ಕೆಪಿಎಸ್ಸಿ ಸಂಘರ್ಷ: 6 ತಿಂಗಳಲ್ಲೇ ಕಾರ್ಯದರ್ಶಿ ಲತಾಕುಮಾರಿ ಎತ್ತಂಗಡಿ
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯದರ್ಶಿ ನಡುವಿನ ಘರ್ಷಣೆಯಲ್ಲಿ ಕಾರ್ಯದರ್ಶಿ ಕೆ.ಎಸ್.ಲತಾಕುಮಾರಿ ಅವರನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯ ನಿರ್ವಾಹಕ ನಿರ್ದೇಶಕರ ಸ್ಥಾನಕ್ಕೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು (ಮಾ.06): ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯದರ್ಶಿ ನಡುವಿನ ಘರ್ಷಣೆಯಲ್ಲಿ ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ ಅವರನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯ ನಿರ್ವಾಹಕ ನಿರ್ದೇಶಕರ ಸ್ಥಾನಕ್ಕೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಲತಾಕುಮಾರಿ ಅವರು ಹಲವು ದಿನಗಳಿಂದ ರಜೆಯಲ್ಲಿದ್ದ ಹಿನ್ನೆಲೆಯಲ್ಲಿ ಕಾರ್ಯದರ್ಶಿ ಸ್ಥಾನಕ್ಕೆ ಪ್ರಬಾರಿಯಾಗಿ ನೇಮಕಗೊಂಡಿದ್ದ ಕೆ. ರಾಕೇಶ್ಕುಮಾರ್ ಅವರನ್ನು ಈಗ ಅದೇ ಸ್ಥಾನದಲ್ಲಿ ಮುಂದುವರೆಸಲಾಗಿದೆ.
ಕೆಪಿಎಸ್ಸಿಗೆ ಬಂದ ಆರು ತಿಂಗಳಲ್ಲೇ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ, ‘ಅಡುಗೆ ಮನೆಯಿಂದ ಕೆಪಿಎಸ್ಸಿವರೆಗಿನ ಪಯಣವು ಸವಾಲಿನದ್ದಾಗಿತ್ತು. ಸಿಕ್ಕ ಅವಕಾಶದಲ್ಲಿ ವ್ಯವಸ್ಥೆಯನ್ನು ಸರಿಪಡಿಸಲು ಪ್ರಯತ್ನಿಸಿದ್ದೇನೆ. ಈ ಅವಧಿಯಲ್ಲಿ ಎದುರಾದ ಎಲ್ಲರಿಗೂ ಧನ್ಯವಾದಗಳು’ ಎಂದು ಟ್ವಿಟ್ ಮಾಡಿದ್ದಾರೆ.
ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್: ಹೊರರಾಜ್ಯದಲ್ಲಿ ಎನ್ಐಎ ಶೋಧ
ಸರ್ಕಾರಿ ಸೇವೆಯಲ್ಲಿ ವರ್ಗಾವಣೆಗಳು ಅನಿವಾರ್ಯ. ಆರು ತಿಂಗಳ ನನ್ನ ಅವಧಿಯಲ್ಲಿ ಸುಧಾರಣೆ, ಬದಲಾವಣೆ ತರಲು ಪ್ರಯತ್ನಿಸಿದ್ದೇನೆ. ಕೆಲಸದ ಬಗ್ಗೆ ಸಂಪೂರ್ಣ ಅಲ್ಲದಿದ್ದರೂ, ತೃಪ್ತಿ ಅಂತು ಇದೆ. ಅನೇಕ ವರ್ಷಗಳಿಂದ ಅನಗತ್ಯವಾಗಿ ಬಾಕಿ ಉಳಿದಿದ್ದ ಕೆಲಸಗಳನ್ನು ಪೂರ್ಣಗೊಳಿಸುವುದು, ವಿಳಂಬ ನೀತಿ ತಪ್ಪಿಸುವುದು, ಕಾಲಮಿತಿಯಲ್ಲಿ ಪರೀಕ್ಷೆ, ಫಲಿತಾಂಶ ಮತ್ತು ಆಯ್ಕೆಪಟ್ಟಿ ಪ್ರಕಟಣೆಯಂತಹ ಕೆಲಸಗಳನ್ನು ಮಾಡಿದ್ದೇನೆ. ಒಳ್ಳೆಯ ಉದ್ದೇಶಕ್ಕೆ ಸಂಘರ್ಷ ಆಗಿರಬಹುದು. ಬೇಸರ ಇಲ್ಲ. ಎಂದು ಲತಾಕುಮಾರಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಲತಾಕುಮಾರಿ ಅವರ ಅವಧಿಯಲ್ಲಿ 8 ಪರೀಕ್ಷೆಗಳು ಸುಸೂತ್ರವಾಗಿ ನಡೆದಿದ್ದು, ಹೆಚ್ಚುವರಿ ಆಯ್ಕೆ ಪಟ್ಟಿ, ಅಂತಿಮ ಆಯ್ಕೆ ಪಟ್ಟಿ ಸೇರಿದಂತೆ ಸುಮಾರು 70- 80 ಪಟ್ಟಿಗಳು ಬಿಡುಗಡೆಯಾಗಿವೆ. ವಾಣಿಜ್ಯ ತೆರಿಗೆ ನಿರೀಕ್ಷಕರ ಹುದ್ದೆಗಳ ನೇಮಕ ಪ್ರಕ್ರಿಯೆಯು ಅಧಿಸೂಚನೆ ಹೊರಡಿಸಿದ ಆರು ತಿಂಗಳಲ್ಲಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.
ದಲಿತರ ಬಳಿ ಮತ ಇದೆ, ಆದರೆ ಸಿಎಂ ಭಾಗ್ಯ ಇಲ್ಲ: ಸಚಿವ ಮಹದೇವಪ್ಪ ಬೇಸರ
ವರ್ಗಾವಣೆಗೆ ಸಂಘರ್ಷವೇ ಕಾರಣ: ಅಧ್ಯಕ್ಷರು, ಸದಸ್ಯರೊಂದಿಗಿನ ಸಂಘರ್ಷವೇ ಕಾರ್ಯದರ್ಶಿ ಲತಾಕುಮಾರಿ ಅವರ ವರ್ಗಾವಣೆಗೆ ಕಾರಣ ಎನ್ನಲಾಗಿದೆ. ಕೆಪಿಎಸ್ಸಿಗೆ ಕಾನೂನು ಸಲಹೆಗಾರರ ನೇಮಕಾತಿ, ಆಯ್ಕೆ ಪಟ್ಟಿಗಳ ಬಿಡುಗಡೆ ಮತ್ತಿತರ ವಿಚಾರಗಳಲ್ಲಿ ಅಧ್ಯಕ್ಷರ ವಿರುದ್ಧ ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು. ಆದರೆ, ನಿಯಮಗಳ ಪ್ರಕಾರ ಕಾರ್ಯದರ್ಶಿಯವರು ನೇರವಾಗಿ ರಾಜ್ಯಪಾಲರಿಗೆ ಪತ್ರ ಬರೆಯುವಂತಿಲ್ಲ. ಅದರ ಜೊತೆಗೆ ಕಳೆದ ಕೆಲವು ತಿಂಗಳುಗಳಿಂದ ಘರ್ಷಣೆಗಳು ನಡೆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ ಎಂದು ತಿಳಿದು ಬಂದಿದೆ.