ಕರ್ನಾಟಕ ನಾಡಗೀತೆಯಲ್ಲಿ 'ಬೌದ್ಧ' ಪದವನ್ನು ಮರು ಸೇರ್ಪಡೆ ಮಾಡುವ ಕುರಿತು ಮಹತ್ವದ ಬೆಳವಣಿಗೆ ನಡೆದಿದೆ. ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು (ಜು.15): ಕರ್ನಾಟಕ ನಾಡಗೀತೆಯಲ್ಲಿ 'ಬೌದ್ಧ' ಪದವನ್ನು ಮರು ಸೇರ್ಪಡೆ ಮಾಡುವ ಕುರಿತು ಮಹತ್ವದ ಬೆಳವಣಿಗೆ ನಡೆದಿದೆ. ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನಾಡಗೀತೆಯಲ್ಲಿನ "ಪಾರಸಿಕ ಜೈನರುದ್ಯಾನ" ಎಂಬ ಪದಗಳ ಜತೆಗೆ "ಬೌದ್ಧ" (ಪಾರಸಿಕ ಜೈನಬೌದ್ಧರುದ್ಯಾನ) ಪದವನ್ನೂ ಸೇರಿಸಬೇಕೆಂಬ ಪ್ರಸ್ತಾಪಕ್ಕೆ ಸರ್ಕಾರದ ತಜ್ಞರ ಸಮಿತಿ ಅನುಮೋದನೆ ನೀಡಿ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಸಚಿವರು, ಕುವೆಂಪು ಅವರ ಮೂಲ ನಾಡಗೀತೆಯಲ್ಲಿ 'ಬೌದ್ಧ' ಪದವಿತ್ತು. ಅದನ್ನು ಮತ್ತೆ ನಾಡಗೀತೆಯಲ್ಲಿ ಸೇರಿಸುವಂತೆ ತಜ್ಞರ ಸಮಿತಿ ಶಿಫಾರಸು ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ. ಬೌದ್ಧ ಧರ್ಮವು ಈ ದೇಶದ ಮೂಲ ನಿವಾಸಿಗಳ ಧರ್ಮಗಳಲ್ಲಿ ಒಂದಾಗಿದ್ದು, ವಿಶ್ವಕ್ಕೆ ಶಾಂತಿ, ಸಮಾನತೆ ಮತ್ತು ಮಾನವೀಯತೆಯ ಸಂದೇಶ ನೀಡಿದ ಧರ್ಮವಾಗಿದೆ.

ಅದರ ಸಮಾನತೆಯ ತತ್ವಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳ ಮೇಲೂ ಮಹತ್ವದ ಪ್ರಭಾವ ಬೀರಿದ್ದವು ಎಂದು ಮಹದೇವಪ್ಪ ಅಭಿಪ್ರಾಯಪಟ್ಟಿದ್ದಾರೆ. ಇನ್ನು, 'ಬೌದ್ಧ' ಎಂಬ ಎರಡು ಅಕ್ಷರಗಳನ್ನು ಸೇರಿಸುವುದರಿಂದ ನಾಡಗೀತೆಯ ಲಯ ಅಥವಾ ಉದ್ದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಅಭಿಪ್ರಾಯವನ್ನೂ ತಜ್ಞರ ಸಮಿತಿ ವ್ಯಕ್ತಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು ಅರಿವು ಮೂಡಲಿ ಎಂಬ ಆಶಯ

ಈ ಮೂಲಕ ಬೌದ್ಧ ಧರ್ಮದ ಇತಿಹಾಸ ಮತ್ತು ಅದರ ಮೌಲ್ಯಗಳ ಬಗ್ಗೆ ಸಮಾಜದಲ್ಲಿ ಇನ್ನಷ್ಟು ಅರಿವು ಮೂಡಲಿ ಎಂಬ ಆಶಯವನ್ನೂ ಸಚಿವರು ವ್ಯಕ್ತಪಡಿಸಿದ್ದಾರೆ. ಸರ್ಕಾರದ ತಜ್ಞರ ಸಮಿತಿ ನೀಡಿರುವ ಈ ಶಿಫಾರಸು ಇದೀಗ ರಾಜ್ಯ ಸರ್ಕಾರದ ಪರಿಶೀಲನೆಗೆ ಒಳಪಟ್ಟಿದ್ದು, ಅಂತಿಮ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯತ್ತ ಎಲ್ಲರ ಗಮನ ನೆಟ್ಟಿದೆ.