Asianet Suvarna News Asianet Suvarna News

Police Protection : ಕರ್ನಾಟಕ ಪೊಲೀಸ್‌ ಸಿಬ್ಬಂದಿಗೆ ಮಹಾರಾಷ್ಟ್ರ ಪೊಲೀಸರ ಭದ್ರತೆ!

  •  ಕರ್ನಾಟಕ ಪೊಲೀಸ್‌ ಸಿಬ್ಬಂದಿಗೆ ಮಹಾರಾಷ್ಟ್ರ ಪೊಲೀಸರ ಭದ್ರತೆ!
  •   ರಾಜ್ಯದ ಗಡಿ ತನಕ ಬಿಟ್ಟು ಹೋದ ಖಾಕಿ ಪಡೆ
Maharashtra Police Protection For Karnataka Police snr
Author
Bengaluru, First Published Dec 19, 2021, 8:31 AM IST

 ಬೆಳಗಾವಿ (ಡಿ.19): ಕರ್ನಾಟಕದ ಪೊಲೀಸರಿಗೆ ಮಹಾರಾಷ್ಟ್ರದ ಪೊಲೀಸರು ಭದ್ರತೆ ಒದಗಿಸಿದ ಅಪರೂಪದ ಘಟನೆ ಶನಿವಾರ ನಡೆದಿದೆ. ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಭದ್ರತೆ ಒದಗಿಸಲು ಬೆಳಗಾವಿ ಆಗಮಿಸಿದ್ದ ಕರ್ನಾಟಕದ ಪೊಲೀಸರು, ಶನಿವಾರ ರಜೆಯಿದ್ದ ಕಾರಣ ಲಕ್ಷ್ಮೇದೇವಿಯ ದರ್ಶನ ಪಡೆಯಲು ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ತೆರಳಿದ್ದರು. ಆದರೆ, ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವುದನ್ನು ಖಂಡಿಸಿ ಮಹಾರಾಷ್ಟ್ರದಲ್ಲಿ ಶಿವಸೇವೆ ಪುಂಡರು ದಾಂಧಲೆ ನಡೆಸುತ್ತಿದ್ದರು. ಕರ್ನಾಟಕದ ವಾಹನಗಳ ಮೇಲೆ ದಾಳಿ ನಡೆಸಿ, ಮಸಿ ಬಳಿಯುತ್ತಿದ್ದರು. ಈ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆ ಕೊಲ್ಹಾಪುರದ ಪೊಲೀಸರ ಬಳಿ, ರಾಜ್ಯ ಪೊಲೀಸರು ಕೋರಿದ್ದು, ಇದಕ್ಕೆ ಸ್ಪಂದಿಸಿದ ಅಲ್ಲಿನ ಪೊಲೀಸರು ರಾಜ್ಯದ ಗಡಿ ತನಕ ರಾಜ್ಯದ ಪೊಲೀಸ್‌ ಪಡೆಗೆ ಭದ್ರತೆ ನೀಡಿದ್ದಾರೆ. ಕರ್ನಾಟಕದ ಪೊಲೀಸರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಿದ್ದು, ವಿಡಿಯೋ ವೈರಲ್‌ ಆಗಿದೆ.

ಮಹಾರಾಷ್ಟ್ರದ ಕನ್ನಡಿಗರಿಗೆ ರಕ್ಷಣೆ :   ಬೆಳಗಾವಿಯಲ್ಲಿ(Belagavi) ಮಹಾರಾಷ್ಟ್ರ ಏಕೀಕರಣ ಸಮಿತಿ(MES) ನೇತೃತ್ವದಲ್ಲಿ ನಡೆದ ಪುಂಡಾಟದ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ವೇಳೆ ಕಲ್ಲು ತೂರುವುದು, ಬೆಂಕಿ ಹಚ್ಚುವುದು ಸರಿಯೇ? ರಾತ್ರಿ ವೇಳೆ ಗೂಂಡಾಗಿರಿ ಮಾಡುವುದು ಪುರುಷಾರ್ಥವೇ ಎಂದು ಪ್ರಶ್ನಿಸಿದ್ದಾರೆ. ಜತೆಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ(Belagavi Winter Session) ಸೇರಿ ಹಲವು ಕಾರಣಗಳು ಈ ಘಟನೆಯ ಹಿಂದಿವೆ. ಈ ಕುರಿತು ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಎಂಇಎಸ್‌ ಕಿಡಿಗೇಡಿಗಳ ಪುಂಡಾಟಿಕೆಯನ್ನು ನಾವು ಯಾವುದೇ ಕಾರಣಕ್ಕೂ ಸಹಿಸಲ್ಲ. ತಡರಾತ್ರಿ ನಡೆದ ಗಲಾಟೆ ಬಗ್ಗೆ ಸಂಪೂರ್ಣ ಮಾಹಿತಿ ನನಗಿದೆ. ಪೊಲೀಸರು(Karnataka Police) ಎಲ್ಲ ರೀತಿಯ ಕಾನೂನು ಕ್ರಮ ಕೈಗೊಂಡಿದ್ದಾರೆ. ಎಂಇಎಸ್‌ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ. ಪುಂಡರ ವಿರುದ್ಧ ದೀರ್ಘಾವಧಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಕನ್ನಡಿಗರ ರಕ್ಷಣೆಗೆ ಬದ್ಧ:   ಮಹಾರಾಷ್ಟ್ರದಲ್ಲಿ(Maharastra) ಕನ್ನಡಿಗರ ಮೇಲೆ ನಡೆದ ದೌರ್ಜನಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ-ಮಹಾರಾಷ್ಟ್ರ ಉಭಯ ರಾಜ್ಯಗಳ ಡಿಜಿ, ಗೃಹ ಇಲಾಖೆ ಕಾರ್ಯದರ್ಶಿ ಮಾತುಕತೆ ನಡೆಸಲಿದ್ದಾರೆ. ಅವಶ್ಯಕತೆ ಬಿದ್ದರೆ ನಾನು ಕೂಡ ಮಹಾರಾಷ್ಟ್ರದ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರ(Kannadiga) ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದರು.

ಕೂಲಂಕಷ ತನಿಖೆಗೆ ಸೂಚನೆ:
ಬೆಳಗಾವಿ ದಾಂದಲೆ ಘಟನೆಯಲ್ಲಿ ಪೊಲೀಸ್‌ ವೈಫಲ್ಯದ ಪ್ರಶ್ನೆಯೇ ಇಲ್ಲ. ರಾತ್ರಿ ಬಂದು ಕಲ್ಲು ತೂರಾಟ ನಡೆಸಿದ್ದಾರೆ. ಗೃಹ ಸಚಿವರಿಗೆ ಗಲಾಟೆ ಬಗ್ಗೆ ಹಾಗೂ ತನಿಖೆ ಪ್ರಗತಿ ಬಗ್ಗೆ ಮಾಹಿತಿ ಪಡೆಯಲು ಸೂಚನೆ ನೀಡಿದ್ದೇನೆ ಎಂದರು. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವುದು ಸೇರಿ ಹಲವು ಕಾರಣಗಳು ಇದರ ಹಿಂದಿದೆ. ಆ ಬಗ್ಗೆ ಕೂಲಂಕಷ ತನಿಖೆಗೆ ಸೂಚಿಸಲಾಗಿದೆ. ಕಾನೂನು-ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಗೃಹ ಸಚಿವರಿಗೆ ಸೂಚಿಸಿದ್ದೇವೆ ಎಂದರು.

Belagavi Row: ಬೆಳಗಾವಿ ಗಲಾಟೆ, ಎಂಇಎಸ್ ಮೇಲೆ ಸಚಿವ ಸೋಮಣ್ಣ ಸಾಫ್ಟ್ ಕಾರ್ನರ್

ಮಿತಿಮೀರಿದ ಎಂಇಎಸ್‌, ಶಿವಸೇನೆ ಪುಂಡಾಟ
ಭಾಷೆ, ಗಡಿ ವಿಚಾರದಲ್ಲಿ ಕನ್ನಡಿಗರ ಸ್ವಾಭಿಮಾನ ಕೆಣಕುತ್ತಾ ಬಂದಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌), ಶಿವಸೇನೆಯ ಉದ್ಧಟತನ ಮಿತಿಮೀರಿದೆ. ಬೆಂಗಳೂರಿನಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕೆಲಕಿಡಿಗೇಡಿಗಳು ಮಸಿ ಬಳಿದ ಘಟನೆಯನ್ನು ಮುಂದಿಟ್ಟುಕೊಂಡು ಎಂಇಎಸ್‌, ಶಿವಸೇನೆ ಮತ್ತಿತರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ರಾತ್ರಿಯಿಡೀ ಬೆಳಗಾವಿಯಲ್ಲಿ ಪುಂಡಾಟ ನಡೆಸಿದ್ದಾರೆ. ಪೊಲೀಸ್‌ ಜೀಪ್‌, ಸರ್ಕಾರಿ ಕಾರುಗಳು ಸೇರಿ 20ಕ್ಕೂ ಹೆಚ್ಚು ವಾಹನಗಳು ಹಾಗೂ ಕನ್ನಡಿಗರ ಹೋಟೆಲ್‌ ಮೇಲೆ ಕಲ್ಲುತೂರಿ ಹಾನಿ ಮಾಡಿದ್ದಲ್ಲದೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಯನ್ನೂ ಭಗ್ನಗೊಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಕಲ್ಲುತೂರಾಟ-ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಆರೋಪದ ಮೇರೆಗೆ ಎಂಇಎಸ್‌ ಮುಖಂಡ ಶುಭಂ ಶೇಳ್ಕೆ, ಶ್ರೀರಾಮಸೇನೆ ಹಿಂದೂಸ್ತಾನ್‌ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡಸ್ಕರ್‌ ಸೇರಿ 27 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳಿಗೆ 14 ದಿನಗಳವರೆಗೆ ನಾಯಾಂಗ ಬಂಧನ ವಿಧಿಸಿ, ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ. ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಳಗಾವಿ ನಗರದಲ್ಲಿ ಡಿ.20ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದೆ. ಈ ಮಧ್ಯೆ, ಎಂಇಎಸ್‌ ನೇತೃತ್ವದಲ್ಲಿ ನಡೆದ ಪುಂಡಾಟದ ವಿರುದ್ಧ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

Follow Us:
Download App:
  • android
  • ios