Fact Check: ರಾಜಸ್ಥಾನದ ಹಳೆ ವೀಡಿಯೊಗೆ ಬೆಂಗ್ಳೂರು ಲಿಂಕ್, ಸುಳ್ಳು ಹರಡದಂತೆ ಪೊಲೀಸರ ಖಡಕ್ ಎಚ್ಚರಿಕೆ..!
ಪ್ರಸ್ತುತ ಪ್ರಸಾರವಾಗುತ್ತಿರುವ ವೈರಲ್ ವೀಡಿಯೊ 2019 ರ ರಾಜಸ್ಥಾನದಲ್ಲಿ ನಡೆದ ಘಟನೆಗೆ ಸಂಭಂದಿಸಿದ್ದು ಹಾಗೂ ಬೆಂಗಳೂರಿಗಾಗಲೀ ಅಥವಾ ಕರ್ನಾಟಕ ರಾಜ್ಯಕ್ಕಾಗಲೀ ಇದು ಸಂಬಂಧಿಸಿರುವುದಿಲ್ಲ. ಇಂತಹ ಸುಳ್ಳು ಸುದ್ದಿಗಳನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಈ ಮೂಲಕ ಕೋರಲಾಗಿದೆ.
ಬೆಂಗಳೂರು(ಜು.01): ಹಿಂದೂಗಳಿಂದ ಸರಕುಗಳನ್ನ ಖರೀದಸದಂತೆ ರಾಜಸ್ಥಾನದ ಮುಸ್ಲಿಂ ವ್ಯಕ್ತಿಯೊಬ್ಬರು ಭಾಷಣ ಮಾಡಿದ ವಿಡಿಯೋ ಬೆಂಗಳೂರಿನಲ್ಲಿ ನಡೆದ ಘಟನೆ ಅನ್ನೋ ರೀತಿ ಸುಳ್ಳು ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಅಗಿದೆ.
ಹಿಂದೂಗಳಿಂದ ಸರಕುಗಳನ್ನ ಖರೀದಸದಂತೆ ಮುಸ್ಲಿಂ ವ್ಯಕ್ತಿಯೊಬ್ಬ ಭಾಷಣ ಮಾಡಿದ್ದ ವಿಡಿಯೋ ಬೆಂಗಳೂರಿಗೆ ಸಂಬಂಧಿಸಿದೆ ಅಂತಾ ಟ್ವಿಟ್ಟರ್ನಲ್ಲಿ ವೈರಲ್ ಆಗಿತ್ತು. ವಿಡಿಯೋ ಅಸಲಿಯತ್ತಿನ ಬಗ್ಗೆ ಕರ್ನಾಟಕ ಪೊಲೀಸರು ಫ್ಯಾಕ್ಟ್ ಚೆಕ್ ಮಾಡಿದ್ದಾರೆ. ಪೊಲೀಸರ ಫ್ಯಾಕ್ಟ್ ಚೆಕ್ ವೇಳೆ ರಾಜಸ್ಥಾನದ ವೀಡಿಯೊ ಅನ್ನೊದು ಬೆಳಕಿಗೆ ಬಂದಿದೆ.
ಸುಳ್ಳು ಸುದ್ದಿ ವಿರುದ್ಧ ಸಿಎಂ ಸಿದ್ದರಾಮಯ್ಯ ಸಮರ..!
ಮುಸ್ಲಿಂ ವ್ಯಕ್ತಿಯೊಬ್ಬರು ಗುಂಪಿನಲ್ಲಿ ನಿಂತು ಭಾಷಣ ಮಾಡುತ್ತಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.ಈ ವಿಡಿಯೋ ಮೂಲತ: ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದ ಘಟನೆಯಾಗಿದ್ದು, ಎಲ್ಲಾ ಮುಸ್ಲಿಮರಿಗೆ ಹಿಂದುಗಳ ಅಂಗಡಿಗಳಿಂದ ಯಾವುದೇ ವಸ್ತುಗಳನ್ನು ಖರೀದಿಸಬಾರದು ಎಂದು ಹೇಳುತ್ತಿರುವ ವಿಡಿಯೋವನ್ನು ಶೇರ್ ಮಾಡುತ್ತಿರುವುದನ್ನು ಗಮನಿಸಲಾಗಿದೆ. ಅಲ್ಲದೇ ಈ ವೀಡಿಯೊವನ್ನು ಟ್ವಿಟ್ಟರ್ ನಲ್ಲಿ ಬೆಂಗಳೂರಿಗೆ ಸಂಬಂಧಿಸಿದೆ ಎಂದು ಆರೋಪಿಸಿ ಈ ಕೆಳಗಿನ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ:” ಅದರ ಸ್ಕ್ರೀನ್ ಶಾಟ್ ಅನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.
ಇದೇ ವಿಡಿಯೋ ಮಾರ್ಚ್ 15, 2023 ರಂದು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು ಸದರಿ ಟ್ವೀಟ್ಗೆ ಉತ್ತರಿಸಿದ ರಾಜಸ್ಥಾನದ ಬಾರ್ಮರ್ ಪೊಲೀಸರು , ಈ ವೀಡಿಯೊ 2019 ರ ವೀಡಿಯೊ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೂ ಇದು ಜೂನ್ 28, 2019 ರಂದು ರಾಜಸ್ತಾನದ ಬೋಜರಿಯಾದ, ಬಿಜರದ್ ಪೊಲೀಸ್ ಠಾಣಾ. ಗಾಗರಿಯಾ ಹಳ್ಳಿಯಾ ವ್ಯಾಪ್ತಿಯ ಒಂದು ಪೆಟ್ರೋಲ್ ಪಂಪ್ ನ ಬಳಿ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದಾಗ ಈ ದುರಂತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು, ಮೂರು ಜನ ಗಾಯಗೊಂಡಿರುತ್ತಾರೆ, ಆಗ ಮೃತ ವ್ಯಕ್ತಿಯ ಕುಟುಂಬದವರು ನಡೆಸಿದ ಪ್ರತಿಭಟನೆಯಲ್ಲಿ ಸಂಬಂಧಿಕರೊಬ್ಬರು ಈ ಮೇಲಿನ ರೀತಿಯಲ್ಲಿ ಭಾಷಣ ಮಾಡಿದ್ದರು. ಮತ್ತು ಆ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಬಾರ್ಮರ್ ಪೋಲೀಸರು ಟ್ವೀಟ್ ಮೂಲಕ ಖಚಿತಪಡಿಸಿರುತ್ತಾರೆ.
ಸುಳ್ಳು ಸುದ್ದಿ ವಿರುದ್ಧ ಮುಲಾಜಿಲ್ಲದೆ ಕ್ರಮ: ಡಿಜಿಪಿ ಅಲೋಕ್ ಮೋಹನ್
ಪ್ರಸ್ತುತ ಪ್ರಸಾರವಾಗುತ್ತಿರುವ ವೈರಲ್ ವೀಡಿಯೊ 2019 ರ ರಾಜಸ್ಥಾನದಲ್ಲಿ ನಡೆದ ಘಟನೆಗೆ ಸಂಭಂದಿಸಿದ್ದು ಹಾಗೂ ಬೆಂಗಳೂರಿಗಾಗಲೀ ಅಥವಾ ಕರ್ನಾಟಕ ರಾಜ್ಯಕ್ಕಾಗಲೀ ಇದು ಸಂಬಂಧಿಸಿರುವುದಿಲ್ಲ. ಇಂತಹ ಸುಳ್ಳು ಸುದ್ದಿಗಳನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಈ ಮೂಲಕ ಕೋರಲಾಗಿದೆ.
ಇತ್ತೀಚೆಗೆ ಸುಳ್ಳು ಸುದ್ದಿಗಳ ಫ್ಯಾಕ್ಟ್ ಚೆಕ್ ಮಾಡುವಂತೆ ಪೊಲೀಸ್ರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದರು.