ಹಾವೇರಿಯ ಶಿಗ್ಗಾವಿ ಕೋರ್ಟ್‌ನಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್, 20 ವರ್ಷಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 80 ವರ್ಷದ ಅಜ್ಜ ಮತ್ತು 75 ವರ್ಷದ ಅಜ್ಜಿಯನ್ನು ಯಶಸ್ವಿಯಾಗಿ ಒಂದುಗೂಡಿಸಿದೆ. ನ್ಯಾಯಾಧೀಶರು ಮತ್ತು ವಕೀಲರ ಮನವೊಲಿಕೆಯ ಫಲವಾಗಿ, ನಾಲ್ಕು ಜೋಡಿಗಳು ಒಂದಾಗಿದ್ದಾರೆ.

ಹಾವೇರಿ (ಡಿ.13): ಸುಮಾರು 20 ವರ್ಷಗಳ ಹಿಂದೆಯೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಪ್ರತ್ಯೇಕವಾಗಿದ್ದ ಅಜ್ಜ-ಅಜ್ಜಿಯನ್ನು ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿ ಒಂದುಗೂಡಿಸಿ, ಅವರ ಬದುಕಿಗೆ ಹೊಸ ಬೆಳಕು ನೀಡಿದೆ. ಈ ಭಾವನಾತ್ಮಕ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಕೋರ್ಟ್ ಆವರಣದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

20 ವರ್ಷಗಳ ವಿಚ್ಛೇದನ ಹೋರಾಟಕ್ಕೆ ಇತಿಶ್ರೀ:

ಶಿಗ್ಗಾವಿ ಕೋರ್ಟ್‌ನಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ನಾಲ್ಕು ಜೋಡಿಗಳನ್ನು ನ್ಯಾಯಾಧೀಶರು ಹಾಗೂ ವಕೀಲರು ಯಶಸ್ವಿಯಾಗಿ ಮನವೊಲಿಸಿ ಮತ್ತೆ ಒಂದು ಮಾಡಿದ್ದಾರೆ. ಈ ನಾಲ್ಕು ಜೋಡಿಗಳ ಪೈಕಿ ಲ್ಯಾವನಗೌಡ ಪೊಲೀಸಗೌಡ (80 ವರ್ಷ) ಮತ್ತು ಅವರ ಪತ್ನಿ ಚಿನ್ನವ್ವ ಪೊಲೀಸಗೌಡ (75 ವರ್ಷ) ಅವರ ಪ್ರಕರಣ ಪ್ರಮುಖವಾಗಿದೆ. ಸುಮಾರು 20 ವರ್ಷಗಳ ಹಿಂದೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಧೀಶರ ಮನವೊಲಿಕೆ ಯಶಸ್ವಿ:

ಹಿರಿಯ ನ್ಯಾಯಾಧೀಶರಾದ ಸುನೀಲ್ ತಳವಾರ ಮತ್ತು ಕಿರಿಯ ನ್ಯಾಯಾಧೀಶರಾದ ಅಶ್ವಿನಿ ಚಂದ್ರಕಾಂತ್ ಅವರ ಸಮ್ಮುಖದಲ್ಲಿ, ನ್ಯಾಯಾಧೀಶರು ಮತ್ತು ವಕೀಲರು ನಿರಂತರ ಮಾತುಕತೆ ನಡೆಸಿ ದಂಪತಿಗಳ ಮನವೊಲಿಕೆಗೆ ಮುಂದಾದರು. ಅಂತಿಮವಾಗಿ ವಯೋವೃದ್ಧ ದಂಪತಿ ಸೇರಿದಂತೆ ನಾಲ್ಕು ಜೋಡಿಗಳು ತಮ್ಮ ಮನಸ್ಸು ಬದಲಾಯಿಸಿ ಮತ್ತೆ ಒಂದಾಗಲು ನಿರ್ಧರಿಸಿದರು. ಈ ವೇಳೆ, ಪರಸ್ಪರ ಹಾರ ಹಾಕಿಸಿ, ಸಿಹಿ ತಿನ್ನಿಸುವ ಮೂಲಕ ಜೋಡಿಗಳನ್ನು ಭಾವನಾತ್ಮಕವಾಗಿ ಒಂದು ಮಾಡಲಾಯಿತು.

ಕಾನೂನು ಪ್ರಕ್ರಿಯೆಯಲ್ಲಿದ್ದ ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಿ, ಮುರಿದು ಹೋದ ಸಂಸಾರಗಳನ್ನು ಮತ್ತೆ ಜೋಡಿಸುವಲ್ಲಿ ಲೋಕ್ ಅದಾಲತ್ ಯಶಸ್ವಿಯಾಗಿದ್ದು, ನ್ಯಾಯಾಲಯದ ಈ ಮಾನವೀಯ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.