ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ ತೊರೆಕಾಡನಹಳ್ಳಿ ಬಳಿ ಪೈಪ್‌ಲೈನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ದುರಸ್ತಿ ಕಾರ್ಯ ಆರಂಭವಾಗಿದ್ದು, ಮಧ್ಯಾಹ್ನದೊಳಗೆ ಸರಬರಾಜು ಪುನಃಸ್ಥಾಪನೆಯಾಗುವ ನಿರೀಕ್ಷೆಯಿದೆ.

ಬೆಂಗಳೂರು (ಮೇ 28): ಬೆಂಗಳೂರಿಗೆ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ತೊರೆಕಾಡನಹಳ್ಳಿ (ಟಿಕೆ ಹಳ್)ಳಿ ಬಳಿ ನಂಜಾಪುರ ಗ್ರಾಮ ಪ್ರದೇಶದಲ್ಲಿರುವ ಕಾವೇರಿ ಹಂತ 5ರ ಪ್ರಮುಖ ಪೈಪ್‌ಲೈನ್‌ನ ಸ್ಕೌರ್ ವಾಲ್ವ್‌ನಲ್ಲಿ ಇಂದು ಬೆಳಿಗ್ಗೆ ತಾಂತ್ರಿಕ ದೋಷ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ, ಬೆಂಗಳೂರು ನಗರಾದ್ಯಂತ ಕಾವೇರಿ ಕುಡಿಯುವ ನೀರಿನ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ತಿಳಿಸಿದೆ.

Add Asianetnews Kannada as a Preferred SourcegooglePreferred

ಬೆಂಗಳೂರು ಜಲಮಂಡಳಿ ಪ್ರಕಟಣೆಯ ಪ್ರಕಾರ, ತಕ್ಷಣ ತಾಂತ್ರಿಕ ತಂಡ ಸ್ಥಳಕ್ಕೆ ಧಾವಿಸಿ ದುರಸ್ತಿ ಕಾರ್ಯ ಆರಂಭಿಸಿದೆ. ಮಳೆಯ ನಡುವೆಯೂ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಮಧ್ಯಾಹ್ನದೊಳಗೆ ಹೊಸ ವಾಲ್ವ್ ಅಳವಡಿಸಿ ಸರಬರಾಜು ಪುನಃಸ್ಥಾಪಿಸಲು ಶ್ರಮಿಸುತ್ತಿದ್ದಾರೆ. ಹಂತ 5 ಮೂಲಕ ನೀರು ಪಡೆಯುವ ಪ್ರದೇಶಗಳಿಗೆ ಈ ವ್ಯತ್ಯಯ ಪರಿಣಾಮ ಬೀರುವ ಸಾಧ್ಯತೆ ಇದ್ದು, ಜನತೆ ಸಹಕಾರ ನೀಡಬೇಕೆಂದು ಜಲಮಂಡಳಿ ವಿನಂತಿಸಿದೆ. ಈ ತಾತ್ಕಾಲಿಕ ಅಡಚಣೆಗೆ ವಿಷಾದ ವ್ಯಕ್ತಪಡಿಸಿರುವ ಜಲಮಂಡಳಿ, ಬೇಗನೇ ಸರಬರಾಜು ಸಹಜಗತಿಗೆ ಬರುವಂತಾಗಲಿದೆ ಎಂಬ ಭರವಸೆ ನೀಡಿದೆ. ಜನತೆ ಸಹಕರಿಸಬೇಕೆಂದು ಜಲಮಂಡಳಿ ಕೋರಿದೆ.