'ವೀರಶೈವ ಲಿಂಗಾಯಿತರನ್ನು OBC ಸೇರ್ಪಡೆಗೆ ಅಡ್ಡಿಯಾಗಿದ್ದು ಕೇಂದ್ರ ಸರ್ಕಾರ'
ಪಂಚಮಸಾಲಿ ಬೆನ್ನಲ್ಲೇ ಇದೀಗ ವೀರಶೈವ ಲಿಂಗಾಯಿತರನ್ನು ಒಬಿಸಿಗೆ ಸೇರ್ಪಡೆ ಬಗ್ಗೆ ಕೂಗು ಕೇಳಿಬರುತ್ತಿದ್ದು, ಶ್ರೀಗಳು ಒಬ್ಬರು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ.
ಬೆಂಗಳೂರು, (ಫೆ.13): ವೀರಶೈವ ಲಿಂಗಾಯಿತರನ್ನು ಒಬಿಸಿಗೆ ಸೇರ್ಪಡೆ ಮಾಡಲು ಅಡ್ಡಿಯಾಗಿದ್ದು ಕೇಂದ್ರ ಸರ್ಕಾರ ಎಂದು ದಿಂಗಾಲೇಶ್ವರ ಶ್ರೀ ಗಳು ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬರಲು ಬಹುಸಂಖ್ಯಾತ ವೀರಶೈವ ಲಿಂಗಾಯಿತರ ಬೆಂಬಲ ಕಾರಣವಾಗಿತ್ತು. ಈಗ ವೀರಶೈವ ಲಿಂಗಾಯಿತರಿಗೆ ಅನ್ಯಾಯವಾದರೆ ಅದರ ಪರಿಣಾಮ ಏನಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಪರೋಕ್ಷವಾಗಿ ಬಿಜೆಪಿಗೆ ಎಚ್ಚರಿಕೆ ನೀಡಿದರು.
ಸಿಎಂಗೆ ಮತ್ತೊಂದು ಟೆನ್ಷನ್, ಮೀಸಲಾತಿ ಹೋರಾಟಕ್ಕೆ ಇನ್ನೊಂದು ಸಮುದಾಯ ಅಖಾಡಕ್ಕೆ
ಈ ಹೋರಾಟದಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಪ್ರಮುಖ ಮಠಗಳ ಸ್ವಾಮಿಗಳು ಬಾಯಿ ಮುಚ್ಚಿಕೊಂಡು ಕೂರಬಾರದು. ನಿಮ್ಮ ನಿಲುವು ಏನು ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದರು.
ನಾವು ನಮ್ಮ ಸಮಾಜವನ್ನೇ ಅಲಕ್ಷ್ಯ ಮಾಡಿದ್ದಕ್ಕೆ ಈಗ ಪ್ರಾಯಶ್ಚಿತ್ತ ಅನುಭವಿಸಬೇಕಾಗಿದೆ. ಈಗ ಸಮಸ್ತ ವೀರಶೈವ ಲಿಂಗಾಯಿತರನ್ನು ಒಬಿಸಿಗೆ ಸೇರ್ಪಡೆ ಮಾಡುವವರೆಗೆ ನಾವು ಹೋರಾಟ ಮಾಡಬೇಕು. ಯಾವುದೇ ಪರಿಸ್ಥಿತಿಯಲ್ಲಿ ಸಮುದಾಯ ಒಡೆಯದಂತೆ ನೋಡಿಕೊಂಡಿದ್ದೇವೆ. ಈಗ ಸಮುದಾಯಕ್ಕೆ ಏನುಬೇಕೋ ಅದನ್ನು ಕೊಡಬೇಕಾಗಿದೆ ಎಂದು ಕರೆ ಕೊಟ್ಟರು.
ಅಂದು ಯಡಿಯೂರಪ್ಪ ತುರ್ತು ಸಚಿವ ಸಂಪುಟ ಸಭೆ ಕರೆದು ವೀರಶೈವ ಲಿಂಗಾಯಿತರನ್ನು ಒಬಿಸಿ ಗೆ ಸೇರ್ಪಡೆ ಮಾಡಲು ನಿರ್ಧಾರ ಮಾಡಿದ್ದರು. ಆದರೆ ಇದ್ದಕ್ಕಿದ್ದಂತೆ ಹಿಂದೆ ಸರಿದರು. ಅಂದು ಅವರು ನಿರ್ಧಾರ ಕೈಗೊಂಡಿದ್ದಿದ್ದರೆ ಪಂಚಮಸಾಲಿ ಜಗದ್ಗುರುಗಳು ಕಾಲಿಗೆ ಬೊಬ್ಬೆ ಬರುವ ಹಾಗೆ ಪಾದಯಾತ್ರೆ ಮಾಡಬೇಕಾಗಿರಲಿಲ್ಲ ಎಂದು ಹೇಳಿದರು.
ಯಡಿಯೂರಪ್ಪನವರು ವೀರಶೈವ ಲಿಂಗಾಯಿತರು ಎಂಬ ಕಾರಣಕ್ಕೆ ನಮ್ಮನ್ನು ಒಬಿಸಿ ಗೆ ಸೇರ್ಪಡೆ ಮಾಡುವ ಶಿಫಾರಸ್ಸು ಮಾಡಿ ಎಂದು ನಾವು ಕೇಳಲ್ಲ. ಆದರೆ ವೀರಶೈವ ಲಿಂಗಾಯಿತರ ಪರಿಸ್ಥಿತಿಯನ್ನು ಅವಲೋಕನ ಮಾಡಿ ಬಳಿಕ ಶಿಫಾರಸ್ಸು ಮಾಡಿ. ರಾಜ್ಯ ಸರ್ಕಾರದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸದೆ ಪರಿಗಣಿಸಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.