ಅಂಜನಾದ್ರಿಯ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕ ವಿದ್ಯಾದಾಸ್‌ ಬಾಬಾ ಅವರಿಗೆ ಗುರು ಪರಂಪರೆಯೇ ಇಲ್ಲ ಎಂದು ಪಂಪಾಸರೋವರದ ಜಯಲಕ್ಷ್ಮಿದೇವಿ ದೇವಸ್ಥಾನದ ಅರ್ಚಕ ಆನಂದದಾಸ ಆರೋಪಿಸಿದ್ದಾರೆ.

ಗಂಗಾವತಿ (ಜೂ.9): ಅಂಜನಾದ್ರಿಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಅರ್ಚಕ ವಿದ್ಯಾದಾಸ್‌ ಬಾಬಾ ಅವರಿಗೆ ಗುರು ಪರಂಪರೆಯೇ ಇಲ್ಲ. ಇಲ್ಲಸಲ್ಲದ ಕ್ಯಾತೆ ತೆಗೆದು, ಕೋರ್ಟ್ ಮೊರೆ ಹೋಗಿ ಆರ್ಚಕರಾಗಿ ಮುಂದುವರಿಯಲು ಆದೇಶ ತಂದಿದ್ದಾರೆ ಎಂದು ಪಂಪಾಸರೋವರದ ಜಯಲಕ್ಷ್ಮಿದೇವಿ ದೇವಸ್ಥಾನದ ಅರ್ಚಕ ಆನಂದದಾಸ ಆರೋಪಿಸಿದ್ದಾರೆ.

Add Asianetnews Kannada as a Preferred SourcegooglePreferred

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಜನಾದ್ರಿಗೂ ವಿದ್ಯಾದಾಸ್‌ ಬಾಬಾಗೂ ಯಾವ ಸಂಬಂಧವು ಇಲ್ಲ. ಮೊದಲಿಗೆ ನರಸಿಂಗ ದೇವರಾಯ ಮತ್ತು ಗುರುಪರಂಪರೆ ಟ್ರಸ್ಟ್ ನಡುವೆ ಜಗಳವಿತ್ತು. ನರಸಿಂಗ ದೇವರಾಯ ಟ್ರಸ್ಟ್ ಜತೆ ವಿದ್ಯಾದಾಸ್‌ ಬಾಬ್‌ ಗುರುತಿಸಿಕೊಂಡಿದ್ದರು. ಬಳಿಕ ಅವರೊಂದಿಗೆ ಜಗಳ ಮಾಡಿಕೊಂಡಿದ್ದರು. ನಂತರ ಗುರುಪಂಪರೆಯಿಂದ ಬಂದಿದ್ದೇನೆ, ಮಹಾಂತನೆಂದು ಇದೀಗ ಅರ್ಚಕ ಸ್ಥಾನ ಪಡೆಯಲು ಕೋರ್ಟ್ ಮೊರೆ ಹೋಗಿದ್ದಾರೆ ಎಂದರು.

ಅಂಜನಾದ್ರಿ ಬೆಟ್ಟದಲ್ಲಿ ಮೊದಲಿಗೆ ಲಕ್ಕಡ್ ಬಾಬಾ ಅರ್ಚಕರಾಗಿದ್ದರು. 1998ರಲ್ಲಿ ಅವರ ನಿಧನದ ನಂತರ ಭಗವದಾಸ್‌ ಬಾಬಾ, ತುಳಸಿದಾಸ ಬಾಬಾ, ಪಂಕಜ್ ದಾಸ್‌ ಅವರು ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ. ಎಲ್ಲಿಂದಲೋ ಪಂಪಾಸರೋವರಕ್ಕೆ ಬಂದ ವಿದ್ಯಾದಾಸ್‌ ಬಾಬಾ, ಅಂಜನಾದ್ರಿಯಲ್ಲಿ ಪೂಜೆ ಸಲ್ಲಿಸಲು ಕೇಳಿ ನೆಲೆಯೂರಿದ್ದಾರೆ ಎಂದು ದೂರಿದ್ದಾರೆ.ವಿದ್ಯಾದಾಸ ಬಾಬಾ ಅವರು ಗುರುಪರಂಪರೆಯಿಂದ ಬಂದಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ಯಾವ ಗುರುಪರಂಪರೆಯೂ ಇಲ್ಲ. ಇಂತಹವರು ಅಂಜನಾದ್ರಿಯಲ್ಲಿ ಪೂಜೆ ಸಲ್ಲಿಸಿದರೆ, ನಮ್ಮ ವಿರೋಧವಿದೆ. ಮೂಲ ಮತ್ತು ಗುರುಪರಂಪರೆ ಹೊಂದಿರುವ ಅರ್ಚಕರಿಗೆಯೇ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಅಂಜನಾದ್ರಿ ದೇವಸ್ಥಾನದ ಹಳೆಯ ಅರ್ಚಕ ಪಂಕಜದಾಸ ಮಾತನಾಡಿ, ಅಂಜನಾದ್ರಿ ಬೆಟ್ಟದಲ್ಲಿ ಈ ಹಿಂದೆ ಗುರು ಪರಂಪರೆಯ ಅರ್ಚಕ ತುಳಸಿಬಾಬಾ ಅವರು ಶಸ್ತ್ರಚಿಕಿತ್ಸೆಗೆ ಒಳಪಟ್ಟು ಮನೆಯಲ್ಲಿ ವಿಶ್ರಾಂತಿ ಪಡೆಯುವಾಗ ನಾನು ಅರ್ಚಕನಾಗಿ ಸೇವೆ ಸಲ್ಲಿಸುತ್ತಿದ್ದೆ. ಕೆಲವರು ಕುತಂತ್ರ ನಡೆಸಿ, ನನ್ನನ್ನು 2008ರಲ್ಲಿ ಅರ್ಚಕ ಸ್ಥಾನದಿಂದ ಬಿಡಿಸಿದರು. ಆದರೀಗ ಅಂಜನಾದ್ರಿಯಲ್ಲಿ ಏನೇನೊ ನಡೆಯುತ್ತಿದೆ. ಅಂಜನಾದ್ರಿ ಬೆಟ್ಟದಲ್ಲಿ ಪೂಜೆ ಮಾಡುವ ಅವಕಾಶ ಗುರು ಪರಂಪರೆಯವರಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.