ಬೆಳಗಾವಿ ಜಿಲ್ಲೆಯ ತಿಗಡಿ ಗ್ರಾಮದಲ್ಲಿ ನಾಯಿ ಕಡಿದ ಆರು ತಿಂಗಳ ಬಳಿಕ ಶಿವಶಂಕರ್ ಎಂಬ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಾಯಿ ಕಡಿತವನ್ನು ನಿರ್ಲಕ್ಷಿಸಿದ್ದರಿಂದ ಈ ದುರಂತ ಸಂಭವಿಸಿದೆ.

ಬೆಳಗಾವಿ (ಏ.9): ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಗ್ರಾಮದ ನಿವಾಸಿ ಶಿವಶಂಕರ್ ಪರಸಪಗೋಳ (40) ಎಂಬ ವ್ಯಕ್ತಿ, ನಾಯಿ ಕಡಿದ ಆರು ತಿಂಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಘಟನೆಯ ವಿವರ

ಕಳೆದ ಆರು ತಿಂಗಳ ಹಿಂದೆ ತಿಗಡಿ ಗ್ರಾಮದಲ್ಲಿ ಶಿವಶಂಕರ್ ಅವರ ಸಾಕು ನಾಯಿಯೊಂದು ಹುಚ್ಚು ನಾಯಿಯಿಂದ ಕಚ್ಚಿಸಿಕೊಂಡಿತ್ತು. ಬಳಿಕ ಆ ಸಾಕು ನಾಯಿಯು ಶಿವಶಂಕರ್ ಅವರಿಗೆ ಕಡಿದು ಗಾಯಗೊಳಿಸಿತ್ತು. ಆದರೆ, ಈ ಗಾಯವನ್ನು ಶಿವಶಂಕರ್ ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ಮಾಡಿದ್ದರು. 

ಇದನ್ನೂ ಓದಿ: Kancha Gachibowli row: ಬೀದಿ ನಾಯಿಗಳ ದಾಳಿಗೆ ಬಲಿಯಾದ ಜಿಂಕೆ!

ನಿನ್ನೆ ಏಕಾಏಕಿ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ, ಅವರನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಂದು ಅವರು ಮೃತಪಟ್ಟಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೀಮ್ಸ್ ಶವಗಾರಕ್ಕೆ ರವಾನಿಸಲಾಗಿದೆ. 
ಈ ಘಟನೆಯಿಂದ ಗ್ರಾಮದಲ್ಲಿ ಆತಂಕ ಮನೆಮಾಡಿದ್ದು, ನಾಯಿ ಕಡಿತದ ಗಾಯಗಳನ್ನು ಸರಿಯಾಗಿ ಗಮನಿಸುವ ಮತ್ತು ತಕ್ಷಣದ ಚಿಕಿತ್ಸೆ ಪಡೆಯುವ ಮಹತ್ವವನ್ನು ಈ ದುರಂತ ಮತ್ತೊಮ್ಮೆ ಎಚ್ಚರಿಸಿದೆ.