Loksabha election 2024: ಎನ್ಡಿಎ ಜೊತೆ ಸೇರದೆ ಸ್ವತಂತ್ರವಾಗಿ ಸ್ಪರ್ಧಿಸಲು ದೇವೇಗೌಡ ಇಂಗಿತ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಅಥವಾ ಇಂಡಿಯಾ ಜೊತೆ ಕೈಜೋಡಿಸದೆ ಸ್ವತಂತ್ರವಾಗಿ ಎದುರಿಸುವ ಇಂಗಿತವನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜು.21) : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಅಥವಾ ಇಂಡಿಯಾ ಜೊತೆ ಕೈಜೋಡಿಸದೆ ಸ್ವತಂತ್ರವಾಗಿ ಎದುರಿಸುವ ಇಂಗಿತವನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ವ್ಯಕ್ತಪಡಿಸಿದ್ದಾರೆ.
ಗುರುವಾರ ತಡರಾತ್ರಿವರೆಗೂ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಈ ರಾಜ್ಯದ ಜನರ ಹಿತ ದೃಷ್ಟಿಯಿಂದ ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಂಡು ಹೋಗುವ ಅಗತ್ಯ ಇದೆ ಎಂಬ ಮಾತನ್ನು ನಾನು ಸಭೆಯಲ್ಲಿ ಹೇಳಿದ್ದೇನೆ. ನನಗೆ ರಾಷ್ಟ್ರ ರಾಜಕಾರಣವೂ ಗೊತ್ತಿದೆ. ರಾಜ್ಯ ರಾಜಕಾರಣವೂ ಗೊತ್ತಿದೆ. ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಮುಂದೆಯೂ ಮಾಡುತ್ತೇವೆ ಎಂದರು.
ಹಾಗಾದರೆ ಬಿಜೆಪಿ ನೇತೃತ್ವದ ಎನ್ಡಿಎ ಮುಂದಿನ ಸಭೆಗೆ ಕರೆದರೆ ಹೋಗುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಗೌಡರು, ಯಾವುದರ ಅಗತ್ಯವೂ ಇಲ್ಲ. ಎನ್ಡಿಎನೂ ಇಲ್ಲ. ಇಂಡಿಯಾನೂ ಇಲ್ಲ. ನಾವು ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
Party Rounds: ಸೋಮವಾರ ದೆಹಲಿಗೆ ದೇವೇಗೌಡ, ಮೈತ್ರಿ ಮಾತುಕತೆ ಸಾಧ್ಯತೆ
ಎನ್ಡಿಎ ಸೇರ್ಪಡೆಗೆ ಕೆಲವರಿಂದ ಸಹಮತ, ಇನ್ನು ಕೆಲವರಿಗೆ ಗೊಂದಲ
ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಪುನಃ ರಾಜ್ಯದಲ್ಲಿ ಭದ್ರ ನೆಲೆ ಕಂಡುಕೊಳ್ಳುವ ನಿಟ್ಟಿನಲ್ಲಿ ಎನ್ಡಿಎ(BJP JDS alliance) ಜತೆ ಗುರುತಿಸಿಕೊಳ್ಳಲು ಗಂಭೀರವಾಗಿ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ(HD Devegowda) ನೇತೃತ್ವದಲ್ಲಿ ಪಕ್ಷದ ಶಾಸಕರ, ಮುಖಂಡರ ಸಭೆ ನಡೆಯಿತು. ಆದರೆ ಪಕ್ಷದಲ್ಲೇ ಕೆಲವರು ಬೆಂಬಲ ಸೂಚಿಸಿದರೆ ಇನ್ನು ಹಲವರು ವಿರೋಧ, ಗೊಂದಲ್ಲಿದ್ದಾರೆ.
ಜೆಡಿಎಸ್ ವಿಧಾನಸಭೆಯಲ್ಲಿ 19 ಸ್ಥಾನಗಳನ್ನು ಹೊಂದಿದ್ದು, ಪಕ್ಷ ಇದ್ದರೆ ಮಾತ್ರ ಮುಂದೆ ಭವಿಷ್ಯ ಉಳಿಯಲಿದೆ. ಇಲ್ಲದಿದ್ದರೆ ಕಷ್ಟವಾಗಲಿದೆ ಎಂಬ ದೃಷ್ಟಿಯಿಂದ ಸಭೆ ನಡೆಸಲಾಗಿದೆ. ಕೆಲವು ಎನ್ಡಿಎ ಜತೆ ಹೋಗಲು ಸಹಮತ ವ್ಯಕ್ತಪಡಿಸಿದರೆ, ಇನ್ನು ಕೆಲವರು ಗೊಂದಲದಲ್ಲಿದ್ದು, ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ ಎಂದು ಹೇಳಲಾಗಿದೆ.
ಹೋರಾಟ ಮಾಡುವುದಕ್ಕಾದರೂ ಪಕ್ಷದ ಅಸ್ತಿತ್ವ ಮುಖ್ಯವಾಗಿದೆ. ಹೀಗಾಗಿ ಪಕ್ಷವನ್ನು ಉಳಿಸಿಕೊಳ್ಳುವತ್ತ ಮುಖಂಡರು ಗಮನಹರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇವೇಗೌಡ ಅವರು ಶಾಸಕರ, ಮುಖಂಡರ ಅಭಿಪ್ರಾಯಗಳನ್ನು ಆಲಿಸಿದರು. ಆದರೆ, ಅವರು ಯಾವುದೇ ತೀರ್ಮಾನವನ್ನು ತಿಳಿಸಿಲ್ಲ. ಅಭಿಪ್ರಾಯ ಪಡೆದು ಮತ್ತೊಮ್ಮೆ ಆಲೋಚನೆ ಮಾಡಿ ನಂತರ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಲೋಕಸಭಾ ಚುನಾವಣೆ: ಬಿಜೆಪಿ ಜತೆ ಮೈತ್ರಿ ಏರ್ಪಟ್ಟರೆ 7 ಕ್ಷೇತ್ರಕ್ಕೆ ಜೆಡಿಎಸ್ ಬೇಡಿಕೆ?
ಎನ್ಡಿಎ ಜತೆ ಹೋಗಲು ಪಕ್ಷದ ಶಾಸಕರ ಅಭ್ಯಂತರ ಇಲ್ಲ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ನಾಯಕರು ಗೊಂದಲದಲ್ಲಿದ್ದಾರೆ. ಎನ್ಡಿಎ ಜತೆ ಹೋದರೆ ಕ್ಷೇತ್ರದಲ್ಲಿ ಪರಿಣಾಮ ಬೀರಲಿದೆ. ಹೀಗಾಗಿ ಸೋಲನುಭವಿಸಿದ ನಾಯಕರು ಹಿಂದೇಟು ಹಾಕಿದ್ದಾರೆ ಎಂದು ತಿಳಿದುಬಂದಿದೆ.