ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿ ಎಪಿಎಲ್ ಕಾರ್ಡ್‌ಗಳನ್ನಾಗಿ ಪರಿವರ್ತಿಸಲಾಗಿದೆ. ಸ್ವಂತ ವಾಹನ ಅಥವಾ 7.5 ಎಕರೆ ಜಮೀನು ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ನೀಡಲಾಗುವುದಿಲ್ಲ. ಅರ್ಹರಿಗೆ ಬಿಪಿಎಲ್ ಕಾರ್ಡ್ ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರು (ನ.20): ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದಾಗಿರುವ ವಿಚಾರಕ್ಕೆ ಯಾರೂ ಗಾಬರಿ ಆಗುವುದು ಬೇಡ. ಕೇಂದ್ರ ಸರ್ಕಾರ ಕೊಟ್ಟ ಮಾನದಂಡಗಳ ಅನ್ವಯ ಬಿಪಿಎಲ್ ಕಾರ್ಡ್ ರದ್ದುಗೊಳಿಸಿ ಎಪಿಎಲ್ ಕಾರ್ಡ್ ಮಾಡಲಾಗಿದೆ. ಒಂದೊಂದು ಊರಿನಲ್ಲಿ 10 ರಿಂದ 20 ಕಾರ್ಡ್‌ಗಳು ರದ್ದಾಗಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ರದ್ದಾಗಿರುವ ವಿಚಾರಕ್ಕೆ ಯಾರು ಗಾಬರಿ ಬೀಳುವ ಅವಶ್ಯಕತೆ ಇಲ್ಲ. ಸೆಂಟ್ರಲ್ ಗೌರ್ಮೆಂಟ್ ಕ್ರೈಟೀರಿಯಾ ಇದೆ. ಅದರಂತೆ ಪರಿಶೀಲನೆ ಮಾಡ್ತಿದ್ದಾರೆ. ಯಾರು ಬಡವರಿದ್ದಾರೆ ಅವರಿಗೆ ಸಿಗುತ್ತದೆ. ನಮ್ಮ ಸರ್ಕಾರ ಇರೋದೇ ಬಡವರಿಗಾಗಿ. ಸ್ವಲ್ಪ ಕಾರ್ಡ್ ನಲ್ಲಿ ಹೆಚ್ಚು ಕಡಿಮೆ ಆಗಿರಬಹುದು. ಇದಕ್ಕೆ ಎಲ್ಲರು ಸಹಕಾರ ಕೊಡಬೇಕು. ಮನೆಯಲ್ಲಿ ಸ್ವಂತ ಗಾಡಿ ಇರುವವರು, 7.5 ಎಕರೆ ಜಮೀನು ಇರುವವರಿಗೆ ಬಿಪಿಎಲ್ ಕಾರ್ಡ್ ಕೊಡುವಂತಿಲ್ಲ ಎಂದು ಹೇಳಿದರು.

ಒಂದೊಂದು ಊರಲ್ಲಿ ಇಂತಹ 10-20 ಕಾರ್ಡ್‌ಗಳು ರದ್ದು ಆಗಿರಬಹುದು. ಇನ್ ಕಂ ಟ್ಯಾಕ್ಸ್ (ತೆರಿಗೆ ಪಾವತಿ) ಕಟ್ಟುವವರು ಇದ್ದಾರೆ. ಇದರಲ್ಲಿ ಕೆಲವರು ಅಧಿಕಾರಿಗಳು ಕೂಡ ಬಿಪಿಎಲ್ ಕಾರ್ಡ್ ಪಡೆದವರಿದ್ದಾರೆ. ಅಂತವರಿಗೆ ಕಾರ್ಡ್ ಕೊಡಬೇಕಿಲ್ಲ. ಇಂಥವರ ಕಾರ್ಡ್‌ಗಳನ್ನು ಮನೆಗೆ ಹೋಗಿ ನೋಡಿ ರದ್ದು ಮಾಡಬೇಕಿಲ್ಲ. ನಾವು ಶಾಸಕರಿಗೆ ಡಿಟೇಲ್ಸ್ ಕಳಿಸ್ತೇವೆ. ಅವರು ಒಂದು ತಂಡವನ್ನು ಮಾಡುತ್ತಾರೆ. ನಮ್ಮ ಗ್ಯಾರೆಂಟಿ ಟೀಂಗೆ ಜವಾಬ್ದಾರಿ ಕೊಟ್ಟಿದ್ದೇವೆ. ಅವರೆಲ್ಲರು ಮನೆಮನೆಗೆ ಹೋಗ್ತಾರೆ. ಯಾರಿಗೆ ಅನ್ಯಾಯ ಆಗಿದೆ ಸರಿಪಡಿಸಿ ಎಂದಿದ್ದೇವೆ. ಯಾರು ಅರ್ಹರಿದ್ದಾರೆ ಅವರಿಗೆ ಕೊಡ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಬಿಪಿಎಲ್ ಎಂದರೆ ದಟ್ಟ ದರದ್ರರು; ವಿವಾದಾತ್ಮ ಪದ ಬಳಸಿದ ಜೆಡಿಎಸ್ ಎಂಎಲ್‌ಸಿ!

ಇನ್ನು ಸಂಪುಟ ಪುನಾರಚನೆ ವಿಚಾರವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೋಡಿಕೊಳ್ಳುತ್ತಾರೆ. ಇದೀಗ ಅವರು ದೆಹಲಿಗೆ ನಂದಿನಿ‌ ಹಾಲು‌ ಮಾರ್ಕೆಟ್ ಮಾಡೋಕೆ‌ ಹೋಗುತ್ತಿದ್ದಾರೆ. ನಾನು ಅಲ್ಲಿಗೆ ಹೋಗಬೇಕಿತ್ತು. ಆದರೆ, ಮೀನುಗಾರಿಕಾ ಇಲಾಖೆಯ ಒಂದು ಕಾರ್ಯಕ್ರಮದ ನಿಮಿತ್ತ ಮುರ್ಡೇಶ್ವರಕ್ಕೆ ಹೋಗುತ್ತಿದ್ದೇನೆ. ಆದರೆ, ಸಿಎಂ ಅವರಿಗೆ ಮೊದಲೇ ದೆಹಲಿ ಭೇಟಿ ಫಿಕ್ಸ್ ಆಗಿತ್ತು. ನಂದಿನಿ ಹಾಲು ಜಾಸ್ತಿ ಮಾರ್ಕೆಟ್ ಆದರೆ ರೈತರಿಗೆ ಅನುಕೂಲ ಆಗುತ್ತದೆ. ಹಾಗಾಗಿ, ಅವರು ದೆಹಲಿಗೆ ಹೋಗ್ತಿದ್ದಾರೆ. ಇದರ ಹಿಂದೆ ಯಾವ ರಾಜಕೀಯ ಇಲ್ಲ ಎಂದು ತಿಳಿಸಿದರು.