*   ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ *  ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಮಳೆ *  ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ 

ಬೆಂಗಳೂರು(ಮಾ.20): ಬಂಗಾಳ ಕೊಲ್ಲಿಯಲ್ಲಿನ(Bay of Bengal) ವಾಯುಭಾರ ಕುಸಿತ ಸೇರಿದಂತೆ ಹವಾಮಾನದಲ್ಲಿ ಬದಲಾವಣೆಯಾಗಿರುವ ಪರಿಣಾಮ ರಾಜ್ಯದ(Karnataka) ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಮಳೆಯಾಗಲಿದೆ. ಅದರಲ್ಲೂ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ಬೆಂಗಳೂರು ಹವಾಮಾನ ಕೇಂದ್ರ(Bengaluru Meteorological Center) ನೀಡಿದೆ.

ಸದ್ಯ ಬಂಗಾಳಕೊಲ್ಲಿಯಲ್ಲಿನ ಪ್ರಬಲ ವಾಯುಭಾರ ಕುಸಿತ ಮತ್ತು ಉತ್ತರ ಪ್ರದೇಶದಿಂದ(Uttar Pradesh) ಉತ್ತರ ಕರ್ನಾಟಕದವರೆಗೆ(North Karnataka) ಮತ್ತು ವಿದರ್ಭದಿಂದ ತಮಿಳುನಾಡಿನವರೆಗೆ ಹಬ್ಬಿರುವ ಟ್ರಫ್‌, ಮಧ್ಯಪ್ರದೇಶದ ಭಾಗದಲ್ಲಿರುವ ಮೇಲ್ಮೈ ಸುಳಿಗಾಳಿ ಉಂಟಾಗಿರುವುದು ಮಳೆ ಸುರಿಯಲು ಕಾರಣವಾಗಿದೆ. ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಶಿವಮೊಗ್ಗದ ತ್ಯಾಗರ್ತಿಯಲ್ಲಿ 4 ಸೆಂ.ಮೀ. ಮಳೆಯಾಗಿದೆ.
ಕೊಡಗಿನ ನಾಪೊಕ್ಲು, ಶಿವಮೊಗ್ಗದ ಆನವಟ್ಟಿತಲಾ 3 ಸೆಂ.ಮೀ., ದಕ್ಷಿಣ ಕನ್ನಡದ ಬೆಳ್ತಂಗಡಿ ಮತ್ತು ಧರ್ಮಸ್ಥಳ, ಉಡುಪಿ ಮತ್ತು ಧಾರವಾಡದ ಕಲಘಟಗಿಯಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ. ರಾಯಚೂರಿನಲ್ಲಿ ಗರಿಷ್ಠ 41 ಸೆಂ.ಮೀ ಉಷ್ಣಾಂಶ ದಾಖಲಾಗಿದೆ. ದಾವಣಗೆರೆಯಲ್ಲಿ ಕನಿಷ್ಠ 16.3 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ವರದಿಯಾಗಿದೆ.

ಬಿಸಿಲ ಬೇಗೆಯ ಮಧ್ಯೆ ವರುಣ ಸಿಂಚನ, ಮಲೆನಾಡಿನ ಕೆಲವು ಭಾಗಗಳಲ್ಲಿ ವರ್ಷದ ಮಳೆ

ರಾಜ್ಯದ ಹಲವೆಡೆ ಅಕಾಲಿಕ ಮಳೆಗೆ ಮೂವರ ಬಲಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು(Bengaluru), ಮೈಸೂರು, ಮಂಡ್ಯ, ಚಿಕ್ಕಮಗಳೂರು, ರಾಯಚೂರು, ಕೊಪ್ಪಳ ಚಾಮರಾಜನಗರ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆ ಶುರುವಾಗಿದ್ದು, ಶನಿವಾರ ಮಳೆಯಬ್ಬರಕ್ಕೆ ಮೂವರು ಬಲಿಯಾಗಿದ್ದಾರೆ(Death).

ಮುಂಗಾರು ಪೂರ್ವ ಮಳೆಯ ಅಬ್ಬರದಲ್ಲಿ ಸಿಡಿಲಿಗೆ ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಹನಸೋಗೆ ಗ್ರಾಮದ ಸಿದ್ದಲಿಂಗನಾಯಕ (72), ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಗಾಣದಾಲ ಗ್ರಾಮದ ಹೊರವಲಯದಲ್ಲಿ 13 ಕುರಿ ಸೇರಿ ಕುರಿಗಾಯಿ ಸುನೀಲ್‌ ಬಸರಿಹಾಳ(21) ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯ ಗ್ರಾಮದಲ್ಲಿ ಬಾರಿ ಬಿರುಗಾಳಿಯಿಂದಾಗಿ ತೆಂಗಿನ ಮರ ನೆಲಕ್ಕುರಳಿ ಪ್ರಿಯಾಂಕ(12) ಎಂಬ ಬಾಲಕಿ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡು, ಕಾರು, ಬೈಕ್‌ ಜಖಂಗೊಂಡಿರುವ ಘಟನೆ ನಡೆದಿದೆ. ಶ್ರೀರಂಗಪಟಣದಿಂದ ಬನ್ನೂರು ಕಡೆಗೆ ಕಾರು ಚಲಿಸುತ್ತಿದ್ದ ವೇಳೆ ತೆಂಗಿನಮರ ಕಾರಿನ ಮೇಲೆ ಉರುಳಿ ಬಾಲಕಿ ಪ್ರಿಯಾಂಕ ಸ್ಥಳದಲ್ಲೇ ಮೃತಪಟ್ಟಿದ್ದು, ತಂದೆ ನಾಗರಾಜು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇನ್ನಷ್ಟು ಹೆಚ್ಚಾಲಿದೆ ಬಿಸಿಲ ಧಗೆ : ಹವಾಮಾನ ಇಲಾಖೆ ಎಚ್ಚರಿಕೆ

ಮೈಸೂರಲ್ಲೂ ನಗರದ ಪ್ರಮುಖ ರಸ್ತೆಗಳು ಮತ್ತು ತಗ್ಗು ಪ್ರದೇಶಕ್ಕೆ ನೀರು ನುಗ್ಗಿತ್ತು. ಚಾಮರಾಜನಗರ ಜಿಲ್ಲೆಯ ಕಿಲಗೆರೆ, ಕೊತ್ತಲವಾಡಿ, ಮಾದಲವಾಡಿಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಬಿರುಗಾಳಿಗೆ ಕಿಲಗೆರೆ ಗ್ರಾಮದ ಪುಟ್ಟರಂಗಮ್ಮ ಅವರ ಮನೆಯ ಛಾವಣಿ ಹಾರಿ ಹೋಗಿದೆ. ಗುಂಡ್ಲುಪೇಟೆ ತಾಲೂಕಲ್ಲಿ ಗಾಳಿ ಮಳೆಗೆ ಹತ್ತಾರು ಎಕರೆ ಬಾಳೆ ನೆಲಕಚ್ಚಿದೆ. ಹೊಸಪುರ ಗ್ರಾಮದಲ್ಲಿಹತ್ತಕ್ಕೂ ಹೆಚ್ಚು ತೆಂಗಿನ ಮರಗಳು, ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ.

7 ಜಿಲ್ಲೆ​ಗಳ​ಲ್ಲಿ ದಿಢೀರ್‌ ಮಳೆ, ಶಿರಸಿ ಜಾತ್ರೆಯಲ್ಲಿ ಕುಸಿದ ತೊಟ್ಟಿಲು

ಶಿರಸಿ: ಬಿಸಿಲ ಧಗೆ ಏರು​ತ್ತಿ​ರುವ ನಡು​ವೆಯೇ ಮಾ. 18 ರಂದು ಉತ್ತರ ಕನ್ನಡ (Uttara Kannada) ಸೇರಿ ರಾಜ್ಯದ ಏಳು ಜಿಲ್ಲೆ​ಗ​ಳಲ್ಲಿ ಶುಕ್ರವಾರ ಕೆಲ​ಗಂಟೆ​ಗಳ ಕಾಲ ದಿಢೀರ್‌ ಉತ್ತಮ (Rain) ಮಳೆ​ಯಾ​ಗಿ​ದೆ. ಮಳೆ-ಗಾಳಿ ಅಬ್ಬ​ರಕ್ಕೆ ಉತ್ತರ ಕನ್ನಡ ಜಿಲ್ಲೆಯ ಇತಿ​ಹಾಸ ಪ್ರಸಿದ್ಧ ಶಿರಸಿ (Sirsi) ಮಾರಿ​ಕಾಂಬಾ ಜಾತ್ರಾ ಗದ್ದುಗೆ ಮಂಟ​ಪಕ್ಕೆ ಹಾನಿ​ಯಾ​ಗಿದ್ದ​ಲ್ಲದೆ, ಮನೋ​ರಂಜ​ನೆ​ಗೆಂದು ಹಾಕ​ಲಾ​ಗಿದ್ದ ಜೈಂಟ್‌ ವ್ಹೀಲ್‌ನ ಐದು ತೊಟ್ಟಿಲು ಕುಸಿದು ಬಿದ್ದಿತ್ತು.

ರಾಜ್ಯ​ದಲ್ಲಿ ಕಳೆದ ಕೆಲ ದಿನ​ಗ​ಳಿಂದ ಬಿಸಿ​ಲಿನ ಝಳ ಏರು​ತ್ತಲೇ ಇದ್ದು, ಇದರ ನಡು​ವೆಯೇ ಉತ್ತರ ಕನ್ನಡ, ಹಾವೇರಿ, ಗದಗ, ಕೊಡಗು (Kodagu), ದಕ್ಷಿಣ ಕನ್ನ​ಡ, ​ಉಡುಪಿ, ಚಿಕ್ಕ​ಮ​ಗ​ಳೂರು ಜಿಲ್ಲೆ​ಯಲ್ಲಿ ಸುಮಾರು ಅರ್ಧ​ಗಂಟೆ​ಯಿಂದ ಒಂದು ಗಂಟೆ​ಗಳ ಕಾಲ ಉತ್ತಮ ಮಳೆ​ ಸುರಿ​ದಿ​ದೆ. ಕಾಫಿ ಬೆಳೆಯುವ ಪ್ರದೇಶದಲ್ಲಿ ಮಳೆಯಾದ ಬಗ್ಗೆ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದರು.