ಯಡಿಯೂರಪ್ಪನವರ ಈ ಒಂದು ಮಾತಿಗೆ ಚಂದ್ರಶೇಖರ್ ಕೆಂಡಾಮಂಡಲ
ಧರಣಿ ನಿರತ ಸಾರಿಗೆ ನೌಕರರಿಗೆ ವೇತನ ನೀಡುವುದಿಲ್ಲ ಎನ್ನುವ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, (ಏ.13): 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ನೌಕರರು ತಿಂಗಳುಗಳ ಕಾಲ ಸತ್ಯಾಗ್ರಹ ಮಾಡಿದರೂ ನಾವು ಬಗ್ಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಿರುವುದು ದೌರ್ಜನ್ಯದ ಪರಮಾವಧಿ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.
ಇಂದು (ಮಂಗಳವಾರ) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರಿಗೆ ಯುಗಾದಿ ಹಬ್ಬದ ಸಂಭ್ರಮ ಇಲ್ಲದಂತಾಗಿದೆ. ಸರ್ಕಾರ ನೌಕರರಿಗೆ ವೇತನ ನೀಡದೇ ಸತಾಯಿಸುತ್ತಿದೆ. ವೇತನ ನೀಡುವುದೇ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿರುವುದು ಸರಿಯಲ್ಲ ಕಿಡಿಕಾರಿದರು.
ಮುಷ್ಕರ: ಸಾರಿಗೆ ನೌಕರರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಖಡಕ್ ಮಾತು
ಮಾರ್ಚ್ ತಿಂಗಳ ವೇತನ ನೀಡಿಲ್ಲ ಎಂದು ಡಿಪೋ ಮ್ಯಾನೇಜರ್ ವಿರುದ್ಧ ಪೊಲೀಸ್ ಠಾಣೆಗಳಿಗೆ ದೂರು ನೀಡಲಾಗುತ್ತದೆ. ಸಾರಿಗೆ ನೌಕರ ತಿಪ್ಪೇಸ್ವಾಮಿ ಮೊದಲ ದೂರನ್ನ ನೀಡಲಿದ್ದಾರೆ. ಅದೇ ರೀತಿ ರಾಜ್ಯದೆಲ್ಲೆಡೆ ದೂರು ನೀಡಲಾಗುತ್ತದೆ ಎಂದ ಹೇಳಿದರು.
ಸಾರಿಗೆ ಬಸ್ಗಳನ್ನ ಬಲವಂತದಿಂದ ಓಡಿಸಲಾಗುತ್ತಿದೆ. ಖಾಸಗಿ ವಾಹನ, ಚಾಲಕರ ಮೂಲಕ ಬಸ್ ಓಡಿಸುವುದು ಸಕ್ಸಸ್ ಆಗುವುದಿಲ್ಲ. ಈ ರೀತಿ ಎಷ್ಟೇ ಪ್ರಯತ್ನ ಮಾಡಿದ್ರೂ ಅದು ಸಫಲವಾಗುವುದಿಲ್ಲ. ದಂಡಿಸುವ ದಿಕ್ಕಿನಡಿ ಸರ್ಕಾರ ಮುಂದಾಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು,
ಸಿಎಂ ಇನ್ನೊಮ್ಮೆ ಈ ಬಗ್ಗೆ ಪರಿಶೀಲಿಸಲಿ. 6ನೇ ವೇತನ ನಮ್ಮ ಬೇಡಿಕೆಯೇ ಆಗಿದ್ದಲ್ಲ, ಸರ್ಕಾರ ನೀಡಿದ ವಾಗ್ಧಾನವಿದು. ಆಗ ವಾಗ್ಧಾನ ನೀಡಿ ಈಗ ಮೊಂಡುವಾದ ಮಾಡೋದು ಸರಿಯಲ್ಲ. ನ್ಯಾಯವಾದ ದಾರಿಯಲ್ಲಿ ಬರಬೇಕು ಎಂದರು.