ದಸರಾ ಸಂದರ್ಭದಲ್ಲಿ ರಾಜ್ಯದ ಹಾಲು ಉತ್ಪಾದನಾ ಮಂಡಳಿ ಕೆಎಂಎಫ್ ದಾಖಲೆ ಬರೆದಿದೆ. 

ಗೋಕಾಕ (ಅ.28): ನವರಾತ್ರಿ ಆಚರಣೆ ಸಂದರ್ಭದಲ್ಲಿ 120 ಮೆಟ್ರಿಕ್‌ ಟನ್‌ ಸಿಹಿ ಉತ್ಪನ್ನ ಮಾರಾಟ ಮಾಡುವ ಮೂಲಕ ಕೆಎಂಎಫ್‌ ಹೊಸ ದಾಖಲೆ ಸೃಷ್ಟಿಮಾಡಿದೆ ಎಂದು ಕೆಎಂಎಫ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಬೆಳಗಾವಿ ಜಿಲ್ಲೆಯ ನಗರದ ಗೋಕಾಕ ಫಾಲ್ಸ್‌ ರಸ್ತೆಯ ಜೆಎಸ್‌ಎಸ್‌ ಕಾಲೇಜ್‌ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಿಸಲಾದ ನಂದಿನಿ ಎಕ್ಸ್‌ಕ್ಲೂಸಿವ್‌ ಪಾರ್ಲರ್‌ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ನವರಾತ್ರಿಯ ಒಂಬತ್ತು ದಿನಗಳ ಅವಧಿಯಲ್ಲಿ ಸಿಹಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಿ ನಮ್ಮ ಸಂಸ್ಥೆಯ ಮಾರಾಟ ಪ್ರಮಾಣವು ಇದುವರೆಗಿದ್ದ ಎಲ್ಲ ದಾಖಲೆಗಳನ್ನು ಅಳಿಸಿ ಮಾರಾಟ ಪ್ರಮಾಣದಲ್ಲಿ ಹೊಸ ದಾಖಲೆ ಬರೆದಿದೆ ಎಂದರು.

ಹಾಲು ರೈತಗೆ ಕೆಎಂಎಫ್‌ 530 ಕೋಟಿ ರೂ. ಪ್ರೋತ್ಸಾಹ ಧನ! ...

ಇದೇವೇಳೆ ಕೆಎಂಎಫ್‌ನಿಂದ ಬಿಹಾರ ಫೆಡರೇಷನ್‌ಗೆ 1500 ಮೆ.ಟನ್‌ ಕೆನೆಭರಿತ ಹಾಲಿನ ಪುಡಿ, 650 ಮೆ.ಟನ್‌ ಕೆನೆ ರಹಿತ ಹಾಲಿನ ಪುಡಿ ಮತ್ತು 800 ಮೆ.ಟನ್‌ ಬೆಣ್ಣೆ ಮಾರಲು ಆದೇಶ ನೀಡಲಾಗಿದೆ. ಪ್ರಸ್ತುತ ಬೆಣ್ಣೆ 12.6 ಮೆ.ಟನ್‌ ದಾಸ್ತಾನು ಇದ್ದು, ಪ್ರಸ್ತುತ ಕೆನೆರಹಿತ ಹಾಲಿನ ಪುಡಿ 27.5 ಮೆ.ಟನ್‌ ದಾಸ್ತಾನು ಇರುತ್ತದೆ. ಕೆಎಂಎಫ್‌ನ ಒಟ್ಟಾರೆ ಹಾಲಿನ ಶೇಖರಣೆ ಪ್ರತಿದಿನ 80 ಲಕ್ಷ ಲೀಟರ್‌ ಇದೆ ಎಂದರು.

ಹಾಲಿನ ಮತ್ತು ಮೊಸರು, ಗುಡ್‌ಲೈಫ್‌ ಮತ್ತು ಫ್ಲೆಕ್ಸಿ ಹಾಲಿನ ಮಾರಾಟ ಒಟ್ಟಾರೆ ದಿನಂಪ್ರತಿ 45.80 ಲಕ್ಷ ಲೀಟರ್‌ಗಳಾಗಿದ್ದು, ಇತರೇ ಹೊರ ರಾಜ್ಯದ ಸಹಕಾರಿ ಡೇರಿಗಳಿಗೆ ಸಗಟು ಹಾಲಿನ ಮಾರಾಟ ದಿನಂಪ್ರತಿ 3.52 ಲಕ್ಷ ಲೀಟರ್‌ ಇದೆ. ರಾಜ್ಯಾದ್ಯಂತ ಪ್ರಸ್ತುತ 1462 ನಂದಿನಿ ಪಾರ್ಲರ್‌ ಮತ್ತು 220ಕ್ಕೂ ಅಧಿಕ ನಂದಿನಿ ಶಾಪ್‌ಗಳಿವೆ ಎಂದರು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಓಬೇದುಲ್ಲಾಖಾನ್‌, ಮಾರುಕಟ್ಟೆಉಪವ್ಯವಸ್ಥಾಪಕ ಜಯಾನಂದ ಶಂಕಿನಮಠ, ತಾಂತ್ರಿಕ ವಿಭಾಗದ ಉಪವ್ಯವಸ್ಥಾಪಕ ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಹಲವರು ಇದ್ದರು.

ಪ್ರತಿ ತಾಲೂಕಿಗೊಂದು ನಂದಿನಿ ಶೇಖರಣಾ ಕೇಂದ್ರ

ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ಒದಗಿಸುವ ಸಲುವಾಗಿ ಪ್ರತಿ ತಾಲೂಕು ಕೇಂದ್ರದಲ್ಲಿ ನಂದಿನಿ ಎಕ್ಸ್‌$ಕ್ಲೂಸಿವ್‌ ಪಾರ್ಲರ್‌(ಶೇಖರಣಾ ಕೇಂದ್ರ) ಅನ್ನು ಆರಂಭಿಸಲಾಗುವುದು ಎಂದು ಕೆಎಂಎಫ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಗೋಕಾಕದಲ್ಲಿ ಆರಂಭಿಸಲಾಗಿರುವ ನಂದಿನಿ ಶೇಖರಣಾ ಕೇಂದ್ರದಲ್ಲಿ ನಂದಿನಿಯ ಎಲ್ಲ ಬಗೆಯ ಉತ್ಪನ್ನಗಳು ಗ್ರಾಹಕರಿಗೆ ಎಂಆರ್‌ಪಿ ಬೆಲೆಯಲ್ಲಿ ಲಭ್ಯ ಇವೆ. ಬೆಳಗಾವಿ ಜಿಲ್ಲೆಯಲ್ಲಿ ರಾಮದುರ್ಗ, ಬೈಲಹೊಂಗಲ, ರಾಯಬಾಗ, ಖಾನಾಪುರ ಮತ್ತು ಗೋಕಾಕದಲ್ಲಿ ಪಾರ್ಲರ್‌ ತೆರೆಯಲಾಗಿದೆ ಎಂದರು. ಪ್ರತಿ ತಾಲೂಕು ಕೇಂದ್ರಗಳಲ್ಲಿ ಇಂತಹ ಶೇಖರಣಾ ಕೇಂದ್ರಗಳನ್ನು ಆರಂಭಿಸುವ ಮೂಲಕ ಪ್ರತಿ ಹಳ್ಳಿ-ಹಳ್ಳಿಗಳಿಗೆ ನಂದಿನಿ ಎಲ್ಲ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ಗ್ರಾಹಕರ ಮತ್ತು ರೈತರ ಸಹಕಾರವೇ ನಮ್ಮ ಸಂಸ್ಥೆಗೆ ದೊಡ್ಡ ಶಕ್ತಿ ಎಂದರು.

ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಕೆಎಂಎಫ್‌ ರೈತರ ಹಾಗೂ ಗ್ರಾಹಕರ ಅಭ್ಯುದಯಕ್ಕಾಗಿ ನಿರಂತರ ಸೇವೆ ಮಾಡಿದೆ. ಸಂಕಷ್ಟದ ಕಾಲದಲ್ಲೂ ಕೆಎಂಎಫ್‌ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಟ್ಟು . 8 ಕೋಟಿ ದೇಣಿಗೆ ನೀಡಿದೆ ಎಂದು ಹೇಳಿದರು.