಯಲಿದೆ. ಮಂಗಳವಾರದಿಂದ ಜಿಲ್ಲೆಯ ಉಷ್ಣಾಂಶ ವಾಡಿಕೆಯಷ್ಟು ತಲುಪಲಿದೆ ಎಂದು ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. 

Mandya: ಇಬ್ರಾಹಿಂರಿಂದಲೇ ಜೆಡಿಎಸ್‌ ಅವನತಿ: ಸಿ.ಪಿ.ಯೋಗೇಶ್ವರ್‌

ಕಳೆದ 42 ವರ್ಷಗಳಲ್ಲಿ ಡಿಸೆಂಬರ್-ಜನವರಿ ತಿಂಗಳ ಜಿಲ್ಲೆಯ ತಾಪಮಾನವನ್ನು ಅವಲೋಕಿಸಿದಾಗ ಮೂರು ವರ್ಷಗಳಲ್ಲಿ ಕುಸಿತ ಕಂಡಿರುವುದು ದಾಖಲಾಗಿದೆ. 1981 ರಲ್ಲಿ 8.9 ಡಿಗ್ರಿಯಿಂದ 9.1 ಡಿಗ್ರಿ, 1994ರಲ್ಲೃ 8.9 ಡಿಗ್ರಿಯಿಂದ 10.5 ಡಿಗ್ರಿ, 2011ರಲ್ಲಿ 9.8 ಡಿಗ್ರಿಯಿಂದ 10.3 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಕುಸಿದಿದ್ದು, ಈ ಮೂರು ವರ್ಷಗಳ ಬಳಿಕ 2023ರ ಜನವರಿಯಲ್ಲಿ ಕಡಿಮೆ ಪ್ರಮಾಣದ ಉಷ್ಣಾಂಶ ದಾಖಲಾಗಿರುವುದು ಕಂಡುಬಂದಿದೆ. 

ಈ ವರ್ಷ ವಾಡಿಕೆ ಉಷ್ಣಾಂಶಕ್ಕಿಂತ 6 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ತಾಪಮಾನ ದಾಖಲಾಗಿರುವುದು ವಿಶೇಷವಾಗಿದೆ. ಉತ್ತರ ಭಾರತದಲ್ಲಿ ಶೀತ ಮಾರುತಗಳು ತೀವ್ರವಾಗಿದೆ. ಜಲಪಾತಗಳೇ ಹೆಪ್ಪುಗಟ್ಟುತ್ತಿವೆ. ಅಲ್ಲಿ ಚಳಿಯ ಪ್ರಮಾಣ ತೀವ್ರಗೊಂಡಿದ್ದು, ಉತ್ತರದಿಂದ ದಕ್ಷಿಣದ ಕಡೆಗೆ ಶೀತ ಮಾರುತಗಳು ಬೀಸುತ್ತಿರುವುದರಿಂದ ಚಳಿಯ ಪ್ರಮಾಣವೂ ಹೆಚ್ಚಿದೆ. ಹಗಲು ವೇಳೆಯೂ ಶೀತ ಮಾರುತದ ಅನುಭವ ಜನರಿಗೆ ಆಗುತ್ತಿದೆ. 

ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ: ಮಹೇಶ್ ಜೋಷಿ

ಜಿಲ್ಲೆಯ ವಾಡಿಕೆ ತಾಪಮಾನಕ್ಕಿಂದ 0.6 ಡಿಗ್ರಿ ಉಷ್ಣಾಂಶ ಕುಸಿತ ಕಂಡಿದೆ. 12 ವರ್ಷಗಳ ಬಳಿಕ 9.6 ಡಿಗ್ರಿ ಕಡಿಮೆ ಉಷ್ಣಾಂಶ ದಾಖಲಾಗಿದೆ. ಮೂರು ದಿನಗಳಿಂದಲೂ ಚಳಿಯ ಪ್ರಮಾಣ ಹೆಚ್ಚಿದ್ದು, ಮಂಗಳವಾರದವರೆಗೂ ಇದು ಮುಂದುವರೆಯಲಿದೆ. ಉತ್ತರ ಭಾರತದ ಶೀತ ಮಾರುತಗಳೇ ದಕ್ಷಿಣದಲ್ಲಿ ಉಷ್ಣಾಂಶ ಕುಸಿಯಲು ಕಾರಣವಾಗಿದೆ.
- ಎಸ್.ಎನ್.ಅರ್ಪಿತಾ, ಕೃಷಿ ಹವಾಮಾನ ತಜ್ಞೆ