ಮಗಳ ನಿಶ್ಚಿತಾರ್ಥ ದಿನವೇ ಸಿಬಿಐ ನೋಟಿಸ್ ನೀಡಿರುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ....

ಕಲಬುರಗಿ, (ನ.24): ನನ್ನ ಮಗಳ ನಿಶ್ಚಿತಾರ್ಥದ ದಿನವೇ ಸಿಬಿಐ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ರಾಜ್ಯದಲ್ಲಿ ದ್ವೇಷದ ರಾಜಕಾರಣ ಉಕ್ಕಿ ಹರಿಯುತ್ತಿದೆ. ನನಗೆ ತೊಂದರೆ ಕೊಟ್ಟವರು ಯಾವಾಗಲೂ ಖುಷಿಯಾಗಿರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ‌ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಇಂದು (ಮಂಗಳವಾರ) ಕಲಬುರಗಿಯಲ್ಲಿ ಮಾತನಾಡಿದ ಅವರು, ಯಾರ ಮೇಲೂ ಮಾಡದೆ ನನ್ನೊಬ್ಬನನ್ನು ಯಾಕೆ ಟಾರ್ಗೆಟ್ ಮಾಡ್ತಿದಾರೆ. ನನ್ನ ಮಗಳ ನಿಶ್ಚಿತಾರ್ಥದ ದಿನವೇ ನೋಟೀಸ್ ಕೊಡ್ತಾರೆ ಅಂದ್ರೆ ಅವರ ದ್ವೇಷ ಎಷ್ಟರಮಟ್ಟಿಗಿದೆ ಅನ್ನೋದು ಅರ್ಥವಾಗುತ್ತೆ ಎಂದು ಸಿಬಿಐ ದಾಳಿ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಪುತ್ರಿಯ ಎಂಗೇಜ್ಮೆಂಟ್ ಮಾಡಿ ಖುಷಿಯಲ್ಲಿದ್ದ ಡಿಕೆ ಶಿವಕುಮಾರ್‌ಗೆ ಬಿಗ್ ಶಾಕ್

ನನ್ನ ಮಗಳ ನಿಶ್ಚಿತಾರ್ಥದ ದಿನವೇ ನನಗೆ ಸಿಬಿಐ ನೋಟೀಸ್ ನೀಡಿದ್ದಾರೆ. ಇಡೀ ರಾಜ್ಯದಲ್ಲಿ ಯಾವ ಶಾಸಕರಿಗೂ ನೋಟಿಸ್ ನೀಡಿಲ್ಲ. ಆದ್ರೆ ನನಗೆ ಮಾತ್ರ ನೀಡಿದ್ದಾರೆ. ಬಿಜೆಪಿಯಿಂದ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ದ್ವೇಷದ ರಾಜಕಾರಣ ವ್ಯಾಪಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾರ ಮೇಲೂ ಮಾಡದೆ ನನ್ನೊಬ್ಬನಿಗೆ ಯಾಕೆ ಮಾಡ್ತಿದಾರೆ. ನನಗೆ ತೊಂದರೆ ಕೊಟ್ಟರೆ ಅವರಿಗೆ ಖುಷಿಯಾಗುತ್ತದೆ ಎಂದಾದರೆ ಖುಷಿಯಾಗಲಿ. ಅವರಾದ್ರೂ ಖುಷಿಯಾಗಿರಲಿ. ನನ್ನ ವಿರುದ್ಧ ಎಫ್.ಐ.ಆರ್. ಹಾಕೋ ಜೊತೆಗೆ ನೋಟೀಸ್ ಸಹ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಆರೋಪಿಸಿದರು.

ರಾಜಕೀಯ ಕುಮ್ಮಕ್ಕು ಇಲ್ಲದಿದ್ದಲ್ಲಿ ಸಿಬಿಐ ಅಧಿಕಾರಿಗಳು ಈ ರೀತಿ ವರ್ತಿಸುತ್ತಿರಲಿಲ್ಲ. ಅವರು ಏನು ಬೇಕಾದ್ರೂ ಮಾಡಿಕೊಳ್ಳಲಿ. ಆದ್ರೆ ಸಿಬಿಐ ಅಧಿಕಾರಿಗಳು ನ್ಯಾಯ ಸಮ್ಮತ ತನಿಖೆ ನಡೆಸಲಿ. ನಾನು ಕಾನೂನಿಗೆ ಗೌರವ ಕೊಡುತ್ತೇನೆ ಸಿಬಿಐ ಕಛೇರಿಗೆ ವಿಚಾರಣೆಗೆ ಹಾಜರಾಗುತ್ತೇನೆ. ಯಾರೂ ಸಹ ಗಾಬರಿಪಟ್ಟುಕೊಳ್ಳಬೇಡಿ, ಸಿಬಿಐ ಕಛೇರಿ ಕಡೆ ಬರಬೇಡಿ. ನನ್ನ ಪರವಾದ ಹೇಳಿಕೆಗಳನ್ನೂ ನೀಡಬೇಡಿ ಎಂದು ಕಾಂಗ್ರೆಸ್ ಮುಖಂಡರಿಗೆ ಡಿಕೆಶಿ ಮನವಿ ಮಾಡಿದರು.