ಗ್ರಾಮ ಲೆಕ್ಕಿಗರ ವರ್ಗಾವಣೆಗಾಗಿ 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಾಂಡವಪುರ ತಹಶೀಲ್ದಾರ್ ಕೆ.ಸಿ.ಸೌಮ್ಯ ಗುರುವಾರ ಸಂಜೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಂಡ್ಯ (ಜೂ.23): ಗ್ರಾಮ ಲೆಕ್ಕಿಗರ ವರ್ಗಾವಣೆಗಾಗಿ 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಾಂಡವಪುರ ತಹಶೀಲ್ದಾರ್ ಕೆ.ಸಿ.ಸೌಮ್ಯ ಗುರುವಾರ ಸಂಜೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಳೆದ ನಾಲ್ಕುವರೆಗೆ ತಿಂಗಳಿಂದ ಪಾಂಡವಪುರ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎಸ್.ಸೌಮ್ಯ ಅವರು ಇದೇ ತಾಲೂಕಿನಲ್ಲಿ ಗ್ರಾಮ ಲೆಕ್ಕಿಗರಾಗಿ ಕೆಲಸ‌ ನಿರ್ವಹಿಸುತ್ತಿದ್ದ ಮರಿಸ್ವಾಮಿ ಅವರ ಬೇರೆಡೆ ವರ್ಗಾವಣೆ ಮಾಡುವುದಕ್ಕಾಗಿ 40 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. 

Add Asianetnews Kannada as a Preferred SourcegooglePreferred

ಅದರಂತೆ, ಗುರುವಾರ ಸಂಜೆ 6.20 ಸಮಯದಲ್ಲಿ ಪಾಂಡವಪುರ ತಹಶೀಲ್ದಾರ್ ಕಚೇರಿಯಲ್ಲಿ ಮರಿಸ್ವಾಮಿ ಅವರಿಂದ 40 ಸಾವಿರ ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಡಿವೈಎಸ್ ಪಿ.ಸುನೀಲ್ ಕುಮಾರ್, ಸಬ್ ಇನ್ಸ್ ಪೆಕ್ಟರ್‌ಗಳಾದ ಬ್ಯಾಟರಾಯಗೌಡ, ಮೋಹನ್ ರೆಡ್ಡಿ, ಪ್ರಕಾಶ್ ಅವರು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ತಹಶೀಲ್ದಾರ್ ಸೌಮ್ಯ ಹಿಡಿದಿದ್ದಾರೆ. ತಕ್ಷಣವೇ ಅವರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ರಾತ್ರಿ 9 ಗಂಟೆಯವರೆಗೂ ತಹಶೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿದರು‌.

ಇನ್ನೊಂದು ವಾರದಲ್ಲಿ 3500 ಪೊಲೀಸ್‌ ಕಾನ್‌ಸ್ಟೇಬಲ್‌ ನೇಮಕ: ಸಚಿವ ಪರಮೇಶ್ವರ್‌

ಖಾತೆ ಬದಲಾವಣೆಗೆ ಲಂಚ ಸ್ವೀಕಾರ: ಪಂಚಾಯಿತಿ ಕಚೇರಿಯಲ್ಲಿ ಖಾತೆ ಬದಲಾವಣೆ ಸಂಬಂಧ 20 ಸಾವಿರ ರುಪಾಯಿ ಲಂಚಕ್ಕೆ ಬೇಡಿಕೆಯಿಟ್ಟಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಂಚ ಸ್ವೀಕಾರ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಕೌಕ್ರಾಡಿ ಗ್ರಾ.ಪಂ.ನಲ್ಲಿ ನಡೆದಿದೆ. ಕೌಕ್ರಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಹೇಶ್‌ ಜಿ.ಎನ್‌. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಅಧಿಕಾರಿ. ಕೊಕ್ಕಡ ಗ್ರಾಮದ ವ್ಯಕ್ತಿಯೊಬ್ಬರು ಕೌಕ್ರಾಡಿಯ ತಮ್ಮ ಜಮೀನಿನ 9/11ನ ಖಾತೆ ಬದಲಾವಣೆಯನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು 2017ರಲ್ಲಿ ಕೌಕ್ರಾಡಿ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಜಮೀನಿನ ಖಾತೆ ಬದಲಾವಣೆಯಾಗದಿರುವುದರಿಂದ 2021ರಲ್ಲಿ ಪುನಃ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. 

ಕೇಂದ್ರದ 5 ಕೆಜಿ ಸೇರಿಸಿ 15 ಕೆಜಿ ಅಕ್ಕಿ ನೀಡಲು ನಾವು ಸಿದ್ಧ: ಸಚಿವ ಆರ್‌.ಬಿ.ತಿಮ್ಮಾಪುರ

ಆದರೂ ಅವರ ಜಮೀನಿನ ಖಾತೆ ಬದಲಾವಣೆಯಾಗಿರಲಿಲ್ಲ. ಈ ಬಗ್ಗೆ ಕೌಕ್ರಾಡಿ ಗ್ರಾ.ಪಂ.ಗೆ ಹೋಗಿ ವಿಚಾರಿಸಿದಾಗ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಹೇಶ್‌ ಜಿ.ಎನ್‌. ಈ ಸಂಬಂಧ 20,000 ರು. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಅರ್ಜಿ ಸಲ್ಲಿಸಿದ ವ್ಯಕ್ತಿ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಗುರುವಾರ ಪಿಡಿಒ ಮಹೇಶ್‌ ಲಂಚದ ಹಣ ಸ್ವೀಕರಿಸುವಾಗ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಸಿ.ಎ. ಸೈಮನ್‌ ಮಾರ್ಗದರ್ಶನದಲ್ಲಿ ಉಪಾಧೀಕ್ಷಕರಾದ ಕಲಾವತಿ, ಚೆಲುವರಾಜು ಬಿ. ಹಾಗೂ ಪೊಲೀಸ್‌ ನಿರೀಕ್ಷಕ ಅಮಾನುಲ್ಲಾ, ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.