ನ್ಯಾಯಾಧಿಕರಣ ಪ್ರಕಟಿಸಿದ್ದ 16 ಲಕ್ಷದ ಜೊತೆಗೆ ಹೆಚ್ಚುವರಿ 10 ಲಕ್ಷ ಪರಿಹಾರಕ್ಕೆ ಹೈಕೋರ್ಟ್‌ ಆದೇಶ. ಬಾಗಿಲು ಕೆಟ್ಟು ಮೂರ್ನಾಲ್ಕು ವರ್ಷವಾದರೂ ದುರಸ್ತಿಪಡಿಸದೇ ಇದ್ದ ಎನ್‌ಇಕೆಆರ್‌ಟಿಸಿಗೆ ದಂಡ

ವೆಂಕಟೇಶ್‌ ಕಲಿಪಿ

ಬೆಂಗಳೂರು (ಜು.29): ಸ್ವಯಂಚಾಲಿತ ಬಾಗಿಲು ಕೆಟ್ಟು ಮೂರ್ನಾಲ್ಕು ವರ್ಷವಾಗಿದ್ದರೂ ದುರಸ್ತಿಪಡಿಸದೆ ಬಳಸಿದ ಪರಿಣಾಮ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಎನ್‌ಇಕೆಆರ್‌ಟಿಸಿ) ಬಸ್‌ನಲ್ಲಿ ಪ್ರಯಾಣಿಸಿದ್ದ ಮಹಿಳೆ ಕೆಳಗೆ ಬಿದ್ದು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಮೃತಳ ಕುಟುಂಬದವರಿಗೆ ಹೆಚ್ಚುವರಿಯಾಗಿ 10 ಲಕ್ಷ ರು. ಪರಿಹಾರವನ್ನು ಹೈಕೋರ್ಟ್‌ ಘೋಷಿಸಿದೆ.

ರಾಯಚೂರಿನಲ್ಲಿ ನಡೆದ ಪ್ರಕರಣವೊಂದರಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ತೆರೆದಿದ್ದ ಬಾಗಿಲು ಮುಖಾಂತರ ಬಸ್‌ನಿಂದ ಕೆಳಗೆಬಿದ್ದು ಸಾವನ್ನಪ್ಪಿದ್ದರು. ಮೃತಳ ಮಕ್ಕಳಿಬ್ಬರಿಗೆ ನ್ಯಾಯಾಧೀಕರಣ 15.93 ಲಕ್ಷ ರು. ಪರಿಹಾರ ಘೋಷಿಸಿತ್ತು. ಈ ಆದೇಶದ ವಿರುದ್ಧ ಎನ್‌ಇಕೆಆರ್‌ಟಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಮೃತ ಪ್ರಯಾಣಿಕಳೇ ಬಸ್‌ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಘಟನೆ ಸಂಭವಿಸಲು ಆಕೆಯ ನಿರ್ಲಕ್ಷ್ಯವೂ ಇದೆ ಎಂದು ವಾದಿಸಿತ್ತು.

ರಾಜ್ಯ ವನ್ಯಜೀವಿ ಮಂಡಳಿಗೆ ಎಂಬಿಪಾ ಪುತ್ರ, ವಿನಯ್ ಪುತ್ರಿ ಸದಸ್ಯರಾಗಿ ನೇಮಕ, ಅದಕ್ಕೆ ಕಾರಣ ಇಲ್ಲಿದೆ!

ಈ ವಾದ ತಿರಸ್ಕರಿಸಿ, ಪರಿಹಾರ ಮೊತ್ತವನ್ನು 10 ಲಕ್ಷ ರು. ಹೆಚ್ಚಿಸಿ ಒಟ್ಟು 26.43 ಲಕ್ಷ ರು. ನಿಗದಿಪಡಿಸಿದ ಹೈಕೋರ್ಟ್‌, ಈ ಮೊತ್ತಕ್ಕೆ ಶೇ.6ರಷ್ಟು ಬಡ್ಡಿದರ (ಕ್ಲೇಮು ಅರ್ಜಿ ದಾಖಲಾದ ದಿನದಿಂದ ಪರಿಹಾರ ಪಾವತಿಸುವ ದಿನದವರೆಗೆ) ಭರಿಸಬೇಕು ಎಂದು ಎನ್‌ಕೆಆರ್‌ಟಿಸಿಗೆ ನಿರ್ದೇಶಿಸಿದೆ.

ತೆರೆದ ಬಾಗಿಲು ಅಪಾಯ: ಅಪಘಾತಕ್ಕೆ ಕಾರಣವಾದ ಬಸ್ಸಿನ ಚಾಲಕ ಬಸ್‌ಗಿದ್ದ ಎರಡು ಸ್ವಯಂಚಾಲಿತ ಬಾಗಿಲುಗಳು ಘಟನೆ ನಡೆದ ದಿನಕ್ಕಿಂತ 3-4 ವರ್ಷ ಮುಂಚಿನಿಂದಲೂ ಕೆಟ್ಟು ಕಾರ್ಯ ನಿರ್ವಹಿಸುತ್ತಿರಲಿಲ್ಲ ಎಂದು ನುಡಿದಿದ್ದಾನೆ. ಈ ಸಾಕ್ಷ್ಯ ತೆರೆದ ಬಾಗಿಲುಗಳಿರುವ ಬಸ್‌ ಬಳಸಿರುವುದು ಸಾಬೀತಾಗುತ್ತದೆ. ಇನ್ನೂ ಬಾಗಿಲು ಮುಚ್ಚಲಾಗದ ಪರಿಸ್ಥಿತಿಯಲ್ಲಿರುವ ಬಸ್‌ ಬಳಕೆಯಿಂದ ಪ್ರಯಾಣಿಕರ ಜೀವಕ್ಕೆ ಹಾನಿಯಾಗುವ ಮತ್ತು ಸಾವು ಸಂಭವಿಸುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಚಾಲಕನು ಬಸ್ಸನ್ನು ಎಡದಿಂದ ಬಲಗಡೆಗೆ ದಿಢೀರ್‌ ಆಗಿ ಅಜಾಗರೂಕತೆ ಮತ್ತು ಅತಿವೇಗವಾಗಿ ತಿರುಗಿಸಿದ್ದರಿಂದ ಅಪಘಾತ ಸಂಭವಿಸಿದೆ. ಹಾಗಾಗಿ ಅಪಘಾತಕ್ಕೆ ಚಾಲಕ ಹಾಗೂ ಬಸ್ಸನ್ನು ನಿರ್ವಹಣೆ ಮಾಡಿದ ನಿಗಮದ ಮೇಲೆ ದೋಷಾರೋಪ ನಿಗದಿಪಡಿಸಿದ ನ್ಯಾಯಾಧೀಕರಣದ ಆದೇಶ ಸರಿಯಾಗಿದೆ ಎಂದು ಹೈಕೋರ್ಟ್‌ ಆದೇಶದಲ್ಲಿ ನುಡಿದಿದೆ.

ಎಡವಿದ ಈ ಹಿಂದಿನ ಸರ್ಕಾರ, ಕೇಂದ್ರ ಸರ್ಕಾರದ ಖಜಾನೆ ಸೇರಿದ ರಾಜ್ಯದ ಕ್ಯಾಂಪಾ ಹಣ!

ಪ್ರಕರಣದಲ್ಲಿ ಸಾವನ್ನಪ್ಪಿರುವ ಜಯಲಕ್ಷ್ಮಿ ಘಟನೆ ನಡೆದಾಗ ಆಕೆಗೆ 28 ವರ್ಷ. ಮಾಸಿಕ 12 ಸಾವಿರ ದುಡಿಯುತ್ತಿದ್ದರು. ಅಷ್ಟು ಹಣ ದುಡಿಯುತ್ತಿದ್ದಕ್ಕೆ ಸಾಕ್ಷ್ಯವನ್ನು ಕ್ಲೇಮುದಾರರು (ಮೃತ ಮಹಿಳೆಯ ಮಕ್ಕಳಿಬ್ಬರು) ಒದಗಿಸಿಲ್ಲ. ಇಂತಹ ಸಂದರ್ಭದಲ್ಲಿ 2017ರಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮಾರ್ಗಸೂಚಿ ಸೇರಿದಂತೆ, 2017ರಲ್ಲಿ ನ್ಯಾಷನಲ್‌ ಇಶ್ಯೂರೆನ್ಸ್‌ ಕಂಪನಿ ಲಿಮಿಟೆಡ್‌ ಮತ್ತು ಪ್ರಣಯ್‌ ಸೇಟಿ, 2019ರಲ್ಲಿ ಸರಲಾ ವರ್ಮಾ ಮತ್ತು ದೆಹಲಿ ಸಾರಿಗೆ ನಿಗಮ ನಡುವಿನ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್‌ ರೂಪಿಸಿದ ಕಾನೂನು ಅಳವಡಿಸಿಕೊಂಡರೆ, ಪ್ರಕರಣದ ಕ್ಲೇಮುದಾರರು ಒಟ್ಟು 26,43,868 ರು. ಪರಿಹಾರ ಪಡೆಯಲು ಅರ್ಹರಾಗಿದ್ದಾರೆ ಎಂದು ಹೈಕೋರ್ಟ್‌ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2019ರ ಆ.6ರಂದು ಜಯಲಕ್ಷ್ಮೀ ಕೂಲಿ ಕೆಲಸಕ್ಕೆ ಮುಗಿಸಿಕೊಂಡು ನಿಗಮದ ಬಸ್‌ನಲ್ಲಿ ಮನೆಗೆ ವಾಪಸ್‌ ಹೋಗುತ್ತಿದ್ದರು. ಸಂಜೆ ಬಸ್‌ ರಾಯಚೂರಿನ ಎಸ್‌.ಪಿ. ಕಚೇರಿ ಮುಂದೆ ಬಂದಾಗ ಚಾಲಕ, ಅತಿವೇಗ ಮತ್ತು ಅಜಾಗರೂಕತೆಯಿಂದ ಎಡಭಾಗದಿಂದ ಬಲಭಾಗಕ್ಕೆ ತಿರುಗಿಸಿದ್ದ. ಇದರಿಂದ ಬಸ್‌ನಲ್ಲಿ ಕೂತಿದ್ದ ಜಯಲಕ್ಷ್ಮೀ ಬಾಗಿಲು ಮೂಲಕ ಕೆಳಗೆ ಬಿದ್ದು ಮೃತಪಟ್ಟಿದ್ದರು.

ನಂತರ ಮೃತಳ ಪುತ್ರ ಮಲ್ಲೇಶ ಮತ್ತು ಪುತ್ರಿ ಭಾರ್ಗವಿ, ವಾರ್ಷಿಕ ಶೇ.8ರಷ್ಟು ಬಡ್ಡಿದರಲ್ಲಿ 29.50 ಲಕ್ಷ ರು. ಪರಿಹಾರ ಘೋಷಿಸಲು ಕೋರಿ ಸ್ಥಳೀಯ ಮೋಟಾರು ವಾಹನ ಅಪಘಾತ ಕ್ಲೇಮು ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಚಾಲಕನ ಅತಿವೇಗ ಹಾಗೂ ಅಜಾಗರೂಕತೆ ಚಾಲನೆಯಿಂದ ಅಪಘಾತ ಸಂಭವಿಸಿದೆ. ಆದ್ದರಿಂದ ಚಾಲಕ ಮತ್ತು ಎನ್‌ಇಕೆಆರ್‌ಟಿಸಿ ಕ್ಲೇಮುದಾರರಿಗೆ ವಾರ್ಷಿಕ ಶೇ.8ರಷ್ಟು ಬಡ್ಡಿದರದಲ್ಲಿ 15,93,300 ರು. ಪರಿಹಾರ ಪಾವತಿಸಬೇಕು ಎಂದು ನ್ಯಾಯಾಧೀಕರಣ ಆದೇಶಿಸಿತ್ತು. ಪರಿಹಾರ ಪಾವತಿಯ ಹೊಣೆ ತನ್ನ ಮೇಲೆ ಹೊರಿಸಿದ ಮತ್ತು ಹೆಚ್ಚು ಪರಿಹಾರ ನಿಗದಿಪಡಿಸಲಾಗಿದೆ ಎಂದು ಆಕ್ಷೇಪಿಸಿ ಎನ್‌ಇಕೆಆರ್‌ಟಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.