Asianet Suvarna News Asianet Suvarna News

'ಗುಂಪುಗಾರಿಕೆ, ಒಳಜಗಳ ನಿಲ್ಲದಿದ್ರೆ ರಾಜ್ಯ ಕಾಂಗ್ರೆಸ್‌ ಚೇತರಿಕೆ ಅಸಾಧ್ಯ'

ಗುಂಪುಗಾರಿಕೆ, ಒಳಜಗಳ ನಿಲ್ಲದಿದ್ರೆ ರಾಜ್ಯ ಕಾಂಗ್ರೆಸ್‌ ಚೇತರಿಕೆ ಅಸಾಧ್ಯ| ಸೋನಿಯಾಗೆ ನೇರವಾಗಿ ಹೇಳಿದ ಸಿದ್ದರಾಮಯ್ಯ| ‘ನನ್ನನ್ನು ಇನ್ನೂ ವಲಸಿಗ ಎಂದೇ ಬಿಂಬಿಸುತ್ತಿದ್ದಾರೆ’

KPCC Recovery Is Not Possible Until The Internal Fight And Groupism Stops Says Siddaramaiah To Sonia Gandhi
Author
Bangalore, First Published Jan 15, 2020, 8:56 AM IST

ಬೆಂಗಳೂರು[ಜ.15]: ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯ ಹಾಗೂ ಗುಂಪುಗಾರಿಕೆಗೆ ಅಂತ್ಯ ಹಾಡದಿದ್ದರೆ ಯಾರಿಗೆ ನಾಯಕತ್ವ ನೀಡಿದರೂ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಚೇತರಿಕೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇರವಾಗಿ ಸೋನಿಯಾ ಗಾಂಧಿ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಸುಮಾರು 30 ನಿಮಿಷ ಮಾತನಾಡಿದ ಸಿದ್ದರಾಮಯ್ಯ ಅವರು, ತಮ್ಮನ್ನು ಇನ್ನೂ ವಲಸಿಗ ಎಂದೇ ಪಕ್ಷದ ಕೆಲ ನಾಯಕರು ಬಿಂಬಿಸಲು ಯತ್ನಿಸುತ್ತಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಇನ್ನೂ ಮೂಲ ಹಾಗೂ ವಲಸಿದ ಕಾಂಗ್ರೆಸ್ಸಿಗ ಎಂಬ ಭಾವನೆ ಬೆಳೆಸಲು ಕೆಲ ನಾಯಕರು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಪಕ್ಷದ ಎರಡನೇ ಹಂತದ ನಾಯಕರು ಒಗ್ಗೂಡಲು ಈ ನಾಯಕರು ಬಿಡುತ್ತಿಲ್ಲ. ಉಪ ಚುನಾವಣೆ ವೇಳೆ ಉದ್ದೇಶಪೂರ್ವಕ ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷಕ್ಕೆ ಹಾನಿಯುಂಟಾಗುವಂತೆ ನಡೆದುಕೊಳ್ಳುತ್ತಾರೆ. ಇಂತಹ ಧೋರಣೆಗೆ ಕಡಿವಾಣ ಹಾಕದಿದ್ದರೆ ಹಾಗೂ ರಾಜ್ಯದ ಎಲ್ಲರೂ ಒಗ್ಗೂಡುವಂತೆ ಮಾಡಲು ಹೈಕಮಾಂಡ್‌ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಲ್ಲಿ ಪಕ್ಷ ಬಲಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು ಎನ್ನಲಾಗಿದೆ.

KPCCಗೆ ಡಿಕೆಶಿ ನೇಮಕ : ಸೋನಿಯಾ v/s ರಾಹುಲ್‌ ಬಣ!

ಅಲ್ಲದೆ, ಉಪ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣಗಳನ್ನು ವಿವರವಾಗಿ ತಿಳಿಸಿದ್ದು, ಅನರ್ಹರನ್ನು ಸಚಿವರನ್ನಾಗಿ ಮಾಡುವ ಪ್ರಲೋಭನೆಯನ್ನು ಬಿಜೆಪಿ ನೀಡಿದ್ದರಿಂದ ಜನರು ಆ ಪಕ್ಷವನ್ನು ಬೆಂಬಲಿಸಿದ್ದಾರೆ. ಆದರೆ, ಈ ಪರಿಸ್ಥಿತಿ ಭವಿಷ್ಯದಲ್ಲೂ ಇರುವುದಿಲ್ಲ. ಬಿಜೆಪಿಯಲ್ಲಿ ಆಂತರಿಕವಾಗಿ ವ್ಯಾಪಕ ಸಮಸ್ಯೆಯಿದೆ. ಇದನ್ನು ಬಳಸಿಕೊಂಡರೆ ಕಾಂಗ್ರೆಸ್‌ಗೆ ಉತ್ತಮ ಅವಕಾಶವಿದೆ. ಆದರೆ, ಕೆಲ ನಾಯಕರು ಮೂಲ ಹಾಗೂ ವಲಸಿಗ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದಕ್ಕೆ ಕಡಿವಾಣ ಬೀಳದಿದ್ದರೆ ಈ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು ಎನ್ನಲಾಗಿದೆ.

Follow Us:
Download App:
  • android
  • ios