ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನವಿದೆ. ದಕ್ಷಿಣದ ಇತರೇ ರಾಜ್ಯಗಳು ಈ ಅಂಗಾಂಗ ದಾನದಲ್ಲಿ ಮುಂಚೂಣಿಯಲ್ಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಉಳ್ಳಾಲ (ಆ.02): ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನವಿದೆ. ದಕ್ಷಿಣದ ಇತರೇ ರಾಜ್ಯಗಳು ಈ ಅಂಗಾಂಗ ದಾನದಲ್ಲಿ ಮುಂಚೂಣಿಯಲ್ಲಿದೆ. ಅಂಗಾಂಗ ದಾನಕ್ಕೆ ಯಾವ ಧರ್ಮವು ಮತವೂ ತೊಡಕಾಗದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಕ್ಷಿಣ ಕನ್ನಡ, ಯೇನಪೋಯ ವೈದ್ಯಕೀಯ ಕಾಲೇಜು ದೇರಳಕಟ್ಟೆ ಆಶ್ರಯದಲ್ಲಿ ದೇರಳಕಟ್ಟೆ ಯೇನೆಪೋಯ ವೈದ್ಯಕೀಯ ಕಾಲೇಜಿನ ಎಂಡ್ಯೂರೆನ್ಸ್ ಸಭಾಂಗಣದಲ್ಲಿ ನಡೆದ ಭಾರತೀಯ ಅಂಗಾಂಗ ದಾನ ದಿನಾಚರಣೆ 2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಇದುವರೆಗೂ 4582 ಮೂತ್ರಪಿಂಡಗಳಿಗಾಗಿ , 583 ಯಕೃತ್ ಅಂಗಾಂಗಕ್ಕಾಗಿ, 133 ಹೃದಯಕ್ಕಾಗಿ, 31 ಶ್ವಾಸಕೋಶಕ್ಕಾಗಿ , 13 ಹೃದಯ ಮತ್ತು ಶ್ವಾಸಕೋಶಕ್ಕಾಗಿ, 23 ಯಕೃತ್ ಮತ್ತು ಮೂತ್ರಪಿಂಡ ಕ್ಕಾಗಿ, 21 ಉತ್ತರ ಪಿಂಡ ಮತ್ತು ಮೇದೋಜೀರಕ ಗ್ರಂಥಿಗಾಗಿ, ಒಬ್ಬರು ಮೂತ್ರ ಪಿಂಡ ಮತ್ತು ಹೃದಯಕ್ಕಾಗಿ ಕಾಯುತ್ತಾ ಇದ್ದಾರೆ. ಪುರುಷರಿಗಿಂತ ಮಹಿಳೆಯರು ಅಂಗಾಂಗ ದಾನವನ್ನು ಜಾಸ್ತಿ ಮಾಡುವುದು ಗಮನಾರ್ಹ ಎಂದರು. ಅಂಗಾಂಗ ದಾನ ಮಾಡಿದ ಕುಟುಂಬದ ಓರ್ವ ಸದಸ್ಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿದತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರ್ವಡೆ ವಿನಾಯಕ್ ಕರ್ಭಾರಿ ಎ.ಎನ್, ಯೇನಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ ಬಿ ಎಚ್ ಶ್ರೀಪತಿ ರಾವ್ , ಕುಲಸಚಿವ ಡಾ.ಗಂಗಾಧರ ಸೋಮಯಾಜಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಶಿವಪ್ರಕಾಶ್, ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕ ಡಾ.ದುರ್ಗಾ ಪ್ರಸಾದ್, ಮಹಿಳಾ ಮತ್ತು ಮಕ್ಕಳ ಆರೋಗ್ಯ ಇಲಾಖೆಯ ಉಪನಿರ್ದೇಶಕ ಡಾ.ಬಸವರಾಜ್ ದಬಾಡೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಜೆಸಿಂತಾ ಡಿಸೋಜ, ವಿಭಾಗೀಯ ಸಹನಿರ್ದೇಶಕ ಡಾ.ಮಲ್ಲಿಕಾ ಬಿ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಕಿಶೋರ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಜೀವ ಸಾರ್ಥಕತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೆಂಗಳೂರು ಇದರ ಸಂಚಾಲಕ ಡಾ.ರವಿಶಂಕರ್ ಶೆಟ್ಟಿ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್.ಆರ್ .ತಿಮ್ಮಯ್ಯ ಸ್ವಾಗತಿಸಿದರು. ಜೀವಸಾರ್ಥಕತೆ ಕಾರ್ಯಕ್ರಮದ ಉಪನಿರ್ದೆಶಕ ಡಾ.ಅರುಣ್ ಕುಮಾರ್ ಡಿಪಿ ವಂದಿಸಿದರು.